ಸರಕಾರದ ಶುದ್ಧ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಹಲವು ಬಡಾವಣೆಗಳಲ್ಲಿ ಸ್ಥಾಪಿತಗೊಂಡ ಶುದ್ಧ ನೀರಿನ ಘಟಕಗಳು ಹೆಸರಿಗಷ್ಟೇ ತಲೆ ಎತ್ತಿವೆ. ಬಳ್ಳಾರಿಯ ಕಂಪ್ಲಿ ಪಟ್ಟಣದಲ್ಲಿ ಸ್ಥಾಪಿತಗೊಂಡ 11ಕ್ಕೂ ಹೆಚ್ಚು ಶುದ್ಧ ನೀರಿನ ಘಟಕಗಳಲ್ಲಿ ಕೇವಲ 2 ಮಾತ್ರ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವುದರಿಂದ, ಸಾರ್ವಜನಿಕರು ಹಣ ಕೊಟ್ಟು ನೀರಿನ ಬಾಟಲಿ ಖರೀದಿಸಲು ಮುಂದಾಗಿದ್ದಾರೆ. ಅದರಲ್ಲೂ ಕಂಪ್ಲಿಯ ಸರ್ಕಾರಿ ಆಸ್ಪತ್ರೆ ಎದುರಿನಲ್ಲಿ ಸ್ಥಾಪಿತಗೊಂಡ ಶುದ್ಧ ನೀರಿನ ಘಟಕ ವರ್ಷಗಳಿಂದ ನಿಷ್ಕ್ರಿಯವಾಗಿದ್ದು, ಕುಡಿಯುವ ನೀರಿಗಾಗಿ ರೋಗಿಗಳು ನಿತ್ಯ ಪರದಾಡುವಂತಾಗಿದೆ.
ನೀರು ಪ್ರತಿಯೊಂದು ಜೀವಕ್ಕೂ ಆಧಾರ. ಯಾವುದೇ ದೇಶ, ಪ್ರದೇಶಗಳಲ್ಲಿ ಶುದ್ಧವಾದ ನೀರು ಲಭಿಸುವಂತಿರಬೇಕು. ಬೆಳೆಯುತ್ತಿರುವ ಜನಸಂಖ್ಯೆಯ ಜೊತೆಜೊತೆಗೆ ನೀರಿನ ಅವಶ್ಯಕತೆ ಹಾಗೂ ಪೂರೈಕೆಗಳ ಗುಣಮಟ್ಟದಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತಿವೆ. ಬರ ಪೀಡಿತ ರಾಜ್ಯ ಅಥವಾ ಜಿಲ್ಲೆಗಳಲ್ಲಿ ನೀರಿನ ಕೊರತೆ ಹೆಚ್ಚಾಗಿದೆ. ಹವಾಮಾನ ಬದಲಾವಣೆಯಿಂದ ಹಾಗೂ ಮಳೆಯ ಕೊರತೆಯಿಂದ ಕರ್ನಾಟಕ ತೀವ್ರ ಬರವನ್ನು ಎದುರಿಸುವಂತಾಗಿದೆ. ರಾಜ್ಯದಲ್ಲಿ ಇಂದಿನ ನೀರಿನ ಕೊರತೆಗೆ ಅಂತರ್ಜಲದ ಬತ್ತುವಿಕೆಯೂ ಕಾರಣ ಎನ್ನುತ್ತಾರೆ ತಜ್ಞರು.
