ಮೈಸೂರಿನ ನ್ಯಾಯಾಲಯ ಮುಂಭಾಗದ ಗಾಂಧಿ ಪ್ರತಿಮೆ ಎದುರು ಪ್ರಗತಿಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿ ದಸರಾ ಉದ್ಘಾಟಕರಾಗಿ ಆಯ್ಕೆಯಾಗಿರುವ ಭಾನು ಮುಷ್ತಾಕ್ ಅವರನ್ನು ವಿರೋಧಿಸುತ್ತಿರುವ ಬಿಜೆಪಿ ಹಾಗೂ ಸಂಘಪರಿವಾರದವರ ನಡೆಗೆ ಧರ್ಮದ ಹೆಸರಿನಲ್ಲಿ ಕೀಳುಮಟ್ಟದ ರಾಜಕೀಯ ಮಾಡದಂತೆ ಆಕ್ರೋಶ ವ್ಯಕ್ತಪಡಿಸಿದರು.
ರಂಗಾಯಣ ಮಾಜಿ ನಿರ್ದೇಶಕರಾದ ಜನಾರ್ಧನ ಮಾತನಾಡಿ “ಪ್ರತಿಷ್ಠಿತ ಬೂಕರ್ ಪ್ರಶಸ್ತಿ ವಿಜೇತೆ ಭಾನು ಮುಷ್ತಾಕ್ ಅವರು ಈ ಬಾರಿ ದಸರಾ ಉದ್ಘಾಟಕರಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿ, ವಿರೋಧಿ ಮನಸ್ಥಿತಿಗಳ ನಿಲುವು ನಿಜಕ್ಕೂ ಖಂಡನಿಯ. ಮೈಸೂರು ದಸರಾ ಮಹೋತ್ಸವ ಬಿಜೆಪೀಗರ ರಾಜಕೀಯ ದಾಳವಲ್ಲ. ಅರಮನೆ ನಾಗಪುರದ ಕೇಂದ್ರ ಕಚೇರಿಯಂತಲ್ಲ. ಇದು ನಾಡಹಬ್ಬ ಕನ್ನಡಕ್ಕೆ ಕೀರ್ತಿ ತಂದುಕೊಟ್ಟವರ ಬಗ್ಗೆ ಕನ್ನಡ ಬಾರದ, ಕನ್ನಡ ಸಂಸ್ಕೃತಿ ಅರಿಯದ ಸಂಘ ಪರಿವಾರದವರ ಮಾತಿಗೆ ಲೇವಡಿ ಮಾಡಿದರು”.
ಪ್ರತಿಭಟನೆಯಲ್ಲಿದ್ದ ಮುಖಂಡರುಗಳು ಮಾತನಾಡಿ ಧರ್ಮದ ಹೆಸರಿನಲ್ಲಿ ಅದುವೇ, ದಸರಾ ಉದ್ಘಾಟಕರಾದ ಭಾನು ಮುಷ್ತಾಕ್ ಅವರು ಮುಸ್ಲಿಮ್ ಎನ್ನುವ ಕಾರಣಕ್ಕೆ ನಾಲಿಗೆ ಹರಿಬಿಡುತ್ತಿರುವುದು ಖಂಡನಿಯ. ನಾಡಹಬ್ಬ ದಸರಾ ನಡೆಸುವುದು ರಾಜಮನೆತನವಲ್ಲ. ಇದೀಗ ರಾಜ ಪ್ರಭುತ್ವವೂ ಇಲ್ಲ. ಸರ್ಕಾರದ ಕಾರ್ಯಕ್ರಮ. ಇದನ್ನ ತಿರುಚುವ ಹುನ್ನಾರ. ರಾಜಕೀಯ ಲಾಭಕ್ಕೆ ಹವಣಿಸುತ್ತಿರುವ ಅತೃಪ್ತ ಮನಸ್ಥಿತಿಗಳಿಗೆ ಮುಖ್ಯಮಂತ್ರಿಗಳು ಮಣಿಯಬಾರದು ಎಂದು ಒತ್ತಾಯಿಸಿದರು.
