ಭೂಸ್ವಾಧೀನ ಪರಿಹಾರ ನೀಡದ ಹಿನ್ನೆಲೆಯಲ್ಲಿ ನ್ಯಾಯಾಲಯವು ಬಾಗಲಕೋಟೆ ಜಿಲ್ಲೆಯ ಜಮಖಂಡಿ ಉಪ ವಿಭಾಗಾಧಿಕಾರಿಗಳ ಪೀಠೋಪಕರಣ ಜಪ್ತಿ ಮಾಡಲು ಆದೇಶ ಮಾಡಿದ್ದು, ಅದರನ್ವಯ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಅವರು ಓಡಾಡುವ ವಾಹನವನ್ನು ಜಪ್ತಿ ಮಾಡಿದ ಘಟನೆ ನಡೆದಿದೆ.
ಮುಧೋಳ ತಾಲೂಕಿನ ಬೆಳಗಲಿ ಗ್ರಾಮದ ಬಾಳಪ್ಪ ನಿಂಗಪ್ಪ ಕಪ್ಪಲಗುದ್ದಿ ದರೆಪ್ಪ ಮುತ್ತಪ್ಪ ಕಪ್ಪಲಗುದ್ದಿ ಎಂಬುವರಿಗೆ ಸೇರಿದ 4.ಎಕರೆ 28 ಗುಂಟೆ ಜಮೀನನ್ನು ಕೆರೆ ನಿರ್ಮಾಣಕ್ಕೆಂದು 2005-06ರಲ್ಲಿ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಘಟನೆ ನಡೆದು ಹಲವು ವರ್ಷ ಕಳೆದರೂ ಈವರೆಗೂ ಸರ್ಕಾರ ಪರಿಹಾರ ನೀಡಿಲ್ಲ. ಆದ್ದರಿಂದ ಬಾಳಪ್ಪ ಮತ್ತು ದರೆಪ್ಪ ಕಪ್ಪಲಗುದ್ದಿ ಎಂಬ ರೈತರು ತಮ್ಮ ಜಮೀನಿಗೆ ಪರಿಹಾರ ದೊರಕಿಸಿಕೊಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.
ಪ್ರಕರಣದ ತನಿಖೆ ನಡೆಸಿದ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಸುಶಾಂತ ಮಹಾವೀರ ಚೌಗಲೇ ಅವರು ಬಡ್ಡಿ ಸಹಿತ ₹43,33,306 ಪರಿಹಾರ ನೀಡುವಂತೆ ಆದೇಶ ನೀಡಿದ್ದರು. ಆದರೆ ಈವರೆಗೂ ಪರಿಹಾರ ನೀಡದ ಹಿನ್ನೆಲೆಯಲ್ಲಿ ಉಪ ವಿಭಾಗಾಧಿರಿಕಾರಿಗಳ ಕಚೇರಿಯ ಚರಾಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕೋರ್ಟ್ ಆದೇಶ ನೀಡಿತ್ತು. ಉಪ ವಿಭಾಗಾಧಿಕಾರಿಗಳ ಕಚೇರಿ ಬೀಗ ಹಾಕಿದ್ದರಿಂದ ಉಪವಿಭಾಗಾಧಿಕಾರಿಯವರ ವಾಹನವನ್ನು ಜಪ್ತಿ ಮಾಡಲಾಯಿತು.
ಈ ಸುದ್ದಿ ಓದಿದ್ದೀರಾ? ವಿಜಯನಗರ | ತರಕಾರಿ ಮಾರುಕಟ್ಟೆ ಅವ್ಯವಸ್ಥೆ ಬಗೆಹರಿಸುವಂತೆ ರೈತ ಸಂಘ ಆಗ್ರಹ
ವಾಹನದ ಕೀಲಿಕೈ ನೀಡದ ಕಾರಣ ವಾಹನವನ್ನು ಟೋ ಮಾಡುವ ಮುಖಾಂತರ ಎಳೆದೊಯ್ಯಲಾಗಿದೆ. ಈ ವೇಳೆ ನ್ಯಾಯಾಲಯದ ಸಿಬ್ಬಂದಿ ಬೆಲಿಪ ಅಶೋಕ ಜಿರಲಬಾವಿ ಹಾಗೂ ನ್ಯಾಯವಾದಿಗಳು ಇದ್ದರು.