ನಿಯಮಗಳನ್ನು ಗಾಳಿಗೆ ತೂರಿ ಬೇತಮಂಗಲ ಬಳಿಯ ಸುಂದರಪಾಳ್ಯ ಕರ್ನಾಟಕ ಪಬ್ಲಿಕ್ ಶಾಲೆ ಹಾಗೂ ಕಾಲೇಜು ಮುಂಭಾಗದಲ್ಲಿ ಅನಧಿಕೃತವಾಗಿ ಬಾರ್ ತೆರೆಯಲು ಅನುಮತಿ ನೀಡಿದರೆ ಆಹೋರಾತ್ರಿ ಧರಣಿ ಕೈಗೊಳ್ಳಬೇಕಾಗುತ್ತದೆ ಎಂದು ಅಂಬೇಡ್ಕರ್ ಯುವ ವೇದಿಕೆ ರಾಜ್ಯಾಧ್ಯಕ್ಷ ಜೈ ಭೀಮ್ ಶ್ರೀನಿವಾಸ್ ಎಚ್ಚರಿಕೆ ನೀಡಿದರು.
ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಸುಂದರಪಾಳ್ಯ ಪ್ರೌಢ ಶಾಲೆ-ಪದವಿ ಪೂರ್ವ ಕಾಲೇಜು ಬಳಿ ಬಾರ್ ಆರಂಭಿಸದಂತೆ ಅಂಬೇಡ್ಕರ್ ಯುವ ವೇದಿಕೆಯಿಂದ(ಎವೈವಿಕೆ) ಸುಂದರಪಾಳ್ಯ ಗ್ರಾಪಂ ಬಳಿ ಅನೇಕ ಕಾರ್ಯಕರ್ತರೊಂದಿಗೆ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.
ಬಳಿಕ ಪಿಡಿಒ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, “ಬೇತಮಂಗಲ ಬಳಿಯ ಸುಂದರಪಾಳ್ಯ ಕರ್ನಾಟಕ ಪಬ್ಲಿಕ್ ಶಾಲೆ ಹಾಗೂ ಕಾಲೇಜು ಮುಂಭಾಗದಲ್ಲಿ ಅನಧಿಕೃತವಾಗಿ ಬಾರ್ ಆರಂಭಿಸಲು ಗ್ರಾಮ ಪಂಚಾಯಿತಿ ಆಕ್ಷೇಪಣೆ ಸಲ್ಲಿಸುವ ಮೂಲಕ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡಬೇಕು” ಎಂದು ಒತ್ತಾಯಿಸಿದರು.
“ಯಾವುದೇ ಬಾರ್ ಅಂಡ್ ರೆಸ್ಟೋರೆಂಟ್ ಆರಂಭಿಸುವ ಮುನ್ನ ಶಾಲಾ ಕಾಲೇಜುಗಳಿಂದ ಕನಿಷ್ಠ 100 ಮೀಟರ್ ದೂರದಲ್ಲಿ ಇರಬೇಕು. ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಯಾವುದೇ ಆಕ್ಷೇಪಣೆ ಇಲ್ಲದಿರುವ ಬಗ್ಗೆ ಅನುಮತಿ ಪಡೆದ ನಂತರ ಲೈಸೆನ್ಸ್ ನೀಡಬೇಕಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸರ್ಕಾರವೇ ಹೆಚ್ಚಾಗಿ ಬಾರ್ಗಳಿಗೆ ಅನುಮತಿ ನೀಡುತ್ತಿದ್ದು, ಗ್ರಾಮ ಪಂಚಾಯಿತಿಗಳು ಸ್ಥಳ ಪರಿಶೀಲನೆ ಮಾಡದೆ ಅನುಮತಿ ನೀಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಬಗ್ಗೆ ಆಕ್ಷೇಪಣೆ ಸಲ್ಲಿಸುವ ಮೂಲಕ ಸಾರ್ವಜನಿಕರ ಹಿತಾಸಕ್ತಿ ಕಾಪಾಡಬೇಕು” ಎಂದು ಆಗ್ರಹಿಸಿದರು.
“ಜಿಲ್ಲೆಯಲ್ಲೇ ಅತ್ಯುತ್ತಮ ಫಲಿತಾಂಶ ನೀಡುತ್ತಿರುವ ಪದವಿ ಪೂರ್ವ ಕಾಲೇಜು ಬಳಿ ಈ ರೀತಿ ಅಕ್ರಮ ಚಟುವಟಿಕೆ ನಿಯಂತ್ರಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಕಾಲೇಜು ಬಳಿಯೇ ಬಸ್ ನಿಲ್ದಾಣವಿದ್ದು, ಕುಡುಕರ ಹಾವಳಿಯಿಂದ ಇತರೆ ಅನೈತಿಕ ಚಟುವಟಿಕೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ. ಕೇವಲ 60 ಮೀಟರ್ ಅಳತೆ ದೂರದಲ್ಲಿ ಬಾರ್ ಆರಂಭಕ್ಕೆ ಸಿದ್ಧತೆ ನಡೆದಿದೆ” ಎಂದು ಆರೋಪಿಸಿದರು.
“ಕದ್ದುಮುಚ್ಚಿ ಎನ್ಒಸಿ ನೀಡಿದ್ದಲ್ಲಿ ಗ್ರಾಮ ಪಂಚಾಯಿತಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುತ್ತೇವೆ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿ ರೂಪಿಸಿಕೊಳ್ಳಬಹುದು: ಎಸ್ ಮಳಿಮಠ
ಪಿಡಿಒ ಮಂಜುನಾಥ್ ಮನವಿ ಸ್ವೀಕರಿಸಿ ಮಾತನಾಡಿ, “ಈ ಬಗ್ಗೆ ಅಬಕಾರಿ ಇಲಾಖೆಗೆ ಪತ್ರ ಬರೆಯುತ್ತೇವೆ. ನಾವೂ ಕೂಡ ಬಾರ್ಗೆ ಅನುಮತಿ ನೀಡುವಂತೆ ಯಾವುದೇ ಅರ್ಜಿಗಳು ಬಂದರೂ ಪರಿಶೀಲನೆ ನಡೆಸಿ ನೈಜತೆ ಕಂಡುಕೊಳ್ಳುತ್ತೇವೆ” ಎಂದರು.
ಎವೈವಿಕೆ ಜಿಲ್ಲಾ ಅಧ್ಯಕ್ಷ ಗೋವಿಂದಪ್ಪ, ಹೋಬಳಿ ಅಧ್ಯಕ್ಷ ಸಂಜು, ದಲಿತ ಮುಖಂಡ ಪಿಚ್ಚಳ್ಳಿ ಮಂಜುನಾಥ್, ಕಾರ್ಯಕರ್ತ ಪಂತನಹಳ್ಳಿ ಶಿವ, ಕಿಶೋರ್ ಹಾಗೂ ಅನೇಕ ಸದಸ್ಯರು, ಕಾರ್ಯಕರ್ತರು, ಮುಖಂಡರು, ಗ್ರಾಮಸ್ಥರು ಇದ್ದರು.