ಮೈಸೂರಿನ ಮಾಜಿ ಸಂಸದ ಹಾಗೆ ತನ್ನದೇ ಸ್ವಪಕ್ಷದಲ್ಲಿ ಮೂಲೆ ಗುಂಪಾಗಿರುವ, ತನ್ನ ರಾಜಿಕೀಯ ಅಸ್ತಿತ್ವಕ್ಕಾಗಿ ಬಾಯಿಗೆ ಬಂದ ಹಾಗೆ ಹರಟುತ್ತಾ ಕೀಳು ಮಟ್ಟದ ರಾಜಕೀಯ ಮಾಡಲು ಹೊರಟಿರುವ ಪ್ರತಾಪ್ ಸಿಂಹ ಭಾನು ಮುಷ್ತಾಕ್ ಅವರು ಸೀರೆಯುಟ್ಟು, ಹಣೆಗೆ ಕುಂಕುಮವಿಟ್ಟು ದಸರಾ ಉದ್ಘಾಟನೆಗೆ ಬರಲಿ ಎನ್ನುವ ಮೂರ್ಖತನದ ಹೇಳಿಕೆ ನೀಡಿದ್ದಾರೆ. ಅದಷ್ಟೇ ಅಲ್ಲದೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಚಾಮುಂಡಿ ಬೆಟ್ಟ ಹತ್ತಲಿ ಎಂದು ಸವಾಲು ಒಡ್ಡಿದ್ದಾರೆ. ರಾಜ್ಯಕ್ಕೆ ಕೀರ್ತಿ ತಂದ ಹೆಣ್ಣು ಮಗಳ ಬಗ್ಗೆ ಯಾವ ರೀತಿ ಮಾತಾಡಬೇಕು ಎನ್ನುವ ಕನಿಷ್ಠ ಪ್ರಜ್ಞೆ ಇರದೇ ಕೇಂದ್ರ ಸಚಿವೆ, ಇನ್ನ ಸೀರೆಯುಡುವ ಮಹಿಳೆಗೆ ಸೀರೆ ಉಡುವಂತೆ ಹೇಳುವ ಅವಿವೇಕಿ ತನದ ವ್ಯಕ್ತಿತ್ವ, ಎಳಸುತನಕ್ಕೆ ಚೀಮಾರಿ ಹಾಕಿದರು.
ಕೋಮುವಾದಿ ಪಕ್ಷ ಈ ಹಿಂದೆ ನಿಸಾರ್ ಅಹಮದ್ ಅವರನ್ನು ನಿಂದಿಸಿದ್ದರು. ಈ ಕೀಳು ಮನಸ್ಸಿನವರಿಗೆ ಚಿನ್ನದ ಅಂಬಾರಿ ಕಟ್ಟುವ ವ್ಯಕ್ತಿ ಮುಸಲ್ಮಾನ ಅಕ್ರಮ್ ಅವರಿಗೆ ಇರದ ಅಪಚಾರ, ಮಡಿ, ಮೈಲಿಗೆ ದಸರಾ ಉದ್ಘಾಟಕರಿಗೆ ಏಕೆ? ಎಂದು ಪ್ರಶ್ನಿಸಿದರು. ಇದು ಸಾರ್ವತ್ರಿಕವಾಗಿ ಆಚರಿಸುವ ಕಾರ್ಯಕ್ರಮ ಬಿಜೆಪಿಯವರ ಕಾರ್ಯಕ್ರಮ ಅಲ್ಲ ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ನಗರಸಭೆ ಪೌರಾಯುಕ್ತ ರಾಮದಾಸ್ ಕರ್ತವ್ಯದಿಂದ ಬಿಡುಗಡೆ
ಪ್ರತಿಭಟನೆಯಲ್ಲಿ ಹಿರಿಯ ಸಾಹಿತಿ ಕೆ. ಎಸ್. ಭಗವಾನ್, ರಂಗಕರ್ಮಿ ಬಸವಲಿಂಗಯ್ಯ, ಲೇಖಕ ನಾ. ದಿವಾಕರ್, ಕಾಳ ಚೆನ್ನೆಗೌಡ, ಹಿರಿಯ ಪತ್ರಕರ್ತ ಟಿ. ಗುರುರಾಜ್, ಅಹಿಂದ ಜವರಪ್ಪ, ಜಗದೀಶ್ ಸೂರ್ಯ, ಸವಿತಾ ಪಾ ಮಲ್ಲೇಶ್, ರತಿರಾವ್, ಹೊಸಕೋಟೆ ಬಸವರಾಜು, ಹೊರೆಯಾಲ ದೊರೆಸ್ವಾಮಿ ಸೇರಿದಂತೆ ಇನ್ನಿತರರು ಇದ್ದರು.