ಕಂಪ್ಲಿಯ ಸರಕಾರಿ ಆಸ್ಪತ್ರೆ ಮುಂದಿನ ಆವರಣದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಬಂದಾಗಿ ಸುಮಾರು ವರ್ಷಗಳೇ ಆಗಿವೆ. ಆದರೂ, ಪುರಸಭೆಯ ಹಾಗೂ ಸಂಬಂಧಿಸಿದ ಅಧಿಕಾರಿಗಳು ಆ ಘಟಕ ದುರಸ್ತಿ ಮಾಡಿಸದೇ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಹಾಗೂ ಅವರ ಜೊತೆ ಬರುವ ಸಂಬಂಧಿಗಳಿಗೆ ಅಂಗಡಿಗಳಲ್ಲಿ ದುಬಾರಿ ವೆಚ್ಚ ಭರಿಸಿ ನೀರಿನ ಬಾಟಲಿ ಕೊಳ್ಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಏಜೆನ್ಸಿಗಳ ಅಸಮರ್ಪಕ ನಿರ್ವಹಣೆ, ಮೋಟರ್ ದುರಸ್ತಿ, ಫಿಲ್ಟರ್ ಸಮಸ್ಯೆ, ವಿದ್ಯುತ್ ಸಮಸ್ಯೆ, ಪೈಪ್ಲೈನ್ಗಳಲ್ಲಿ ದೋಷ ಮುಂತಾದ ಕಾರಣಗಳಿಂದ ಶುದ್ಧ ನೀರಿನ ಘಟಕಗಳು ಸ್ಥಗಿತಗೊಂಡಿದ್ದರಿಂದ ಕಂಪ್ಲಿಯ ಜನರು ಪರದಾಡುವಂತಾಗಿದೆ. ‘ಗಡುಸು ನೀರನ್ನು ಶುದ್ಧೀಕರಿಸಿ ಸಾರ್ವಜನಿಕರ ಬಳಕೆಗೆ ಸಮರ್ಪಕವಾಗಿ ಒದಗಿಸಲು ಸಾಧ್ಯವಾಗದಿದ್ದರೆ ಘಟಕಗಳನ್ನು ತೋರಿಕೆಗೆ ಕಟ್ಟಿಸುತ್ತಾರೆಯೇ?’ ಎಂದು ಸ್ಥಳೀಯರು ಆಕ್ರೋಶಗೊಳ್ಳುತ್ತಿದ್ದಾರೆ.
ಘಟಕ ನಿರ್ವಹಣೆ ಮಾಡಲು ಏಜೆನ್ಸಿಗಳಿಗೆ ಪುರಸಭೆಯಿಂದ ತಿಂಗಳಿಗೆ ಸಾವಿರಾರು ರೂಪಾಯಿ ಹಣ ಕೊಡಲಾಗುತ್ತದೆ. ಆದರೆ, ಸಮಸ್ಯೆಗಳು ಕಂಡುಬಂದಲ್ಲಿ ಏಜೆನ್ಸಿಯವರು ಪರಿಹಾರ ಒದಗಿಸುವುದಿರಲಿ ಇತ್ತ ತಿರುಗಿಯೂ ನೋಡುವುದಿಲ್ಲ ಎಂಬ ಅರೋಪವೂ ಕೇಳಿಬರುತ್ತಿದೆ. ಅಸಮರ್ಪಕ ಕಾರ್ಯನಿರ್ವಹಣೆ ಹಾಗೂ ಕರ್ತವ್ಯಲೋಪ ಎಸಗುವ ಏಜೆನ್ಸಿಗಳ ವಿರುದ್ಧ ಇಲಾಖೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳದಿರುವುದು ಹಾಗೂ ನಗರಸಭೆಯ ಅಧಿಕಾರಿಗಳು ಗಮನಿಸದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.
ನಾವು ಸಾಮಾನ್ಯವಾಗಿ ಕುಡಿಯುವ ಬೋರ್ವೆಲ್ ನೀರಿನಲ್ಲಿ ನಿಗದಿತ ಪ್ರಮಾಣಕ್ಕಿಂತ ರಾಸಾಯನಿಕ ಮತ್ತು ಬ್ಯಾಕ್ಟೀರಿಯಾ ಪ್ರಮಾಣ ಹೆಚ್ಚಿರುತ್ತದೆ. ಕೆಲವೊಮ್ಮೆ ಸುತ್ತಲಿನ ಪರಿಸರ ಕೂಡ ಇದರ ಮೇಲೆ ಪರಿಣಾಮ ಬೀರುತ್ತದೆ. ರಾಸಾಯನಿಕಯುಕ್ತ ನೀರು ಸೇವಿಸುವ ಗರ್ಭಿಣಿಯರು, ಮಕ್ಕಳು ವೃದ್ಧರು ತೀವ್ರ ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಾರೆ. ಈ ಸಮಸ್ಯೆಗಳನ್ನು ನಿಯಂತ್ರಿಸುವ ಉದ್ದೇಶದಿಂದಲೇ ಸರ್ಕಾರ ಶುದ್ಧ ಕುಡಿಯುವ ನೀರಿನ ಘಟಕ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಈ ಯೋಜನೆಯನ್ನು ಪೂರ್ಣಮಟ್ಟದಲ್ಲಿ ಜಾರಿಗೆ ತರುವಲ್ಲಿ ಸೋತಿದೆ. ಸಂಭಾವ್ಯ ಗಂಭೀರ ಸಮಸ್ಯೆಗಳ ಕುರಿತು ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.

