ಕೊಪ್ಪಳ ತಾಲೂಕಿನ ಇರಕಲ್ಲಗಡ ಗ್ರಾಮದಲ್ಲಿ ಹಿಂದು ಹಾಗೂ ಮುಸ್ಲಿಂ ಧರ್ಮೀಯರು ಸೇರಿ ಗಣೇಶೋತ್ಸವ ಆಚರಿಸಿ ಧಾರ್ಮಿಕ ಸಾಮರಸ್ಯದ ಸಂದೇಶ ಸಾರಿದ್ದಾರೆ.
ಇರಕಲ್ಲಗಡದಲ್ಲಿ ಗಜಾನನ ಮಿತ್ರ ಮಂಡಳಿ ವತಿಯಿಂದ ಆಯೋಜಿಸಿದ್ದ ಗಣೇಶೋತ್ಸವದಲ್ಲಿ 4ನೇ ದಿನದ ಊಟದ ವ್ಯವಸ್ಥೆಯನ್ನು ಗ್ರಾಮದ ಮುಸ್ಲೀಂ ಸಮುದಾಯವೇ ವಹಿಸಿಕೊಂಡು ಭಾರತದ ಸಹೋದರತ್ವ ತತ್ವವನ್ನು ಮತ್ತೆ ಸಾಬೀತು ಮಾಡಿದ್ದಾರೆ.
ಮಾಜಿ ಮಂಡಳ ಪಂಚಾಯತ್ತಿ ಪ್ರಧಾನರಾದ ಈರಬಸಪ್ಪ ಪಟ್ಟಣಶೆಟ್ಟಿ ಮಾತನಾಡಿ, “ಭಾಷೆ, ಧರ್ಮವನ್ನು ಮೀರಿ ನಾವೆಲ್ಲ ಮನುಷ್ಯರು, ಮೇಲಾಗಿ ಭಾರತೀಯರು ಎಂಬ ಸಂದೇಶವನ್ನು ಇರಕಲ್ಲಗಡದ ಮುಸ್ಲಿಂ ಬಾಂಧವರು ಮತ್ತು ಹಿಂದೂಗಳು ಸಾರಿದ್ದೇವೆ. ಧರ್ಮದ ನಾಮ ಬದಲಾಗಿರಬಹುದು, ಆಚರಣೆ ಬದಲಾಗಿರಬಹುದು, ಆದರೆ ನಮ್ಮ ಭಾವನೆಗಳು ಒಂದೆ. ಪೂಜೆಯ ಕ್ರಮಗಳು ಬೇರೆಬೇರೆಯಾಗಿರಬಹುದು; ಆದರೆ, ನಂಬುವುದು ಒಬ್ಬ ದೇವರನ್ನೆ. ಹಾಗಾಗಿ ಹಿಂದೂ-ಮುಸ್ಲಿಂ ಎಂಬ ಬೇಧವಿಲ್ಲ. ನಾವೆಲ್ಲ ಭಾಯಿ ಭಾಯಿ” ಎಂದರು.
ಮುಸ್ಲಿಂ ಸಮುದಾಯದ ಮುಖಂಡರ ಈ ಸಹಭಾವನೆಗೆ ಗ್ರಾಮಸ್ಥರು ತಮ್ಮ ಬೆಂಬಲ ನೀಡಿದರು. ಪ್ರೀತಿ, ವಾತ್ಸಲ್ಯ, ಧರ್ಮೀಯ ಸಹಿಷ್ಣುತೆ ಮತ್ತು ರಾಷ್ಟ್ರೀಯ ಏಕತೆಯ ಸಂಕೇತವಾಗಿ ಈ ಬಾರಿಯ ಗಣೇಶೋತ್ಸವ ಸಮಾಜದ ಎಲ್ಲ ವರ್ಗಗಳಿಂದ ಶ್ಲಾಘನೆಗೆ ಪಾತ್ರವಾಗಿದೆ.
ಇದನ್ನೂ ಓದಿ: ಕೊಪ್ಪಳ | ಗಣೇಶ ವಿಸರ್ಜನೆ ದಿನ ಡಿಜೆ ಬಳಕೆ; ಸಾರ್ವಜನಿಕರ ಆಕ್ರೋಶ
ಮೆರಾಜ್ ವಲಿ, ಅಬ್ಬಾಸ್ ಅಲಿ, ಸುಭಾನಸಾಬ, ಮಹಿಬೂಬ ಕಂದಕೂರ, ಅಬ್ದುಲ್ ಸಾಬ, ಈರಣ್ಣ, ಗುಡ್ಡಪ್ಪ, ಬಸವರಾಜ್ ಮೂಲಿಮನಿ ನೌಜವಾನ್ ಕಮಿಟಿಯ ಅಧ್ಯಕ್ಷರು, ಉಪಾಧ್ಯಕ್ಷರು ಗಜಾನನ ಮಂಡಳಿಯ ಸದಸ್ಯರು ಹಾಗೂ ಗ್ರಾಮಸ್ಥರು ಉತ್ಸವದಲ್ಲಿ ಪಾಲ್ಗೊಂಡಿದ್ದರು.