“1919ರಲ್ಲಿ ಕೊಲಂಬಿಯಾ ವಿ.ವಿ ಯಲ್ಲಿ ಉನ್ನತ ಶಿಕ್ಷಣ ಮುಗಿಸಿ ಭಾರತಕ್ಕೆ ಬಂದಿದ್ದರು. ಆಗಲೇ ಆಳವಾದ ಅಧ್ಯಯನ ಮಾಡಿದ ಅಂಬೇಡ್ಕರ್ ಕೊಲಂಬಿಯಾದಲ್ಲಿಯೇ 1916 ರಲ್ಲಿ ಜಾತಿಗಳ ಉಗಮ ಮತ್ತು ವಿಕಾಸ ಎನ್ನುವ ವಿಷಯದ ಮೇಲೆ ಪ್ರಬಂಧ ಮಂಡಿಸಿದ್ದರು. ನೂರು ವರ್ಷಗಳ ಹಿಂದೆಯೇ ಭಾರತದಲ್ಲಿ ಯಾವ ಜಾತಿಯು ಸಮವಲ್ಲ. ಯಾವ ಜಾತಿಗಳೂ ಹೋಮೋಜೀನಿಯಸ್ ಅಲ್ಲ, ಅವು ಹೆಟ್ರೋ ಜೀನಿಯಸ್ ಎಂದು ಪ್ರತಿಪಾದಿಸಿದರು” ಎಂದು ಸಾಮಾಜಿಕ ಚಿಂತಕ ವಿ ಎಲ್ ನರಸಿಂಹಮೂರ್ತಿ ತಿಳಿಸಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ, ಕರ್ನಾಟಕ ಎಸ್ಸಿ ಎಸ್ಟಿ ಪತ್ರಿಕಾ ಸಂಪಾದಕರ ಸಂಘ, ಚಿತ್ರದುರ್ಗ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ”ಸುದ್ದಿ ಮಾಧ್ಯಮದಲ್ಲಿ ಅಂಬೇಡ್ಕರ್ ದೃಷ್ಟಿಕೋನ” ವಿಚಾರ ಸಂಕಿರಣದಲ್ಲಿ ಪತ್ರಕರ್ತರಾಗಿ ಅಂಬೇಡ್ಕರ್ ಬರಹಗಳು ಕುರಿತು ವಿಚಾರ ಮಂಡಿಸಿದ ಸಾಮಾಜಿಕ ಚಿಂತಕ ವಿ.ಎಲ್.ನರಸಿಂಹಮೂರ್ತಿ “1902ರಲ್ಲಿ ಶಾಹು ಮಹಾರಾಜ್ ಸಾಮಾಜಿಕ ನ್ಯಾಯದ ಅಡಿಯಲ್ಲಿ ಶೋಷಿತ ಸಮುದಾಯಗಳಿಗೆ ಶೇ.50 ಮೀಸಲಾತಿ ನೀಡಿದರು. ಅದನ್ನು ಮೇಲ್ವರ್ಗದ ಪ್ರಭಾವಿಗಳು, ಪತ್ರಿಕೆಗಳು ವಿರೋಧಿಸಿ ಬರೆದವು. ಆಗ ಸಾಮಾಜಿಕ ನ್ಯಾಯ, ಸಮಾನತೆ ಪರವಾಗಿ ಬರೆಯಲು ಆರಂಭಿಸಿದ ಅಂಬೇಡ್ಕರ್ ಜೊತೆಗೆ ನಿಂತು ಸಹಾಯ ಮಾಡಿ ಮೂಕನಾಯಕ ಪತ್ರಿಕೆಯ ಸ್ಥಾಪನೆಗೆ ಕಾರಣರಾದರು” ಎಂದು ತಿಳಿಸಿದರು.

“2020ಕ್ಕೆ ಮೂಕನಾಯಕ 100 ವರ್ಷವಾದ ನಂತರದ
ಇತ್ತೀಚಿನ ವರ್ಷಗಳಲ್ಲಿ ಬಾಬಾಸಾಹೇಬರ ಕುರಿತು ಬಹಳಷ್ಟು ಪ್ರಕಾರದ ಪುಸ್ತಕಗಳು ಬರುತ್ತಿವೆ. ಅಧ್ಯಯನ ನಡೆಯುತ್ತಿವೆ. ಅಂದು ಅವರು ಪತ್ರಿಕೆಯಲ್ಲಿ ಮೂರು ರೀತಿಯ ವ್ಯವಸ್ಥೆ ಎದುರಿಸಬೇಕಾಯಿತು. ಸಮುದಾಯ, ಜಾತಿಯ ಸಮಾಜ ವ್ಯವಸ್ಥೆ, ವಸಾಹತು ಶಾಹಿ ಬ್ರಿಟಿಷ್ ಸರ್ಕಾರ. ಈ ಮೂರು ಎದುರಿಸಿ ಶೋಷಿತ ವರ್ಗಗಳ ಪರವಾಗಿ ಬರೆಯುವ ಅನಿವಾರ್ಯತೆ ಅಂಬೇಡ್ಕರ್ ಅವರಿಗಿತ್ತು. ಅಂಬೇಡ್ಕರ್ ಮೊದಲು ಮರಾಠಿ ಬರದಿದ್ದರೂ, ನಂತರ ಕಲಿತು ಜನಸಾಮಾನ್ಯರಿಗೆ ತಿಳಿಯುವ ಭಾಷೆಯಲ್ಲಿ ಬರೆಯಲು ಆರಂಭಿಸಿದರು” ಎಂದರು.
