ಹಳೆ ವೈಷಮ್ಯ ಹಿನ್ನೆಲೆ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯೊಬ್ಬರನ್ನು ಭೀಕರವಾಗಿ ಹತ್ಯೆಗೈದ ಘಟನೆ ಭಾನುವಾರ ಕಲಬುರಗಿ ತಾಲೂಕಿನ ಸೀತನೂರ ಗ್ರಾಮದ ಸೇತುವೆ ಸಮೀಪ ನಡೆದಿದೆ
ಸೀತನೂರ ಗ್ರಾಮದ ಶಿವರಾಯ ಹಣಮಂತ್ರಾಯ ಮಾಲಿಪಾಟೀಲ್ (65) ಕೊಲೆಯಾದ ವ್ಯಕ್ತಿ. ಅದೇ ಗ್ರಾಮದ ಲಕ್ಷ್ಮೀಕಾಂತ್ ಎಂಬುವವರ ತಂದೆ ನಾಗೇಂದ್ರ ಮಾಂಗ್ ಅವರನ್ನು 2008ರಲ್ಲಿ ಹತ್ಯೆಗೈಯಲಾಗಿದ್ದು, ಕೊಲೆಯ ಪ್ರಕರಣದಲ್ಲಿ ಕೊಲೆಯಾದ ಶಿವರಾಯ ಮಾಲಿಪಾಟೀಲ್ ಪ್ರಮುಖ ಆರೋಪಿಯಾಗಿದ್ದ ಎನ್ನಲಾಗಿದೆ. ಹಳೆಯ ವೈಷಮ್ಯ ಕಾರಣದಿಂದ 17 ವರ್ಷಗಳ ಬಳಿಕ ತಂದೆಯ ಕೊಲೆಯ ಪ್ರತೀಕಾರ ತೀರಿಸಿಕೊಳ್ಳಲು ಕೊಲೆ ನಡೆದಿದೆʼ ಎಂದು ತಿಳಿದು ಬಂದಿದೆ.
ಶಿವರಾಯ ಹೊಲದಿಂದ ಮನೆಗೆ ಬರುವ ವೇಳೆ ಸಂಚು ರೂಪಿಸಿದ ಲಕ್ಷ್ಮೀಕಾಂತ್ ನಾಗೇಂದ್ರಪ್ಪ ಮಾಂಗ್ ಎಂಬಾತನು ಶಿವರಾಯನನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಕೊಲೆಯಾದ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ನೇತ್ರತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.