ವಾಟ್ಸ್ಯಾಪ್ಗೆ ಬಂದ ಪಿಎಂ ಕಿಸಾನ್ ಹೆಸರಿನ ಲಿಂಕ್ ಒತ್ತಿ ಕಲಬುರಗಿ ನಗರದ ಪಾನಿಪುರ ವ್ಯಾಪಾರಿಯೊಬ್ಬರು ₹3.93 ಲಕ್ಷ ಕಳೆದುಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ.
ಅಪ್ಪಾರಾವ ಸೋಪುರೆ ಹಣ ಕಳೆದುಕೊಂಡ ವ್ಯಾಪಾರಿಯಾಗಿದ್ದಾರೆ. ಅಪಾರಾವ ಅವರು ಮೂಲತಃ ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ತೇಲಗಾಂವ ಗ್ರಾಮದವರು. ಸದ್ಯ ನಗರದ ಬಡೇಪುರ ಕಾಲೊನಿಯಲ್ಲಿ ವಾಸವಾಗಿದ್ದು, ಕಳೆದ 10 ವರ್ಷಗಳಿಂದ ಬಡೇಪುರ ಕಾಲೊನಿಯಲ್ಲಿ ಪಾನಿಪುರಿ ವ್ಯಾಪಾರ ಮಾಡಿಕೊಂಡಿದ್ದಾರೆ.
ʼ2025ರ ಜುಲೈ 15ರಂದು ಸಂಜೆ 6 ಗಂಟೆ ಹೊತ್ತಿಗೆ ಮನೆಯಲ್ಲಿದ್ದಾಗ ನನ್ನ ವಾಟ್ಸ್ಆ್ಯಪ್ಗೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಪಿಎಂ ಕಿಶಾನ್ ಯೋಜನೆಯ ಲಿಂಕ್ ಬಂದಿತ್ತು. ನಮ್ಮ ಹೊಲಗಳಿಗೆ ಸಂಬಂಧಿಸಿದ ವಿಮೆ ಹಣ ಅಥವಾ ಸರ್ಕಾರದ ಹಣಕ್ಕೆ ಸಂಬಂಧಿಸಿದ ಲಿಂಕ್ ಇರಬಹುದು ಎಂದುಕೊಂಡು ಅದನ್ನು ಕ್ಲಿಕ್ ಮಾಡಿದೆ. ತಕ್ಷಣ ನನ್ನ ಮೊಬೈಲ್ ಹ್ಯಾಕ್ ಆಗಿ ನನಗೆ ವಿವಿಧ ಬಗೆಯ ಒಟಿಪಿಗಳು ಬಂದವು. ಗಾಬರಿಯಿಂದ ನನ್ನ ಮೊಬೈಲ್ ಫೋನ್ ಬಂದ್ ಮಾಡಿದ್ದೇನೆ. ಮರುದಿನ ಮೊಬೈಲ್ ಫೋನ್ ಸ್ವೀಚ್ ಆನ್ ಮಾಡಿ ನೋಡಿದಾಗ ಅದರಲ್ಲಿ ಹಲವು ಒಟಿಪಿಗಳು ಬಂದಿದ್ದವು. ನನ್ನ ಮೊಬೈಲ್ ಫೋನ್ ಕೂಡ ಬಂದ್ ಆಗಿತ್ತು. ಮೊಬೈಲ್ ಹ್ಯಾಕ್ ಆಗಿದ್ದರಿಂದ ಮೊಬೈಲ್ ನೆಟ್ವರ್ಕ್ ಬಂದಿಲ್ಲ ಎಂದುಕೊಂಡು ಸುಮ್ಮನಿದ್ದೆ’ ಎಂದು ಅಪ್ಪಾರಾವ ಸೋಪುರೆ ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ʼಈ ಹಿಂದೆ ನಾನು ನಿವೇಶನ ಖರೀದಿ ಸಂಬಂಧ ಪರಿಚಯಸ್ಥರೊಬ್ಬರಿಗೆ ₹3.91 ಲಕ್ಷದ ನನ್ನ ಹೆಸರಿನ ಚೆಕ್ ನೀಡಿದ್ದೆ. ಈ ಮಧ್ಯೆ ಅವರು ನನಗೆ ಕರೆ ಮಾಡಿ, ನಿಮ್ಮ ಖಾತೆಯಲ್ಲಿ ಹಣವಿಲ್ಲ, ನೀವು ನೀಡಿದ ಚೆಕ್ ಬೌನ್ಸ್ ಆಗಿದೆ ಎಂದು ತಿಳಿಸಿದ್ದರು. ನಾನು ಜುಲೈ 22ರಂದು ಎಸ್ಬಿಐ ಬ್ಯಾಂಕ್ಗೆ ಹೋಗಿ ಪರಿಶೀಲಿಸಿದೆ. ಆವಾಗ ಜುಲೈ 16ರಿಂದ ಜುಲೈ 20ರ ತನಕ ₹3,93,500 ನನ್ನ ಬ್ಯಾಂಕ್ ಖಾತೆಯಿಂದ ಯುಪಿಐ ಮೂಲಕ ವರ್ಗಾಯಿಸಿದ ವಿಷಯ ತಿಳಿಯಿತು’ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಬಿಹಾರ | ಬೂತ್ ಮಟ್ಟದ ಪರಿಶೀಲನೆ: ಬಟಾಬಯಲಾದ ಚುನಾವಣಾ ಆಯೋಗ
ಜುಲೈ 16ರಂದು ₹99,500, ಜು.17ರಂದು ₹99,500, ಜು.18ರಂದು ₹98,500 ಹಾಗೂ ಜು.20ರಂದು ₹96,000 ಸೇರಿ ಒಟ್ಟು ₹3,93,500 ಹಣ ಯುಪಿಐ ಮೂಲಕ ಅಕ್ರಮವಾಗಿ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಮೋಸ, ವಂಚನೆ ಮಾಡಿ ಸೈಬರ್ ಕೃತ್ಯ ಎಸಗಿದವರ ವಿರುದ್ಧ ಕಾನೂನು ಕ್ರಮ ಕೈಗೊಂಡು, ನಾನು ಕಳೆದುಕೊಂಡಿರುವ ಹಣ ಮರಳಿ ಕೊಡಿಸಬೇಕೆಂದು ವ್ಯಾಪಾರಿ ಅಪಾರಾವ ಅವರು ನೀಡಿದ ದೂರಿನ ಮೇರೆಗೆ ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಆ.25ರಂದು ಪ್ರಕರಣ ದಾಖಲಾಗಿದೆ.