“ಜಾತಿಪದ್ದತಿ ಒಂದು ಮೆಟ್ಟಿಲುಗಳಿಲ್ಲದ ಮಹಡಿ, ಅಲ್ಲಿ ಒಮ್ಮೆ ಸೇರಿದರೆ ಮೇಲೆ ಕೆಳಗೆ ಹೋಗಲು ಅವಕಾಶವೇ ಇಲ್ಲ ಎಂದು ಅಂಬೇಡ್ಕರ್ ಟೀಕಿಸಿದರು. ಜೊತೆಗೆ ಜಾತಿ ವ್ಯವಸ್ಥೆಯ ಟೀಕಿಸುತ್ತಾ ಮತ್ತು ಅದನ್ನ ಸೃಷ್ಟಿಸಿ, ಪೋಷಿಸುತ್ತಿರುವವರನ್ನು ವಿಮರ್ಶೆಗೊಳಿಸಿ ಟೀಕಿಸಿದ್ದಾರೆ. ಪತ್ರಕರ್ತರಾಗಿ ನಾವು ಅಂಬೇಡ್ಕರ್ ಅವರ ವಿಚಾರಧಾರೆಗಳೊಂದಿಗೆ ದಲಿತರ, ಶೋಷಿತ ವರ್ಗಗಳ ಇತಿಹಾಸ, ಸಂಸ್ಕೃತಿ ಸಂಶೋಧಿಸುವ ಕೆಲಸ ಮಾಡಬೇಕಾಗಿದೆ” ಎಂದು ಅಭಿಪ್ರಾಯಪಟ್ಟರು.

“ಭಾರತದಲ್ಲಿ ಅಂದು ನಡೆಯುತ್ತಿದ್ದ ಸ್ವಾತಂತ್ರದ ಹೋರಾಟದ ಪರಿಕಲ್ಪನೆಯನ್ನು ಪರಾಮರ್ಶೆಗೆ ಒಳಪಡಿಸಿ ಭಾರತಕ್ಕೆ ಯಾವ ರೀತಿಯ ಸ್ವಾತಂತ್ರ್ಯ ಬೇಕು. ಶೋಷಿತ ಸಮುದಾಯಗಳಿಗೆ ಸಾಮಾಜಿಕ, ಆರ್ಥಿಕ ಸಮಾನತೆಯ ಸ್ವಾತಂತ್ರ್ಯ ಬೇಕು, ಲಿಂಗ ಮತ್ತು ಸಾಮಾಜಿಕ ಅಸಮಾನತೆಗಳನ್ನು ತೊಲಗಿಸುವ ಸ್ವಾತಂತ್ರ್ಯ ಬೇಕೆಂದು ಪ್ರತಿಪಾದಿಸಿದ್ದರು. ಅವರು ತಮ್ಮ ಪತ್ರಿಕೆಗಳಲ್ಲಿ ಜಾಹೀರಾತಿಗೆ ಕಡಿಮೆ ಆದ್ಯತೆ ಕೊಟ್ಟು ಸುದ್ದಿ ಮತ್ತು ವಿಶ್ಲೇಷಣೆಗೆ 95 ರಷ್ಟು ಆದ್ಯತೆ ನೀಡಿದರು. ಅಂಬೇಡ್ಕರ್ ಅವರ ದೃಷ್ಟಿಕೋನದಲ್ಲಿ ಶೋಷಿತರ ದಲಿತರ ವಿಮೋಚನೆಯ ಪರ್ಯಾಯ ಮಾಧ್ಯಮವನ್ನು ಇಂದು ಕಟ್ಟಬೇಕಿದೆ” ಎಂದು ವಿಮರ್ಶಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಗಣೇಶಮೂರ್ತಿ ಬಳಿ ಅಳವಡಿಸಿದ್ದ ವಿವಾದಿತ ಫ್ಲೆಕ್ಸ್ ತೆರವು: ಪೊಲೀಸರ ಕಾರ್ಯ ಯಶಸ್ವಿ
ವಿಚಾರ ಸಂಕಿರಣದಲ್ಲಿ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ, ಸದಸ್ಯರಾದ ಅಹೋಬಲಪತಿ, ಮಂಜುನಾಥ್, ನಿಂಗಜ್ಜ, ಶಿವಕುಮಾರ್ ಕಣಸೋಗಿ, ಕಾರ್ಯದರ್ಶಿ ಸಹನಾ, ಹಿಂದೂ ಪತ್ರಿಕೆಯ ವಿಭಾಗೀಯ ಸಂಪಾದಕ ರಿಷಿಕೇಶ್ ಬಹದ್ದೂರ್, ಶಿವಮೊಗ್ಗ ಟೆಲೆಕ್ಸ್ ಸಂಪಾದಕ ರವಿಕುಮಾರ್, ಡಾ.ಭಾರತೀದೇವಿ, ಚಿತ್ರದುರ್ಗ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ, ಪತ್ರಕರ್ತರಾದ ಮಂಜು ಜಡೇಕುಂಟೆ, ಷಣ್ಮುಖಪ್ಪ, ವೀರೇಶ್, ಶ್ರೀನಿವಾಸ್ ದೊಡ್ಡೇರಿ, ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.