ಡಾ. ಸರೋಜಿನಿ ಮಹಿಷಿ ನೇತೃತ್ವದ ಸಮಿತಿಯ ಶಿಫಾರಸುಗಳ ಪ್ರಕಾರ, ಕರ್ನಾಟಕದ ಸರ್ಕಾರಿ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಘಟಕಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಶೇ.100ರಷ್ಟು ಮೀಸಲಾತಿ ನೀಡಬೇಕೆಂದು ಒತ್ತಾಯಿಸಲಾಗಿತ್ತು. ಇದೇ ಶಿಫಾರಸು ಕೈಗಾರಿಕಾ ವಲಯಗಳಿಗೂ ಅನ್ವಯವಾಗಬೇಕೆಂಬ ತತ್ವದಡಿ, ಉತ್ತರ ಕನ್ನಡ ಜಿಲ್ಲೆಯ ಹಲವು ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ದೊರೆತಿದೆ.
ಜಿಲ್ಲೆಯ 16 ಸಣ್ಣ ಪ್ರಮಾಣದ ಕೈಗಾರಿಕೆಗಳಲ್ಲಿ ಎ ವರ್ಗದ ಹುದ್ದೆಗಳಲ್ಲಿ ಶೇ.100ರಷ್ಟು ಸ್ಥಳೀಯರಿಗೆ, ಬಿ ವರ್ಗದಲ್ಲಿ ಶೇ.98ರಷ್ಟು, ಸಿ ಮತ್ತು ಡಿ ವರ್ಗಗಳಲ್ಲಿ ಶೇ.100ರಷ್ಟು ಸೇರಿದಂತೆ ಒಟ್ಟು 1200 ಹುದ್ದೆಗಳಲ್ಲಿ 1,197 ಮಂದಿ ಕನ್ನಡಿಗರು ನೇಮಕಗೊಂಡಿದ್ದಾರೆ.
ವಿವಿಧ ವರ್ಗಗಳ ನೇಮಕಾತಿ ಒಟ್ಟಾರೆ ಪ್ರಗತಿ, ಜಿಲ್ಲೆಯ 21 ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳಲ್ಲಿ ಎ ವರ್ಗದ ಹುದ್ದೆಗಳಲ್ಲಿ ಶೇ.73ರಷ್ಟು, ಬಿ ವರ್ಗದಲ್ಲಿ ಶೇ.91ರಷ್ಟು, ಸಿ ವರ್ಗದಲ್ಲಿ ಶೇ.96ರಷ್ಟು, ಡಿ ವರ್ಗದಲ್ಲಿ ಶೇ.100ರಷ್ಟು ಸೇರಿದಂತೆ ಒಟ್ಟು 4,267 ಹುದ್ದೆಗಳಲ್ಲಿ 4,118 ಹುದ್ದೆಗಳನ್ನು ಸ್ಥಳೀಯರು ಪಡೆಯುವ ಮೂಲಕ ಜಿಲ್ಲೆಯಲ್ಲಿ ಶೇ.97ರಷ್ಟು ಉದ್ಯೋಗಾವಕಾಶವನ್ನು ಸ್ಥಳೀಯರಿಗೆ ಒದಗಿಸಲಾಗಿದೆ.
ಕೇಂದ್ರ ಸರಕಾರದ ಘಟಕಗಳಲ್ಲಿ ಶಿಫಾರಸು:
ಸರೋಜಿನಿ ಮಹಿಷಿ ವರದಿ ಪ್ರಕಾರ ಕೇಂದ್ರ ಘಟಕಗಳಲ್ಲಿ ಗ್ರೂಪ್ ‘ಬಿ’ ಹುದ್ದೆಗಳಲ್ಲಿ ಶೇ.80ರಷ್ಟು ಕನ್ನಡಿಗರಿಗೆ ಮೀಸಲಾತಿ, ಗ್ರೂಪ್ ‘ಎ’ ಹುದ್ದೆಗಳಲ್ಲಿ ಶೇ.65ರಷ್ಟು ಮೀಸಲಾತಿ, ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ.5 ಮೀಸಲಾತಿ ಹಾಗೂ ಬಹುರಾಷ್ಟ್ರೀಯ ಕಂಪನಿಗಳಲ್ಲಿಯೂ ಮೀಸಲಾತಿ ನೀಡುವಂತೆ ಶಿಫಾರಸು ಮಾಡಲಾಗಿದೆ.
ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಕನ್ನಡಿಗರಿಗೆ ಮತ್ತು ಸ್ಥಳೀಯರಿಗೆ ಉದ್ಯೋಗಾವಕಾಶದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಇತ್ತೀಚೆಗೆ ನಡೆದ ಸಭೆಯಲ್ಲಿ ಕೈಗಾ ಅಧಿಕಾರಿಗಳು ಮಾಹಿತಿಯನ್ನು ನೀಡಿದರು. ಕೈಗಾ ಘಟಕದ 6 ವಿಭಾಗಗಳಲ್ಲಿ ಒಟ್ಟು 2,057 ಹೊರಗುತ್ತಿಗೆ ನೌಕರರಲ್ಲಿ 1,739 ಮಂದಿ ರಾಜ್ಯದವರು(ಶೇ.85.54).
ಇದರಲ್ಲಿ ಉತ್ತರ ಕನ್ನಡ ಜಿಲ್ಲೆಯ 1,601 ಜನರಿಗೆ ಉದ್ಯೋಗ (ಶೇ.92.06) ಲಭಿಸಿದೆ. ಬಿ ಮತ್ತು ಸಿ ಗುಂಪಿನ ಹುದ್ದೆಗಳಲ್ಲಿ ಶೇ.81.3ರಷ್ಟು ಮಟ್ಟದಲ್ಲಿ ಕನ್ನಡಿಗರಿಗೆ ಅವಕಾಶ ಸಿಕ್ಕಿದೆ.
ಇಲಾಖೆಯ ನಿಯಂತ್ರಣ ಮತ್ತು ಸೂಚನೆ
ಜಿಲ್ಲಾ ಕೈಗಾರಿಕಾ ಇಲಾಖೆ ಅಧಿಕಾರಿಗಳು ಕೈಗಾರಿಕೆಗಳಿಂದ ಮಾಹಿತಿ ಸಂಗ್ರಹಣೆ ನಡೆಸುತ್ತಿದ್ದು, ಅಗತ್ಯವಿರುವಲ್ಲಿ ಸರೋಜಿನಿ ಮಹಿಷಿ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಕೈಗಾರಿಕೆಗಳಿಗೆ ಸೂಚನೆ ನೀಡುತ್ತಿದ್ದಾರೆ. ಅನುಷ್ಠಾನದ ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಉತ್ತರ ಕನ್ನಡ ಜಿಲ್ಲೆಯಲ್ಲಿನ ಕೈಗಾರಿಕೆಗಳಲ್ಲಿ ಡಾ.ಸರೋಜಿನಿ ಮಹಿಷಿ ವರದಿಯನ್ವಯ ಸ್ಥಳೀಯರಿಗೆ ಉದ್ಯೋಗ ನೀಡಿರುವ ಕುರಿತಂತೆ ಪ್ರತೀ ಮೂರು ತಿಂಗಳಿಗೊಮ್ಮೆ ಎಲ್ಲ ಕೈಗಾರಿಕೆಗಳಿಂದ ಮಾಹಿತಿ ಸಂಗ್ರಹಿಸಲಾಗುವುದು. ವರದಿಯ ಅನುಷ್ಠಾನದಲ್ಲಿ ಲೋಪವಾಗಿದ್ದಲ್ಲಿ ಸಂಬಂಧಪಟ್ಟ ಕೈಗಾರಿಕೆಗಳ ವಿರುದ್ದ ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದು” ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ್ ನಾಯ್ಕ ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಅಂಗಡಿ ಮಾಲೀಕರು ಯೂರಿಯಾ ಗೊಬ್ಬರವನ್ನು ರೈತರಿಗೆ ಸಕಾಲದಲ್ಲಿ ನೀಡಬೇಕು: ಎಸಿ ಗುರುನಾಥ ದಡ್ಡೆ
ಒಟ್ಟಿನಲ್ಲಿ, ಕೈಗಾರಿಕಾ ವಲಯದಲ್ಲಿ ಸರೋಜಿನಿ ಮಹಿಷಿ ವರದಿ ಪ್ರಕಾರ ಸ್ಥಳೀಯರಿಗೆ ಉದ್ಯೋಗ ನೀಡುವಲ್ಲಿ ರಾಜ್ಯದ ಇತರ ಜಿಲ್ಲೆಗಳಿಗಿಂತ ಉತ್ತರ ಕನ್ನಡ ಜಿಲ್ಲೆ ಮುಂಚೂಣಿಯಲ್ಲಿದೆ ಎಂಬುದನ್ನು ಅಂಕಿಅಂಶಗಳು ತಿಳಿಸುತ್ತವೆ.