“ಪ್ರಜಾಪ್ರಭುತ್ವವನ್ನು ಪ್ರೀತಿಸುವ, ಜಾತ್ಯಾತೀತವಾಗಿರಬೇಕು ಎಂದು ಬಯಸುವ, ಸಂವಿಧಾನವನ್ನು ಗೌರವಿಸುವವರಿಗೆ ಈ ಜಾತೀಯತೆ ಹೋಗಬೇಕು ಎನ್ನುವ ಮೂಲಭೂತ ಬಯಕೆ ಇರಬೇಕು ಇಂತಹವರು ಮಾತ್ರ ಎಲ್ಲರಿಗೂ ತಟ್ಟುವ ಬರಹಗಳನ್ನು ನೀಡಬಲ್ಲರು. ಸಮೂಹವನ್ನು ಮುಟ್ಟಬಲ್ಲರು” ಎಂದು ಚಿತ್ರದುರ್ಗದ ಕಾರ್ಯಕ್ರಮದಲ್ಲಿ ಪೊಲೀಸ್ ಮಹಾನಿರೀಕ್ಷಕ ಡಾ.ಬಿಆರ್ ರವಿಕಾಂತೇಗೌಡ ಪ್ರತಿಪಾದಿಸಿದರು.
ಚಿತ್ರದುರ್ಗ ನಗರದ ಪತ್ರಿಕಾಭವನದ ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಲಂಕೇಶ್ ವಿಚಾರ ವೇದಿಕೆ, ಅಂಬೇಡ್ಕರ್ ವಿಚಾರ ವೇದಿಕೆ, ಮೈತ್ರಿ ಪುಸ್ತಕ ಮನೆ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಜಡೇಕುಂಟೆ ಮಂಜುನಾಥ್ ಅವರ “ಕಾಡು ಕಾಯುವ ಮರ” ಕಥಾ ಸಂಕಲನದ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು “ಸಮೂಹ ವಿವೇಕವನ್ನು ನಿರಾಕರಿಸುವ ಕಾಲಘಟ್ಟದಲ್ಲಿರುವ ನಮಗೆ ಸಮೂಹಗಳನ್ನು ಒಗ್ಗೂಡಿಸುವ ಕ್ರಿಯಾಶೀಲತೆ ನಮಗೆ ಬಹಳ ಮುಖ್ಯ. ಈ ಹಿನ್ನೆಲೆಯಲ್ಲಿ ಜಡೇಕುಂಟೆ ಮಂಜುನಾಥ್ರ ಅಪ್ಪನ ತಪ್ಪಡಿ, ದೇಗುಲದ ಗಂಟೆ ಮೊಳಗಲಿಲ್ಲ, ಈ ಕತೆಗಳನ್ನು ಜಾತಿ ವ್ಯವಸ್ಥೆಯ ಬಗ್ಗೆ ಪ್ರತಿರೋಧದ, ಜಿಗುಪ್ಸೆಯ ಮನೋಭಾವ ವ್ಯಕ್ತವಾಗಿದೆ. ತಾರತಮ್ಯ ಭಾವದ ಬಗ್ಗೆ ಸಿಟ್ಟು, ಇದು ನಾಶ ಆಗಬೇಕು ಎನ್ನುವ ಇಚ್ಛೆ ಇದೆ” ಎಂದು ಅಭಿಪ್ರಾಯಪಟ್ಟರು.

“ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಕನ್ನಡದ ಘನ ಕಥಾ ಪರಂಪರೆಯ ಅರಿವಿನ ಜೊತೆಗೆ ಮನಸ್ಸಿಟ್ಟು ಓದಿದವರು ಮಹತ್ವದ ಕೃತಿಗಳನ್ನು ನೀಡಬಲ್ಲರು. ಎಲ್ಲ ಸಾಹಿತ್ಯ ಚಳುವಳಿಗಳಲ್ಲೂ ಬಹಳ ಪ್ರಸಿದ್ಧವಾದ ಪ್ರಾಕಾರ ಇದ್ದರೆ ಅದು ಕಥಾ ಪರಂಪರೆ. ಪ್ರಗತಿಶೀಲರ ನಿರಂಜನ, ಆನಕೃ ಇರಬಹುದು. ನವೋದಯದ ಮಾಸ್ತಿ, ಕುವೆಂಪು ಇರಬಹುದು. ಲಂಕೇಶ್, ಅನಂತಮೂರ್ತಿ ಇರಬಹುದು, ದಲಿತ, ಬಂಡಾಯದ ದೇವನೂರು ಮಹಾದೇವ ಇರಬಹುದು. ಕನ್ನಡದ ಮೊದಲ ಕತೆಗಾರ್ತಿ ಕೊಡಗಿನ ಗೌರಮ್ಮ ಇವರು ಕನ್ನಡದ ಕಥಾ ಸಾಹಿತ್ಯದ ಮೈಲಿಗಲ್ಲುಗಳು. ಇವುಗಳನ್ನು ಅಧ್ಯಯನ ಮಾಡಿದವರು ಸೃಜನಶೀಲ ಬರಹಗಳನ್ನು ನೀಡಬಲ್ಲರು” ಎಂದರು.
“ಮಾಸ್ತಿಯವರ ವೆಂಕಟಿಗ ಹೆಂಡತಿ ಮರೆಯಲಾಗದ ಕತೆ, ಇದರ ಕಥಾ ಹೂರಣ, ಕತೆಯ ನಿರೂಪಣೆ, ಕತೆಯಲ್ಲಿ ಮಾಡುವ ಪ್ರಯೋಗ ಗಮನಿಸಿದಾಗ ಮಾಸ್ತಿ ಎಂತಹ ಮಾಸ್ಟರ್ ರೈಟರ್ ಎಂಬುದು ಅರಿವಿಗೆ ಬರುತ್ತದೆ. ಲಂಕೇಶರ ಉಮಾಪತಿಯ ಸ್ಕಾಲರ್ಶಿಪ್ ಯಾತ್ರೆ ಮನಸ್ಸಿನಲ್ಲಿ ಅನೇಕ ತಲ್ಲಣಗಳನ್ನು ಉಂಟು ಮಾಡುವ ಕತೆ. ಅನಂತಮೂರ್ತಿಯವರ ಕಾರ್ತೀಕ, ದೇವನೂರು ಮಹಾದೇವ ಅವರ ಅಮಾಸ, ಬೆಸರಗಹಳ್ಳಿ ರಾಮಣ್ಣ ಅವರ ಗಾಂಧಿಯಂತ ಕತೆಗಳು ನಮ್ಮ ಮನಸ್ಸಿನ ಧಾರಣಾಶಕ್ತಿಯನ್ನು ಹೆಚ್ಚಿಸುವ ಕತೆಗಳಾಗಿವೆ” ಎಂದು ಅಭಿಪ್ರಾಯಪಟ್ಟರು.

ಕಥಾ ಸಂಕಲನ ಲೋಕಾರ್ಪಣೆ ಮಾಡಿ ಮಾತನಾಡಿದ ಪತ್ರಕರ್ತ ಜಿ.ಎನ್.ಮೋಹನ್, “ಇಂದು ಏನು ಬರೆಯಬೇಕು ಎಂಬುದಕ್ಕಿಂತ ಹೇಗೆ ಬರೆಯಬೇಕು ಎಂಬುದೇ ಮುಖ್ಯವಾಗಿದೆ. ಈ ಪ್ರಕ್ರಿಯೆ ಬದಲಾಗಬೇಕು. ಪತ್ರಕರ್ತರು ಕತೆಗಾರರಾದಾಗ ಕತೆಗಳ ಸ್ವರೂಪ, ಸಾಮಾಜಿಕತೆ ಮತ್ತು ಪರಿಭಾಷೆ ಹೆಚ್ಚು ತೀವ್ರವಾಗುತ್ತದೆ. ಜಡೇಕುಂಟೆ ಮಂಜುನಾಥ್ರವರ ಕಥಾಲೋಕ ತುಂಬಾ ವಿಶಿಷ್ಟವಾದದ್ದು. ಆರಂಭದಿಂದಲೂ ಅವರ ಬರಹಗಳನ್ನು ಗಮನಿಸಿದ್ದೇನೆ. ಅವರಿಂದ ಕನ್ನಡದ ಬರಹ ಪರಂಪರೆಗೆ ಇನ್ನಷ್ಟು ಮೌಲಿಕ ಕೊಡುಗೆ ನಿರೀಕ್ಷಿಸಬಹುದು” ಎಂದರು.
