ಎಲ್ಲರಿಗೂ ಸರ್ಕಾರಿ ನೌಕರಿ ಸಿಗುವುದಿಲ್ಲ. ಸರ್ಕಾರಿ ನೌಕರಿ ಎಂದರೆ ಶ್ರೇಷ್ಠ ಹಾಗೂ ಪವಿತ್ರವಾದ ಹುದ್ದೆಯಾಗಿದ್ದು, ಸರ್ಕಾರಿ ನೌಕರರು ತಮ್ಮ ಹುದ್ದೆಗಳ ಪವಿತ್ರತೆಯನ್ನು ಕಾಪಾಡಬೇಕು ಎಂದು ಚಿಕ್ಕಬಳ್ಳಾಪುರ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ತಟ್ಟಹಳ್ಳಿ ಕ್ರಾಸ್ ಬಳಿಯಿರುವ ಕೋಮುಲ್ ಗಾರ್ಡನ್ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿದ್ದ ಶಿಕ್ಷಕ ಕೆ ವಿ ನಾರಾಯಣಸ್ವಾಮಿಯವರ ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
“ಸರ್ಕಾರಿ ನೌಕರಿ ಸಿಕ್ಕ ಅವಕಾಶವನ್ನು ನಾವು ಸದ್ಬಳಕೆ ಮಾಡಿಕೊಳ್ಳಬೇಕು. ತಾವು ಅಲಂಕರಿಸುವಂತಹ ಹುದ್ದೆಗೆ ನ್ಯಾಯ ಒದಗಿಸಿಕೊಡಬೇಕು. ಇತ್ತಿಚಿಗೆ ಸರ್ಕಾರಿ ನೌಕರರು ಸಾಕಷ್ಟು ಸಮಸ್ಯೆಗಳು ಹಾಗೂ ಸವಾಲುಗಳನ್ನೂ ಕೂಡ ಎದುರಿಸುತ್ತಿದ್ದಾರೆ. ಅವುಗಳನ್ನು ಬಗೆಹರಿಸಲು ಸರ್ಕಾರಿ ನೌಕರರ ಸಂಘ ನಿರಂತರವಾಗಿ ಶ್ರಮಿಸುತ್ತಿದೆ. ವ್ಯವಸ್ಥೆಯಲ್ಲಿ ತುಂಬಾನೆ ಬದಲಾವಣೆಗಳಾಗುತ್ತಿವೆ. ಕೆಲಸದಲ್ಲಿ ತಂತ್ರಜ್ಞಾನವೂ ಹೆಚ್ಚಾಗುತ್ತಿದೆ. ಎಲ್ಲವನ್ನೂ ಅಳವಡಿಸಿಕೊಂಡು ಕೆಲಸ ಮಾಡಬೇಕು” ಎಂದು ಹೇಳಿದರು.
“ಸಾವಿರಾರು ಸಂಖ್ಯೆ ನೌಕರರು ಒಪಿಎಸ್ ಜಾರಿಗಾಗಿ ಹೋರಾಟ ಮಾಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಒಪಿಎಸ್ ಯೋಜನೆಯನ್ನು ಜಾರಿ ಮಾಡುವಂತೆ ನೌಕರರ ಸಂಘ ಒತ್ತಾಯ ಮಾಡುತ್ತದೆ. ಇನ್ನೂ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾಗಿದ್ದಂತಹ ಕೆ ವಿ ನಾರಾಯಣಸ್ವಾಮಿಯವರು ಇದೀಗ ವಯೋನಿವೃತ್ತಿ ಹೊಂದಿದ್ದು, ನಮ್ಮ ಸಂಘಕ್ಕೂ ಕೂಡ ನಷ್ಟವಾಗಿದೆ. ಅವರಂತೆಯೇ ನೌಕರರ ಸಂಘದ ಪದಾಧಿಕಾರಿಗಳು ಸಂಘವನ್ನು ಮುನ್ನೆಡೆಸಿಕೊಂಡು ಹೋಗಬೇಕು” ಎಂದರು.
ಬಳಿಕ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ಮಾತನಾಡಿ, “ಇಂದು ನಿವೃತ್ತಿಯಾಗಿರುವ ಕೆ ವಿ ನಾರಾಯಣಸ್ವಾಮಿಯವರು, ತಮ್ಮ ಅಧಿಕಾರಾವಧಿಯಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಇಂದು ಅವರ ಕೆಲಸ ಇಡೀ ಜಿಲ್ಲೆಗೆ ಮಾದರಿಯಾಗಿದೆ. ಸದಾ ಸರ್ಕಾರಿ ನೌಕರರಿಗಾಗಿ ದುಡಿದ ನಾರಾಯಣಸ್ವಾಮಿಯವರು ನಿವೃತ್ತಿಯಾಗಿದ್ದೇನೆಂದು ಸುಮ್ಮನಿರದೇ, ಸಮಾಜದಲ್ಲಿ ತೊಡಗಿಸಿಕೊಂಡು ಮತ್ತಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಅವರ ನಿವೃತ್ತಿ ಜೀವನ ಸುಖಮಯ ಹಾಗೂ ಆರೋಗ್ಯಕರವಾಗಿರಲಿ” ಎಂದು ಶುಭ ಹಾರೈಸಿದರು.
ಈ ಸುದ್ದಿ ಓದಿದ್ದೀರಾ? ಕೋಲಾರ ತಾಲ್ಲೂಕಿನ 30 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸಿದ್ದರಾಮಯ್ಯ ಚಾಲನೆ
ಇನ್ನೂ ಇದೇ ಕಾರ್ಯಕ್ರಮದಲ್ಲಿ ಗುಡಿಬಂಡೆ ತಾಲೂಕು ಸರ್ಕಾರಿ ನೌಕರರ ಸಂಘದ ನೂತನ ತಾಲೂಕು ಅಧ್ಯಕ್ಷರಾಗಿ ಶಿಕ್ಷಕ ಮುನಿಕೃಷ್ಣಪ್ಪ ಹಾಗೂ ಖಜಾಂಚಿಯಾಗಿ ಪಶುಸಂಗೋಪನೆ ಇಲಾಖೆಯ ನಟರಾಜ್ ಅವರುಗಳಿಗೆ ನೇಮಕಾತಿ ಪತ್ರವನ್ನು ನೌಕರರ ಸಂಘದ ರಾಜ್ಯಾಧ್ಯಕ್ಷರು ನೀಡಿದರು. ನಿವೃತ್ತಿಯಾದ ಕೆ ವಿ ನಾರಾಯಣಸ್ವಾಮಿ ಅವರನ್ನು ವೇದಿಕೆಯಲ್ಲಿದ್ದ ಗಣ್ಯರು ಆತ್ಮೀಯವಾಗಿ ಸನ್ಮಾನಿಸಿದರು.
ಈ ವೇಳೆ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಸರ್ಕಾರಿ ನೌಕರರು, ವಿವಿಧ ಮುಖಂಡರು, ವಿವಿಧ ತಾಲೂಕುಗಳ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ಗುಡಿಬಂಡೆ ನೌಕರರ ಸಂಘದ ಪದಾಧಿಕಾರಿಗಳು ಇದ್ದರು.