ರೈತರಿಂದಲ್ಲೇ ಜೀವನ ಮುಖ್ಯವಾಗುತ್ತದೆ. ಮುಂದೊಂದು ದಿನ ಜನರು ಮತ್ತು ಸರ್ಕಾರಗಳು ರೈತರ ಕಾಲು ಹಿಡಿಯುವ ಪರಿಸ್ಥಿತಿ ಬರಲಿದೆ ಎಂದು ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.
ಕೋಲಾರ ತಾಲೂಕಿನ ವೇಮಗಲ್ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹಾಗೂ ವಾಣಿಜ್ಯ ಮಳಿಗೆಗಳ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
“ಇವತ್ತು ರೈತನ ಮಗ ರೈತನಾಗುತ್ತಿಲ್ಲ. ರೈತರು ಎಂದರೆ ಸಮಾಜದಲ್ಲಿ ತಾರತಮ್ಯ ನಡೆಯುತ್ತಿದೆ. ರೈತರಿಂದಲ್ಲೇ ಜೀವನ ಎಂಬುದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ಜತೆಗೆ ರೈತರ ಕಷ್ಟವನ್ನು ಯುವಪೀಳಿಗೆಗೆ ತಿಳಿವಳಿಕೆ ನೀಡಬೇಕು” ಎಂದು ತಿಳಿಸಿದರು.
“ಯಾವುದೇ ಸಹಕಾರಿ ಸಂಸ್ಥೆಯನ್ನು ನ್ಯಾಯ ನೀತಿ ಧರ್ಮದಿಂದ ಅಭಿವೃದ್ಧಿಪಡಿಸಬೇಕು. ದೇಶಕ್ಕೆ ಜನರಿಗೆ ಉತ್ತರ ಆರೋಗ್ಯ, ಶಿಕ್ಷಣದ ಜತೆಗೆ ಕೃಷಿಯನ್ನು ಪೋತ್ಸಾಹ ನೀಡಬೇಕು. ಹಾಲು ಉತ್ಪಾದಕರೂ ಕೂಡ ಉತ್ತಮ ಗುಣಮಟ್ಟದ ಹಾಲು ಸರಬರಾಜು ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು” ಎಂದು ಮನವಿ ಮಾಡಿದರು.
ಮಾಲೂರು ಶಾಸಕ ಹಾಗೂ ಕೋಮುಲ್ ಅಧ್ಯಕ್ಷ ಕೆ ವೈ ನಂಜೇಗೌಡ ಮಾತನಾಡಿ, “ದೇಶದಲ್ಲಿ ಮೊದಲ ಬಾರಿಗೆ ಕೋಮುಲ್ ನೇತೃತ್ವದಲ್ಲಿ 12 ಮೆಗಾ ವ್ಯಾಟ್ ಸೋಲಾರ್ ವಿದ್ಯುತ್ ಘಟಕ ಪ್ರಾರಂಭಿಸಿದ್ದು, ಇದರಿಂದಾಗಿ ತಿಂಗಳಿಗೆ 2 ಕೋಟಿ ರೂಪಾಯಿ ವಿದ್ಯುತ್ ಶುಲ್ಕ ಉಳಿಯಲಿದೆ. ಈ ಹಣವನ್ನು ಜಿಲ್ಲೆಯಲ್ಲಿರುವ ಬಿಎಂಸಿ ಕೇಂದ್ರಗಳಿಗೆ ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ಶೇ.50 ವಿದ್ಯುತ್ ಶುಲ್ಕ ಬರಿಸಲು ಮುಂದಿನ ಆಡಳಿತ ಮಂಡಳಿಯಲ್ಲಿ ತೀರ್ಮಾನಿಸಲಾಗುತ್ತದೆ. ಸಂಘಗಳ ಅಭಿವೃದ್ಧಿ ಆಡಳಿತ ಮಂಡಳಿ ಇದಕ್ಕೆ ಬದ್ದವಾಗಿದೆ” ಎಂದರು
