“ಭಾರತದ ಇತಿಹಾಸ ಒಂದು ಮೆಳ್ಳೆಗಣ್ಣಿನ ಇತಿಹಾಸ ಎಂದು ಸಮಾಜವಾದಿ ನಾಯಕ ಲೋಹಿಯಾ ಕರೆದಿದ್ದರು. ಅಂಬೇಡ್ಕರ್ ಅವರನ್ನು ದಲಿತ ನಾಯಕ ಎಂದು ಸೀಮಿತಗೊಳಿಸಿದ್ದೇವೆ. ಮುಂದುವರೆದು ಸಂವಿಧಾನ ಶಿಲ್ಪಿ, ಮಹಿಳಾವಾದಿ , ಕಾರ್ಮಿಕವಾದಿ ಎಂದು ಸೀಮಿತಗೊಳಿಸುತ್ತಿದ್ದೇವೆ, ಆದರೆ ಎಲ್ಲದಕ್ಕೂ ಮೀರಿ ಅಂಬೇಡ್ಕರ್ “ಶ್ರೇಷ್ಠ ಪತ್ರಕರ್ತ”. ಅವರು 36 ವರ್ಷಗಳ ಕಾಲ ಮೂಕನಾಯಕದಿಂದ ಪ್ರಬುದ್ಧ ಭಾರತವರೆಗೆ ಐದು ಪತ್ರಿಕೆಗಳನ್ನು ನಡೆಸಿದ ಅಭಿವೃದ್ಧಿ ಪತ್ರಿಕೋದ್ಯಮದ ಜನಕ” ಎಂದು ಶಿವಮೊಗ್ಗ ಟೆಲೆಕ್ಸ್ ಪತ್ರಿಕೆ ಸಂಪಾದಕ, ಪತ್ರಕರ್ತ ಟೆಲೆಕ್ಸ್ ರವಿಕುಮಾರ್ ಚಿತ್ರದುರ್ಗದಲ್ಲಿ ಸ್ಮರಿಸಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ, ಕರ್ನಾಟಕ ಎಸ್ಸಿ ಎಸ್ಟಿ ಪತ್ರಿಕಾ ಸಂಪಾದಕರ ಸಂಘ, ಚಿತ್ರದುರ್ಗ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ”ಸುದ್ದಿ ಮಾಧ್ಯಮದಲ್ಲಿ ಅಂಬೇಡ್ಕರ್ ದೃಷ್ಟಿಕೋನ” ವಿಚಾರ ಸಂಕಿರಣದಲ್ಲಿ ಪತ್ರಕರ್ತರಾಗಿ “ಅಂಬೇಡ್ಕರ್ ಅವರ ಪತ್ರಿಕಾ ವೃತ್ತಿ” ವಿಷಯದ ಕುರಿತು ಮಾತನಾಡಿದ ಅವರು “ಭಾರತದ ಶೋಷಿತ ಜನಾಂಗದ ವಿಮುಕ್ತಿಗೆ ಕೆಲಸ ಮಾಡಿದವರು. ದನಿ ಇಲ್ಲದವರ ಪರವಾಗಿ ದನಿಯತ್ತುವ ಬಗ್ಗೆ ಅಂಬೇಡ್ಕರ್ ರವರು ತಮ್ಮ ಪತ್ರಿಕೆಗಳಲ್ಲಿ ನಿರಂತರವಾಗಿ ಬರೆಯುತ್ತಾರೆ. ಅಮೆರಿಕದಲ್ಲಿರುವ ಕಪ್ಪು ಬಿಳಿ ಜನಾಂಗದ ಬಗ್ಗೆ, ಮಾಧ್ಯಮಗಳು ಅದನ್ನು ನಿರ್ವಹಿಸುವುದನ್ನು ಅವಲೋಕನ ಮಾಡಿದ್ದ ಅವರು, ಭಾರತಕ್ಕೆ ಹಿಂತಿರುಗಿದ ವೇಳೆ ಸಾಮಾಜಿಕ ಚಳುವಳಿಯಲ್ಲಿ ಪತ್ರಕರ್ತರಾಗಿ ತಮ್ಮ ಜೀವನ ಆರಂಭ ಮಾಡಿದರು. ಇದಕ್ಕೆ ಕಾರಣ ಭಾರತದಲ್ಲಿ ಶೋಷಿತ, ದನಿ ಇಲ್ಲದ ಸಮುದಾಯಗಳಿಗೆ ಅವರ ಸಂಕಷ್ಟಗಳನ್ನು ತಿಳಿಸಲು ಯಾವುದೇ ಪತ್ರಿಕೆ ಇಲ್ಲ ಎನ್ನುವ ಕಾರಣದಿಂದ ಅವರು ಪತ್ರಿಕೆಯನ್ನು ಪ್ರಾರಂಭಿಸಿದರು. ಇದಕ್ಕೆ ಅಂದಿನ ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದ ಶಾಹುಮಹಾರಾಜ್ ರವರು 2500 ರೂ. ಸಹಾಯ ಮಾಡಿದ್ದರು” ಎಂದು ನೆನಪಿಸಿಕೊಂಡರು.