ನಗರದ ಭೂಮಿ ಹಾಗೂ ವಸತಿ ವಂಚಿತ ಹೋರಾಟ ಸಮಿತಿಯ ರಾಜ್ಯ ಸಂಚಾಲಕ ಈದಿನ.ಕಾಮ್ನೊಂದಿಗೆ ಮಾತನಾಡಿ, “ರಾಜ್ಯ ಸರಕಾರ ಶುದ್ಧ ನೀರಿನ ಘಟಕಕ್ಕಾಗಿ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಿ ರಾಜ್ಯದ ಪ್ರತಿ ಹಳ್ಳಿಗಳಲ್ಲಿ ನೀರಿನ ಘಟಕ ತೆರೆಯುತ್ತಿದೆ. ಆದರೆ, ಅವು ಘಟಕಗಳಾಗೇ ಉಳಿಯುತ್ತವೆಯೇ ಹೊರತು ಸಾರ್ವಜನಿಕರ ಬಳಕೆಗೆ ಉಪಯೋಗವಾಗುದಿಲ್ಲ. ಒಂದು ಸಾರಿ ಆ ನೀರಿನ ಘಟಕ ಕೆಟ್ಟು ದುರಸ್ತಿ ಬಂದರೆ ಅದು ಮುಂದೆಂದೂ ಅದು ಬಳಕೆಗೇ ಸಿಗುವುದಿಲ್ಲ. ಮುಂದೊಂದು ದಿನ ಘಟಕ ಶಿಥಿಲವಾಗಿ ಬಿಡುತ್ತದೆ. ಈ ಕುರಿತು ಸಾರ್ವಜನಿಕರ ದೂರಿನನ್ವಯ ಲೋಕಾಯುಕ್ತರು ಭೇಟಿ ನೀಡಿದರೂ ನಗರಸಭೆಯ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಸುಮಾರು 11 ಘಟಕಗಳು ನಗರದಲ್ಲಿವೆ. ಆದರೆ, ಯಾವುದೂ ಜನರ ಬಳಕೆಗೆ ಎಟುಕುತ್ತಿಲ್ಲ. ಅದರಲ್ಲೂ ಸರಕಾರಿ ಆಸ್ಪತ್ರೆಯಲ್ಲಿರುವ ಕುಡಿಯುವ ನೀರಿನ ಘಟಕ ಬಹಳ ಅವಶ್ಯವಿದೆ. ಆದರೆ ಪ್ರಯೋಜನವಿಲ್ಲ” ಎಂದರು.
ಪುರಸಭೆಯ ಅಧಿಕಾರಿ ಮುಖ್ಯ ಕಾರ್ಯನಿರ್ವಾಕ ಅಧಿಕಾರಿ ಮಲ್ಲಿಕಾರ್ಜುನ ಅವರನ್ನು ಈದಿನ.ಕಾಮ್ ಸಂಪರ್ಕಿಸಲಾಗಿ, “ನಗರದಲ್ಲಿ ಒಟ್ಟು 11 ಶುದ್ಧ ಕುಡಿಯುವ ನೀರಿನ ಘಟಕಳಿದ್ದು, ಅವೆಲ್ಲವೂ ಚಾಲನೆಯಲ್ಲಿವೆ. ಯಾವ ಘಟಕವೂ ದುರಸ್ತಿಯಲ್ಲಿಲ್ಲ” ಎಂದು ಹಾರಿಕೆಯ ಉತ್ತರ ಕೊಟ್ಟರು. ‘ಕಂಪ್ಲಿಯ ಸರಕಾರಿ ಆಸ್ಪತ್ರೆಯ ಶುದ್ದ ಕುಡಿಯುವ ನೀರಿನ ಘಟಕದ ಬಗ್ಗೆ ಗಮನಕ್ಕೆ ತಂದಾಗ, “ಅದು ನನ್ನ ಗಮನಕ್ಕೆ ಬಂದಿಲ್ಲ. ನಾನು ಇವತ್ತೆ ಸಿಬ್ಭಂದಿ ಕಳಿಸಿ ಅದನ್ನು ದುರಸ್ತಿ ಮಾಡಿಸುವೆ” ಎಂದು ಹೇಳಿದರು.
