ಬೀದರ್ ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಡಿಪೋ-1ರಲ್ಲಿ ನಿಲ್ಲಿಸಿದ್ದ ಸ್ಲೀಪರ್ ಕೋಚ್ ಬಸ್ನಲ್ಲಿ ಚಾಲಕ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೀದರ್ ತಾಲ್ಲೂಕಿನ ಆಣದೂರ ಗ್ರಾಮದ ರಾಜಕುಮಾರ (59) ಮೃತ ಚಾಲಕ. ‘ಬೀದರ್ ಟು ಬಳ್ಳಾರಿ ಸ್ಲೀಪರ್ ಕೋಚ್ ಬಸ್ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದರು. ಡಿಪೋ-1ರಲ್ಲಿ ನಿಲ್ಲಿಸಿದ್ದ ಬಸ್ಸಿನೊಳಗೆ ಬುಧವಾರ ರಾತ್ರಿ ನೇಣು ಹಾಕಿಕೊಂಡು ಜೀವ ಬಿಟ್ಟಿದ್ದಾನೆ.
“ಐದು ತಿಂಗಳಲ್ಲಿ ಅವರು ಕೆಲಸದಿಂದ ನಿವೃತ್ತರಾಗುವವರಿದ್ದರು. ಅವರ ಮೃತ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಇನ್ನಷ್ಟೇ ಆತ್ಮಹತ್ಯೆಗೆ ಕಾರಣ ಗೊತ್ತಾಗಬೇಕಿದೆ” ಎಂದು ಬೀದರ್ನ ನೂತನ ನಗರ ಪೊಲೀಸ್ ಠಾಣೆ ಪೊಲೀಸರು ತಿಳಿಸಿದ್ದಾರೆ.
ಕೆಎಸ್ಆರ್ಟಿಸಿ ನೌಕರರ ಜಂಟಿ ಹೋರಾಟ ಸಮಿತಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಮೇಲಧಿಕಾರಿಗಳ ಕಿರುಕುಳದಿಂದ ಬೇಸತ್ತು ರಾಜಕುಮಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡಬೇಕು. ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ನೌಕರಿ ಕೊಡಬೇಕು” ಎಂದು ಆಗ್ರಹಿಸಿದೆ.