ಕರ್ನಾಟಕ ಪ್ರದೇಶ ಕಾಂಗ್ರೆಸ್ (ಕೆಪಿಸಿಸಿ) ಪ್ರಚಾರ ಸಮಿತಿಗೆ ರಾಜ್ಯದ ಜಿಲ್ಲೆಗಳಿಗೂ ಜಿಲ್ಲಾ ಅಧ್ಯಕ್ಷರನ್ನು ನೇಮಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕೆಕೆಪಿಸಿ ಪ್ರಚಾರ ಸಮಿತಿಗೆ ಕಾಂಗ್ರೆಸ್ ಮುಖಂಡ ಡೆನಿಸ್ ಡಿ’ಸಿಲ್ವಾ ಅವರನ್ನು ನೇಮಿಸಲಾಗಿದೆ.
ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ ಅವರು ಎಲ್ಲ ಜಿಲ್ಲೆಗಳಿಗೂ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷರನ್ನು ನೇಮಿಸಿದ್ದಾರೆ. ಕಳೆದ 25 ವರ್ಷಗಳಿಂದ ಕಾಂಗ್ರೆಸ್ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಡೆನಿಸ್ ಡಿ’ಸಿಲ್ವಾ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶಿಸಿದ್ದಾರೆ.
ನೇಮಕಗಳ ಬಗ್ಗೆ ಪ್ರಕಟಣೆ ನೀಡಿರುವ ವಿನಯ್ ಕುಮಾರ್ ಸೊರಕೆ, “ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಹೊಸ ನೇಮಕಗಳನ್ನು ಅನುಮೋದಿಸಿದ್ದಾರೆ. ತಕ್ಷಣದಿಂದಲೇ ಜವಾಬ್ದಾರಿ ನಿರ್ವಹಣೆಯಲ್ಲಿ ತೊಡಗಲು ಡೆನಿಸ್ ಅವರಿಗೆ ಸೂಚಿಸಲಾಗಿದೆ. ಜಿಲ್ಲಾಮಟ್ಟ, ಕ್ಷೇತ್ರವಾರು, ಬ್ಲಾಕ್ ಮಟ್ಟ, ಪಂಚಾಯತ್ ಮಟ್ಟದಲ್ಲಿ ಪ್ರಚಾರ ಸಮಿತಿಯ ಪದಾಧಿಕಾರಿಗಳನ್ನು ನೇಮಿಸುವ ಕಾರ್ಯ ಆರಂಭಿಸುವಂತೆ ಅವರಿಗೆ ತಿಳಿಸಲಾಗಿದೆ” ಎಂದು ತಿಳಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಗೇಮ್ ಚೇಂಜರ್ ಆಗ್ತಾರಾ ಪ್ರಶಾಂತ್ ಕಿಶೋರ್?
“ಬೂತ್ ಅಧ್ಯಕ್ಷರಾಗಿ, ವಾರ್ಡ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ, ದಕ್ಷಿಣ ಕನ್ನಡ ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿಯಾಗಿ, ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಸಂಯೋಜಕರಾಗಿ ಹೀಗೆ ವಿವಿಧ ಹಂತಗಳಲ್ಲಿ ಡೆನಿಸ್ ಅವರು ಪಕ್ಷ ಸೇವೆ ಸಲ್ಲಿಸಿದ್ದಾರೆ” ಎಂದು ವಿನಯ್ ಕುಮಾರ್ ಸೊರಕೆ ವಿವರಿಸಿದ್ದಾರೆ.
“ಪಕ್ಷಕ್ಕಾಗಿ ಬೂತ್ ಮಟ್ಟದಿಂದ ದುಡಿದಿರುವ ಜಿಲ್ಲಾ ಮುಖಂಡರಾದ ಡೆನಿಸ್ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ನಗರ ಪಾಲಿಕೆ, ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಅತ್ಯುತ್ತಮ ಸಂಘಟಕರಾದ ಅವರು ಸಾಮಾಜಿಕ ಸಾಮರಸ್ಯ ಮೂಡಿಸುವ ಕಾರ್ಯಕ್ರಮಗಳು, ಜಾಗೃತಿ ಅಭಿಯಾನಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕವಾಗಿಯೂ ಗುರುತಿಸಿಕೊಂಡಿದ್ದಾರೆ” ಎಂದು ತಿಳಿಸಿದ್ದಾರೆ.
ಡೆನಿಸ್ ಅವರು ಭಾರತೀಯ ಕಥೋಲಿಕ ಯುವ ಸಂಚಾಲನದ ಮಂಗಳೂರು ಧರ್ಮಪ್ರಾಂತ್ಯದ ಅಧ್ಯಕ್ಷರಾಗಿ ಹಾಗೂ ರಾಜ್ಯಾಧ್ಯಕ್ಷರಾಗಿಯೂ ಸಮುದಾಯದ ಉನ್ನತಿಗೆ ಶ್ರಮಿಸಿದ್ದಾರೆ. ಸಾಕಷ್ಟು ಸಾಮಾಜಿಕ ಚಟುವಟಿಕೆಗಳನ್ನು ಕೂಡ ಆಯೋಜಿಸುತ್ತಾ ಬಂದಿರುವುದರ ಜೊತೆಗೆ ವಿಪತ್ತು ನಿರ್ವಹಣೆ ಪರಿಹಾರ ಕಾರ್ಯಾಚರಣೆಗಳಲ್ಲೂ ಪಾಲ್ಗೊಂಡಿದ್ದಾರೆ.