ದಾವಣಗೆರೆ ನಗರದ ಮಟ್ಟಿಕಲ್ನ ಗಣೇಶಮೂರ್ತಿ ಪ್ರತಿಷ್ಠಾಪನಾ ಸ್ಥಳದಲ್ಲಿ ಅಳವಡಿಸಿದ್ದ ವಿವಾದಿತ ಫ್ಲೆಕ್ಸ್ ತೆರವುಗೊಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಗುರುವಾರ ರಾತ್ರಿ ನಿರ್ಮಾಣವಾಗಿದ್ದ ಬಿಗುವಿನ ವಾತಾವರಣ ಇಂದು ಮುಂಜಾನೆ ತಿಳಿಗೊಂಡಿದ್ದು, ಶಾಂತಿಯುತ ವಾತಾವರಣ ನಿರ್ಮಾಣವಾಗಿದೆ.
ಶಿವಾಜಿ ಮಹಾರಾಜ್ ಹಾಗೂ ಅಫ್ಜಲ್ ಖಾನ್ ನಡುವಿನ ಯುದ್ಧದ ಸನ್ನಿವೇಶದ ಆಕ್ಷೇಪಾರ್ಹ ಪ್ಲೆಕ್ಸ್ ತೆರವುಗೊಂಡಿದ್ದು, ಈ ಸ್ಥಳದಲ್ಲಿ ಶಿವಾಜಿಯ ಬೃಹತ್ ಚಿತ್ರವನ್ನು ಅಳವಡಿಸಲಾಗಿದೆ.
ನಗರದ ವೀರ ಸಾವರ್ಕರ್ ಯುವಕರ ಸಂಘ ಮಟ್ಟಿಕಲ್ನಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣೇಶ ಮೂರ್ತಿಯ ಪೆಂಡಾಲ್ ಬಳಿ ಇತಿಹಾಸದ ಮಹನೀಯರ ಬೃಹತ್ ಗಾತ್ರದ ಪ್ಲೆಕ್ಸ್ಗಳನ್ನು ಅಳವಡಿಸಲಾಗಿತ್ತು.

ಶಿವಾಜಿ ಹಾಗೂ ಅಫ್ಜಲ್ ಖಾನ್ ನಡುವಿನ ಯುದ್ಧದ ಸನ್ನಿವೇಶದ ಪ್ಲೆಕ್ಸ್ಗೆ ಆಕ್ಷೇಪ ವ್ಯಕ್ತಪಡಿಸಿದ ಕೆಲವರು, ಕೋಮುಭಾವನೆ ಕೆರಳಿಸುವಂತಿರುವ ಫ್ಲೆಕ್ಸ್ ತೆರವುಗೊಳಿಸುವಂತೆ ಪೊಲೀಸರಿಗೆ ದೂರು ನೀಡಿದ್ದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಡಿಜಿಟಲ್ ಆರೆಸ್ಟ್ ಪ್ರಕರಣ; ಪೊಲೀಸರಿಂದ ತನಿಖೆ, ಆರೋಪಿಯ ಬಂಧನ
ಗುರುವಾರ ರಾತ್ರಿ ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು, ವಿವಾದಿತ ಫ್ಲೆಕ್ಸನ್ನು ತೆರವುಗೊಳಿಸುವಂತೆ ಗಣೇಶ ಉತ್ಸವ ಸಮಿತಿಗೆ ಸೂಚಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ನೂರಾರು ಯುವಕರು, ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದರು. ಇದರಿಂದ ಗುರುವಾರ ಮಧ್ಯರಾತ್ರಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸಂಘಪರಿವಾರದ ಸಂಘಟನೆಯ ಮುಖಂಡರೊಂದಿಗೆ ಸುದೀರ್ಘ ಚರ್ಚೆ ನಡೆಸಿದ ಪೊಲೀಸರು ವಾತಾವರಣ ತಿಳಿಗೊಳಿಸಿದ್ದಾರೆ.