“ಕೋಚಿಮುಲ್ ವಿಭಜನೆಯ ನಂತರ ಇತಿಹಾಸದ ಪುಟಗಳಲ್ಲಿ ದಾಖಲಾಗುವಂತಹ ಕಾರ್ಯಕ್ರಮಗಳನ್ನು ಹಾಗೂ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಸುಮಾರು 220 ಕೋಟಿ ರೂಪಾಯಿ ವೆಚ್ಚದಲ್ಲಿ ಎಂವಿಕೆ ಡೇರಿ, ಹಾಲು ಉತ್ಪಾದಕರ ಮಕ್ಕಳಿಗೆ ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಪಡೆಯಲು ಹಾಸ್ಟೆಲ್ ಸೌಲಭ್ಯ ಒದಗಿಸಲಾಗಿದೆ. ವರ್ಷದಲ್ಲಿ ಮೂರು ಬಾರಿ ರಾಸುಗಳಿಗೆ ವಿಮೆ ಸೌಲಭ್ಯ ಮಾಡಿಸಿ ಪ್ರತಿಯೊಂದು ಹಳ್ಳಿಯಲ್ಲಿ ಸಂಘ ಮಾಡಿ, ಮುಂದಿನ ವರ್ಷದೊಳಗೆ ಕನಿಷ್ಠ 10 ಲಕ್ಷ ಲೀಟರ್ ಹಾಲು ಉತ್ಪಾದನೆಯ ಗುರಿಯಿದೆ” ಎಂದು ತಿಳಿಸಿದರು
ಕೋಮುಲ್ ನಿರ್ದೇಶಕ ಚಂಜಿಮಲೆ ಬಿ ರಮೇಶ್ ಮಾತನಾಡಿ, “ಸಹಕಾರಿ ಸಂಘಗಳಲ್ಲಿ ರಾಜಕೀಯ ಮಾಡಿದರೆ ಯಾರೂ ಉದ್ದಾರವಾಗುವುದಿಲ್ಲ, ರೈತರನ್ನು ಪೋತ್ಸಾಹಿಸಬೇಕು. ಗುಣಮಟ್ಟದ ಹಾಲು ನೀಡುವ ಮೂಲಕ ಸಂಘದ ಬೆಳವಣಿಗೆಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಹಾಸನ | ಪ್ರಾಥಮಿಕ ಶಾಲಾ ಶಿಕ್ಷಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸಾಧನೆಗೈದ ಶಿಕ್ಷಕರು, ನಿವೃತ್ತ ಶಿಕ್ಷಕರಿಗೆ ಅಭಿನಂದನಾ ಸಮಾರಂಭ
ಎಂಎಲ್ಸಿ ಎಂ ಎಲ್ ಅನಿಲ್ ಕುಮಾರ್ ಮಾತನಾಡಿದರು.
ಮಾಜಿ ಸಭಾಪತಿ ವಿ ಆರ್ ಸುದರ್ಶನ್, ಕೋಮುಲ್ ನಿರ್ದೇಶಕ ಷಂಷೀರ್, ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ, ಉಪ ವ್ಯವಸ್ಥಾಪಕ ಡಾ ಮಹೇಶ್, ವೇಮಗಲ್ ಡೇರಿ ಅಧ್ಯಕ್ಷ ವಿ ಎಂ ಶ್ರೀನಿವಾಸ್, ವಿಸ್ತರಣಾಧಿಕಾರಿಗಳಾದ ಸಮೀರ್ ಪಾಷ, ಅಶ್ವಕ್ ಅಹಮದ್, ಮುಖಂಡರಾದ ವೈ ಶಿವಕುಮಾರ್, ವಿ ಎಂ ಮುನಿಯಪ್ಪ, ಖಾಜಿಕಲ್ಲಹಳ್ಳಿ ಮುನಿರಾಜು, ಮಂಜುನಾಥ್, ನಾಗರಾಜ್, ಕಾಂತರಾಜ್, ಮುನಿಯಪ್ಪ, ವೆಂಕಟಾಚಲ, ಡೇರಿ ಉಪಾಧ್ಯಕ್ಷ ನಾರಾಯಣಸ್ವಾಮಿ, ಕಾರ್ಯದರ್ಶಿ ಸಂಜಯ್ ಕುಮಾರ್ ಸೇರಿದಂತೆ ನಿರ್ದೇಶಕರು, ಸಿಬ್ಬಂದಿಗಳು ಇದ್ದರು.