ಬೆಂಗಳೂರು, ಬೆಳಗಾವಿ, ಮತ್ತು ಉತ್ತರ ಕನ್ನಡದ ದಾಂಡೇಲಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಬೆಲೆಬಾಳುವ ಬೈಕ್ಗಳನ್ನು ಕಳವು ಮಾಡುತ್ತಿದ್ದ ಅಂತರ-ಜಿಲ್ಲಾ ಬೈಕ್ ಕಳ್ಳರ ತಂಡವನ್ನು ದಾಂಡೇಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಒಟ್ಟು 6 ಕಳವು ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳನ್ನು ಅಭಿಷೇಕ ವಿ. ಪವಾರ್, ವಿಲ್ಸನ್ ಜೆ, ಗೌಸ್ ಮೊಹಮ್ಮದ್ ಬೇಪಾರಿ, ದೇವೇಂದ್ರ ಎಲ್. ಲಮಾಣಿ, ಮತ್ತು ಮಹಮ್ಮದ್ ತೌಸಿಫ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿಗೆ ಸೇರಿದವರಾಗಿದ್ದಾರೆ. ಇವರನ್ನು ಆಗಸ್ಟ್ 26 ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿಸಲಾಗಿದೆ.
ಅಲೈಡ್ ರಸ್ತೆಯ ನಿವಾಸಿ ಹುಸೇನ್ ಸಾಬ್ ಎಂಬುವವರು ತಮ್ಮ ಬೈಕ್ ಕಳುವಾದ ಬಗ್ಗೆ ದೂರು ನೀಡಿದ ನಂತರ ದಾಂಡೇಲಿ ನಗರ ಠಾಣೆಯ ಪಿಎಸ್ಐ ಅಮೀನ್ ಸಾಬ್ ಅತ್ತರ್ ಅವರು ತನಿಖೆ ಕೈಗೊಂಡರು. ಎಸ್ಪಿ ದೀಪನ್ ಅವರ ಮಾರ್ಗದರ್ಶನದಲ್ಲಿ ಈ ಕಳ್ಳರ ತಂಡವನ್ನು ಪತ್ತೆ ಹಚ್ಚಲಾಯಿತು.
ವಶಪಡಿಸಿಕೊಂಡ ಬೈಕ್ಗಳಲ್ಲಿ ರಾಯಲ್ ಎನ್ಫೀಲ್ಡ್, ಎಚ್ಎಫ್ ಡಿಲಕ್ಸ್, ಮತ್ತು ಹೀರೋ ಹೋಂಡಾ ಸೇರಿದಂತೆ ವಿವಿಧ ಕಂಪನಿಗಳ ವಾಹನಗಳಿವೆ. ಈ ಬೈಕ್ಗಳು ಬೆಂಗಳೂರು, ಬೆಳಗಾವಿ, ದಾಂಡೇಲಿ ಮತ್ತು ಇತರ ಜಿಲ್ಲೆಗಳಲ್ಲಿ ನೋಂದಣಿಯಾಗಿವೆ.
ಇದನ್ನೂ ಓದಿ: ಉತ್ತರ ಕನ್ನಡ | ಡಾ.ಸರೋಜಿನಿ ಮಹಿಷಿ ವರದಿ: ಕೈಗಾರಿಕಾ ವಲಯದಲ್ಲಿ ಕನ್ನಡಿಗರಿಗೆ ಶೇ.97ರಷ್ಟು ಉದ್ಯೋಗಾವಕಾಶ
ಡಿವೈಎಸ್ಪಿ ಶಿವಾನಂದ ಮದರಕಂಡಿ, ಸಿಪಿಐ ಜಯಪಾಲ್ ಪಾಟೀಲ್, ಪಿಎಸ್ಐಗಳಾದ ಅಮೀನ್ ಸಾಬ್ ಮತ್ತು ಕಿರಣ್ ಪಾಟೀಲ್, ಹಾಗೂ ಇತರ ಪೊಲೀಸ್ ಸಿಬ್ಬಂದಿಗಳನ್ನು ಒಳಗೊಂಡ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಪೊಲೀಸರ ಕಾರ್ಯವನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.