ಲೇಖಕಿ ಪಿ.ಭಾರತೀದೇವಿ ಕಥಾ ಸಂಕಲನದ ಕುರಿತು ಮಾತನಾಡಿ “ಜಡೇಕುಂಟೆ ಮಂಜುನಾಥ್ ನಿಸ್ಸಂದೇಹವಾಗಿ ಸಮರ್ಥ ಕತೆಗಾರ. ಅವರ ಕತೆಗಳಲ್ಲಿ ಕಟ್ಟಿಕೊಡುವ ಸಾಮಾಜಿಕ ಪರಿಸರ, ಭಾಷೆ, ರೂಪಕಗಳು ಅನನ್ಯವಾದವುಗಳು. ಇಲ್ಲಿನ ಕತೆಗಳು ಸ್ಥಿತ್ಯಂತರವನ್ನು ಬಯಸುವ ಕತೆಗಳಾಗಿದ್ದು, ಬಯಲುಸೀಮೆಯ ಪ್ರಾದೇಶಿಕ ಸೊಗಡನ್ನು ಕತೆಗಳಲ್ಲಿ ಸಮರ್ಥವಾಗಿ ಹಿಡಿದಿಟ್ಟಿದ್ದಾರೆ. ಶಕ್ತವಾದ ಸ್ತ್ರೀ ಪಾತ್ರಗಳನ್ನು ಸೃಜಿಸಿದ್ದಾರೆ. ಹಾಗೆಯೇ ಕೆಲವು ಕತೆಗಳನ್ನು ಇನ್ನಷ್ಟು ಬೆಳೆಸುವ ಸಾಧ್ಯತೆಗಳಿದ್ದವು” ಎಂದು ವಿಶ್ಲೇಷಿಸಿದರು.
ಈ ಸುದ್ದಿ ಓದಿದ್ದೀರಾ? ಕಳಪೆ ಬೀಜ-ನಕಲಿ ಗೊಬ್ಬರದ ಹಾವಳಿ; ರೈತರ ನೆರವಿಗೆ ನಿಲ್ಲದ ಇಲಾಖೆ
ಕಾರ್ಯಕ್ರಮದಲ್ಲಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ,
ಎಸ್ಪಿ ರಂಜಿತ್ ಕುಮಾರ್ ಬಂಡಾರು, ವ್ಯಂಗ್ಯ ಚಿತ್ರ ಕಲಾವಿದ ಬಿ.ಜಿ. ಗುಜ್ಜಾರಪ್ಪ, ಉಪನ್ಯಾಸಕ ಆರ್. ಮಂಜುನಾಥ್ ಕೂಡ್ಲಿಗಿ, ಮಾಧ್ಯಮ ಅಕಾಡೆಮಿ ಸದಸ್ಯ ಎಂ.ಎನ್.ಅಹೋಬಳಪತಿ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ದಿನೇಶ್ ಗೌಡಗೆರೆ,ನವೀನ್ ಮಸ್ಕಲ್, ವಿನಾಯಕ ತೊಡರನಾಳ್, ಸಿ.ರಾಜಶೇಖರ್, ದರ್ಶನ್ ಇಂಗಳದಾಳ್, ವೀರೇಶ್ ಅಪ್ಪು, ಡಿ.ಒ. ಮುರಾರ್ಜಿ, ಲೆಫ್ಟಿನೆಂಟ್ ಸ.ರಾ.ಲೇಪಾಕ್ಷ ಸೇರಿದಂತೆ ಹಲವು ಸಾಹಿತ್ಯಾಸಕ್ತರು ಭಾಗವಹಿಸಿದ್ದರು.