ಇದನ್ನೂ ಓದಿ: ಬಳ್ಳಾರಿ | ಬಾಲ್ಯ ವಿವಾಹ ಪ್ರಕರಣ : ಐವರ ಬಂಧನ
ಸಾರ್ವಜನಿಕರ ಮೂಲಭೂತ ಅವಶ್ಯಕತೆಗಳ ಪೂರೈಕೆಗಾಗಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂಬ ಆಶಯದಿಂದಲೇ ಸರ್ಕಾರ ಸಾವಿರಾರು ಕೋಟಿ ರೂಪಾಯಿಗಳನ್ನು ಶುದ್ಧ ನೀರಿನ ಘಟಕಗಳಿಗಾಗಿ ವೆಚ್ಚ ಮಾಡುತ್ತಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಏಜೆನ್ಸಿಗಳ ಅಸಮರ್ಪಕ ನಿರ್ವಹಣೆಯಿಂದ ಈ ಯೋಜನೆಗಳು ಹೆಸರಿಗಷ್ಟೇ ಉಳಿದಿರುವುದು ಖೇದಕರ. ತಕ್ಷಣಕ್ಕೆ ಕ್ರಮ ಕೈಗೊಳ್ಳುವ ಭರವಸೆ ಅಧಿಕಾರಿಗಳಿಂದ ದೊರಕಿದರೂ, ಅವರ ನಿರ್ಲಕ್ಷ್ಯ ಜನರಲ್ಲಿ ವಿಶ್ವಾಸ ಕಳೆದುಹೋಗುವಂತೆ ಮಾಡಿವೆ. ಈ ಹಿನ್ನೆಲೆಯಲ್ಲಿ, ಸಾರ್ವಜನಿಕದನಿ ಸ್ಪಷ್ಟವಾಗಿರುವ ಈ ಸಮಸ್ಯೆಗೆ ಪುರಸಭೆ, ಆರೋಗ್ಯ ಇಲಾಖೆ ಹಾಗೂ ಜನಪ್ರತಿನಿಧಿಗಳು ಗಂಭೀರವಾಗಿ ಸ್ಪಂದಿಸಿ, ಶುದ್ಧ ನೀರಿನ ಘಟಕಗಳ ನಿರ್ವಹಣೆ ಹಾಗೂ ಹಿತರಕ್ಷಣೆಗಾಗಿ ಸಮರ್ಪಿತ ಕ್ರಮ ಕೈಗೊಳ್ಳುವುದು ಅತ್ಯಗತ್ಯ. ಇಲ್ಲವಾದರೆ, “ಶುದ್ಧ ನೀರು” ಎಂಬ ನಾಮಮಾತ್ರದ ಯೋಜನೆಯು ನಿಜ ಜೀವನದಲ್ಲಿ ಜನರಿಗೆ ಅನುಕೂಲಕ್ಕೆ ತಕ್ಕುವುದಿಲ್ಲ.

ಕೇಶವ ಕಟ್ಟಿಮನಿ
ಕೃಷಿ, ಪುಸ್ತಕ ಓದುಗ,
ಫೀಲ್ಡ್ ಕೋರ್ಡಿನೇಟರ್,
ಕೊಪ್ಪಳ ಮತ್ತು ಬಳ್ಳಾರಿ, ಮಾಸ್ ಮೀಡಿಯಾ ಫೌಂಡೇಶನ್