ಕರ್ತವ್ಯಲೋಪ ಎಸಗಿದ ಶಹಾಬಾದ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಯನ್ನು ಕೂಡಲೇ ಅಮಾನತು ಮಾಡಬೇಕೆಂದು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಶಹಾಬಾದ್ ಪಟ್ಟಣದ ಶಿಶು ಅಭಿವೃದ್ಧಿ ಕಚೇರಿ ಎದುರುಗಡೆ ಒಂದು ದಿನದ ಸಾಂಕೇತಿಕ ಧರಣಿ ನಡೆಸಲಾಯಿತು.
ದಸಂಸ ರಾಜ್ಯ ಸಂ.ಸಂಚಾಲಕ ಮರಿಯಪ್ಪ ಹಳ್ಳಿ ನೇತ್ರತ್ವದಲ್ಲಿ ಶಹಾಬಾದ ಪಟ್ಟಣದ ಬಸವೇಶ್ವರ ವೃತ್ತದಿಂದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಿಗೆ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ʼ2021-22ರಲ್ಲಿ 5 ಅಂಗನವಾಡಿಗಳಿಗೆ ಸಹಾಯಕರ ಅರ್ಜಿಗಳನ್ನು ಕರೆಯಲಾಗಿತ್ತು, ಅರ್ಜಿಗಳನ್ನು ಸ್ವೀಕರಿಸಿ ಅವರನ್ನು ಆಯ್ಕೆ ಅಥವಾ ತಿರಸ್ಕಾರ ಮಾಡದೆ 3-4 ವರ್ಷ ಅರ್ಜಿಗಳನ್ನು ಹಾಗೆ ಉಳಿಸಿಕೊಂಡಿದ್ದು, ಈಗಾಗಲೇ ಅರ್ಜಿದಾರರ ಪ್ರಕ್ರಿಯೆಯಲ್ಲಿ ಪ್ರಮಾಣ ಪತ್ರಗಳನ್ನು ಜಿಪಿಆರ್ಎಸ್ ಫೋಟೊ ನಗರ ಸಭೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಂದ ಪೂರ್ಣಗೊಳಿಸಿದ್ದಾರೆ. ಈ ಹಿಂದೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ವಯಸ್ಸು ಮೀರಿದೆ, ಈಗ ಮತ್ತೆ ಹೊಸ ಅರ್ಜಿಗಳನ್ನು ಕರೆಯುವದು ಎಷ್ಟು ಸಮಂಜಸʼ ಎಂದು ಮುಖಂಡರು ಪ್ರಶ್ನಿಸಿದರು.
ʼಸರ್ಕಾರದ ನಿಯಮಗಳ ಪ್ರಕಾರ ಯಾವ ಬಡಾವಣೆಯಲ್ಲಿ ಯಾವ ಸಮುದಾಯದ ಜನ ಹೆಚ್ಚಾಗಿರುತ್ತಾರೋ ಆ ಅಂಗನವಾಡಿ ಕೇಂದ್ರಕ್ಕೆ ಆ ಸಮುದಾಯದ ಮೀಸಲಾತಿ ನೀಡಬೇಕೆಂಬ ನಿಯಮವಿದೆ. ಆದರೆ ಮರತೂರು ಗ್ರಾಮ ಅಂಗನವಾಡಿ ಕೇಂದ್ರ ಎರಡರಲ್ಲಿ ಪರಿಶಿಷ್ಟರ ಓಣಿಯಲ್ಲಿ ಸಾಮಾನ್ಯ ಜನರಿಗೆ ಮೀಸಲಿಟ್ಟು ದಲಿತರಿಗೆ ಅನ್ಯಾಯ ಮಾಡಿದ್ದಾರೆ. ಸರ್ಕಾರ ಮಕ್ಕಳ ಅಪೌಷ್ಟಿಕತೆ ಹೋಗಲಾಡಿಸಲು ನೀಡುವ ಮೊಟ್ಟೆ, ಹಾಲಿನ ಪುಡಿ 3 ತಿಂಗಳಿನಿಂದ ಅಂಗನವಾಡಿ ಕೇಂದ್ರಕ್ಕೆ ವಿತರಿಸಿಲ್ಲ, ಗರ್ಬಿಣಿಯರಿಗೆ ಪೌಷ್ಟಿಕ ಆಹಾರ ಸಾಮಗ್ರಿ ನೀಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. 5 ವರ್ಷ ಸೇವೆ ಸಲ್ಲಿಸಿದ ಮಹಿಳಾ ಮೇಲ್ವಾಚಾರಕರನ್ನು ಕೂಡಲೇ ಬೇರೆ ಕಡೆ ವರ್ಗಾವಣೆ ಮಾಡಬೇಕೆಂದುʼ ಆಗ್ರಹಿಸಿದರು.