“ಆದರೆ ದುರಂತ ಎಂದರೆ ಇವರು ಯಾರ ಬಗ್ಗೆ ಬರೆಯುತ್ತಿದ್ದರೋ, ಆ ಶೋಷಿತ ಸಮುದಾಯಗಳಲ್ಲಿ ಅವರ ಬರಹಗಳನ್ನು ಓದುವ ಶಿಕ್ಷಣ, ಅಕ್ಷರ ಜ್ಞಾನ ಅಂದಿನ ದಲಿತರಲ್ಲಿ ಇರಲಿಲ್ಲ ಎಂಬುದು ವಿಷಾದನೀಯ. ಭಾರತದಲ್ಲಿ ಸ್ವಾತಂತ್ರ್ಯ ಚಳುವಳಿಯನ್ನು ಸಾಮಾಜಿಕ ಚಳುವಳಿಯ ರೂಪದಲ್ಲಿ ಮುನ್ನಡೆಸಿದವರು ಅಂಬೇಡ್ಕರ್” ಎಂದು ಸ್ಮರಿಸಿದರು.
“ಭಾರತದಲ್ಲಿ ಎರಡು ರೀತಿಯ ಭಾರತಗಳಿವೆ. ಬಲಾಢ್ಯ ಭಾರತ ಮತ್ತು ಬಹಿಷ್ಕೃತ ಅಥವಾ ದಮನಿತ ಭಾರತ. ಭಾರತದಲ್ಲಿ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಚಳುವಳಿ ನಡೆಯುತ್ತಿತ್ತು. ಆದರೆ ಅಂಬೇಡ್ಕರ್ ಇಂದು ಸಮಾಜದ ಶೋಷಿತರ, ದಲಿತರ ಸಾಮಾಜಿಕ, ಸಮಾನತೆಯ ಸ್ವಾತಂತ್ರ್ಯಕ್ಕೆ ಮತ್ತೊಂದು ಚಳುವಳಿಯನ್ನು ನಡೆಸಿದರು ಅದರ ನೇತೃತ್ವವನ್ನು ವಹಿಸಿದ್ದರು. ಪತ್ರಿಕೋದ್ಯಮದಲ್ಲಿ ದಲಿತರ ಶೋಷಿತರ ಧ್ವನಿಯಾಗಿ ಮಾತನಾಡುವ ಅವಶ್ಯಕತೆಯನ್ನು ಅಂಬೇಡ್ಕರ್ ಮನಗಂಡಿದ್ದರು. ಆದರೆ ಇಂದು ಜಾತಿಯನ್ನು ಹೇಳಿಕೊಳ್ಳದಂತ ಶೋಷಿತ ಸ್ಥಿತಿ, ವಾತಾವರಣ ಸುದ್ದಿಮಾಧ್ಯಮ ಸಂಸ್ಥೆಗಳಲ್ಲಿದೆ. ಸುದ್ದಿ ಮಾಧ್ಯಮಗಳ ಶೋಷಣೆಗಳಿಂದಾಗಿಯೇ ದಲಿತರು ಅಲ್ಲಿಂದ ಹೊರ ಹೋಗುತ್ತಿದ್ದಾರೆ” ಎಂದು ವಿಷಾದ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಭಾರತದ ಜಾತಿಗಳು ಹೋಮೋಜೀನಿಯಸ್ ಅಲ್ಲ, ರೆಟ್ರೋ ಜೀನಿಯಸ್; ಚಿಂತಕ ವಿ ಎಲ್ ನರಸಿಂಹಮೂರ್ತಿ

ವಿಚಾರ ಸಂಕಿರಣದಲ್ಲಿ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ, ಸದಸ್ಯರಾದ ಅಹೋಬಲಪತಿ, ಮಂಜುನಾಥ್, ನಿಂಗಜ್ಜ, ಶಿವಕುಮಾರ್ ಕಣಸೋಗಿ, ಕಾರ್ಯದರ್ಶಿ ಸಹನಾ, ಹಿಂದೂ ಪತ್ರಿಕೆಯ ವಿಭಾಗೀಯ ಸಂಪಾದಕ ರಿಷಿಕೇಶ್ ಬಹದ್ದೂರ್, ಸಾಮಾಜಿಕ ಚಿಂತಕ ವಿ ಎಲ್ ನರಸಿಂಹಮೂರ್ತಿ, ಡಾ.ಭಾರತೀದೇವಿ, ಚಿತ್ರದುರ್ಗ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ, ಪತ್ರಕರ್ತರಾದ ಮಂಜು ಜಡೇಕುಂಟೆ, ಷಣ್ಮುಖಪ್ಪ, ಗೌನಳ್ಳಿ ಗೋವಿಂದಪ್ಪ, ವೀರೇಶ್, ಶ್ರೀನಿವಾಸ್ ದೊಡ್ಡೇರಿ, ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.