2024-25 ಸಾಲಿನ ಮರತೂರ ಗ್ರಾಮ ಅಂಗನವಾಡಿ ಕೇಂದ್ರ-2 ಭೀಮನಗರ ಏರಿಯಾದಲ್ಲಿ ಸರಕಾರದ ಮಾರ್ಗಸೂಚಿ, ನಿಯಮಗಳ ಪ್ರಕಾರ ಶೇ.40 ರಷ್ಟು ಜನ ಪರಿಶಿಷ್ಟ ಜಾತಿ ಜನರು ಇದ್ದರು ಕೂಡ ಅದು ಪರಿಗಣಿಸದೆ ಉದ್ದೇಶ ಪೂರಕವಾಗಿ ಸಾಮಾನ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ನೇಮಕ ಮಾಡಿರುತ್ತಾರೆ. ಇದು ಆ ಕೇಂದ್ರದ ಪರಿಶಿಷ್ಟ ಜಾತಿ ವರ್ಗದ ಮಹಿಳೆಯರಿಗೆ ಅನ್ಯಾಯವಾಗುತ್ತದೆ ಸರಕಾರದ ನಿಯಮವಳಿ ಮೀರಿ ಆಯ್ಕೆ ಮಾಡಿದ ಪ್ರಸ್ತುತ ಅಭ್ಯರ್ಥಿಯನ್ನು ರದ್ದು ಮಾಡಿ ಸದರಿ ಕೇಂದ್ರದ ಜನರಿಗೆ ನ್ಯಾಯ ಒದಗಿಸಲು ಒತ್ತಾಯಿಸಿದರು.
‘ಪ್ರತಿ ತಿಂಗಳ ಮಕ್ಕಳಿಗೆ ಗುಣಮಟ್ಟದ ಆಹಾರ ಧಾನ್ಯ ವಿತರಣೆ ಆಗಬೇಕು. ಮಕ್ಕಳಿಗೆ ವಿತರಿಸಬೇಕಾದ ಗುಣಮಟ್ಟದ ಮೊಟ್ಟೆ ಹಾಗೂ ಹಾಲಿನ ಪೌಡರ್ ಸುಮಾರು 4-5 ತಿಂಗಳಿಂದ ನೀಡಲಿಲ್ಲ ಎಂದು ಆರೋಪಿಸಿದ ಧರಣಿ ನಿರತರು, ʼಒಂದು ವೇಳೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಪಂದಿಸದೆ ಹೋದರೆ ಧರಣಿ ಸತ್ಯಾಗ್ರಹ ಮುಂದುವರಿಯುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ : ಬೀದರ್ | ಮಳೆ ಅಬ್ಬರ, ನದಿ, ಕೆರೆಗಳಲ್ಲಿ ಉಬ್ಬರ, ಜನಜೀವನ ತತ್ತರ!
ಪ್ರತಿಭಟನೆಯಲ್ಲಿ ಚಂದ್ರಾಕಾಂತ ಪಾಟೀಲ್, ರೇಷ್ಮಾ ನಂದೂರ್, ಸತೀಶ್ ಕೋಬಾಳಕರ್, ಪಿ.ಎಸ್.ಮೇತ್ರಿ, ಮಹ್ಮದ್ ಮಸ್ತಾನ್, ಅಬ್ದಲ್ ಗನಿ ಸಾಬೀರ್, ಮಲ್ಲಿಕಾರ್ಜುನ ಕಟ್ಟಿ, ಶೇಖ ಉಸ್ಮಾನ್ ಬಾಬು, ಶಿವಶಾಲ ಪಟ್ಟಣಕರ್, ನಾಗಪ್ಪ ರಾಯಚೂರಕರ್, ಮಲ್ಲಣ್ಣ ಮಸ್ಕಿ, ಮರೆಪ್ಪ ಬಣಮಿಕರ್, ನರಸಿಂಹಲು ರಾಯಚೂರಕರ್, ಮನೋಹರ್ ಕೊಳೂರ್, ಮಲ್ಲಿಕಾರ್ಜುನ ಹಳ್ಳಿ, ಮೋಹನ್ ಹಳ್ಳಿ, ಮಲ್ಲಿಕಾರ್ಜುನ ದೊಡ್ಡಿ, ಬಸವರಾಜ್ ಕಣದಾಳ, ಬಸವರಾಜ್ ಮಯೂರ್ ಮತ್ತಿತರರು ಉಪಸ್ಥಿತರಿದ್ದರು.