ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಅಖಿಲ ಭಾರತ ಸಮಿತಿಯ ಕರೆಯ ಮೇರೆಗೆ ʼಮಹಿಳೆಯರ ಮೇಲಿನ ದೌರ್ಜನ್ಯ, ಅಶ್ಲೀಲತೆ, ಬಾಲ ಗರ್ಭಿಣಿಯರ ಪ್ರಕರಣ, ಮದ್ಯಪಾನದ ಹಾವಳಿಯ ವಿರುದ್ಧ ದೇಶ ವ್ಯಾಪಿ ಪ್ರತಿಭಟನೆʼ ಹಮ್ಮಿಕೊಳ್ಳಲಾಗಿದ್ದು, ಸೆಪ್ಟೆಂಬರ್ 1ರಿಂದ 7ರವರೆಗೆ ‘ಮಹಿಳೆಯರಿಗೆ ಸಮಾನ ಹಕ್ಕು ಹಾಗೂ ಸಮಾನ ವೇತನವನ್ನು ಖಾತ್ರಿಪಡಿಸಿ’ ಎಂಬ ಘೋಷವಾಕ್ಯದೊಂದಿಗೆ ಪ್ರತಿಭಟನಾ ಸಪ್ತಾಹವನ್ನು ಆಚರಿಸಲಾಗುತ್ತಿದ್ದು, ಸೆಪ್ಟೆಂಬರ್ 4ರಂದು ಧಾರವಾಡ ಜಿಲ್ಲಾ ಸಮಿತಿಯಿಂದ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಲಾಗಿತ್ತು.
ಈ ವೇಳೆ ಎಐಎಂಎಸ್ಎಸ್ನ ಜಿಲ್ಲಾ ಅಧ್ಯಕ್ಷೆ ಮಧುಲತಾ ಗೌಡರ ಅವರು, ಸಮಾಜದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ವಿವಿಧ ದೌರ್ಜನ್ಯ ಪ್ರಕರಣಗಳ ಬಗ್ಗೆ ವಿವರಿಸುತ್ತ, “ಯಾವುದೇ ವಯಸ್ಸಿನ ಹೆಣ್ಣುಮಕ್ಕಳಿಗೂ ಇಂದು ಭದ್ರತೆಯೇ ಇಲ್ಲವಾಗಿದೆ. ಭ್ರೂಣಹತ್ಯೆ, ಬಾಲ್ಯವಿವಾಹ, ಮರ್ಯಾದಾ ಹತ್ಯೆ, ಅತ್ಯಾಚಾರ-ಗುಂಪು ಅತ್ಯಾಚಾರ ಮತ್ತು ಹತ್ಯೆಯಂತಹ ಮುಂತಾದ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಿವೆ. ನಮ್ಮ ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 80,813 ಮಂದಿ ಬಾಲಕಿಯರು ಗರ್ಭಿಣಿಯರಾಗಿರುವ ಆಘಾತಕಾರಿ ಸುದ್ದಿ ಬೆಳಕಿಗೆ ಬಂದಿದೆ” ಎಂದು ಕಳವಳ ವ್ಯಕ್ತಪಡಿಸಿದರು.
“ಇತ್ತೀಚಿಗೆ ಒಂಬತ್ತನೇ ತರಗತಿಯ ಬಾಲಕಿಯೊಬ್ಬಳು ತನ್ನ ವಸತಿ ಶಾಲೆಯ ಶೌಚಾಲಯದಲ್ಲಿ ಮಗುವನ್ನು ಹೆತ್ತಿರುವ ಘಟನೆ, ಸ್ವತಃ ಸಹೋದರನಿಂದಲೇ ಗರ್ಭವತಿಯಾದ ಶಿವಮೊಗ್ಗ ಘಟನೆ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ. ನಮ್ಮನ್ನಾಳುವ ಸರ್ಕಾರಗಳು, ʼಹೆಣ್ಣುಮಕ್ಕಳಿಗಾಗಿ ಹಲವಾರು ಯೋಜನೆಗಳನ್ನು ತಂದಿದ್ದೇವೆ. ಮಹಿಳಾ ಸಬಲೀಕರಣ ಮಾಡಿದ್ದೇವೆʼ ಎಂದೆಲ್ಲ ದೊಡ್ಡ ದೊಡ್ಡ ಭಾಷಣಗಳನ್ನು ಮಾಡುತ್ತಿವೆ. ಆದರೆ ವಾಸ್ತವದಲ್ಲಿ ಅವರ ದೋರಣೆ ಸ್ತ್ರೀ ವಿರೋಧಿ ಎಂಬುದು ಇಂತಹ ಪ್ರಕರಣಗಳಲ್ಲಿ ಸಾಬೀತಾಗಿದೆ. ಇತ್ತೀಚೆಗೆ ವಯಸ್ಸಿನ ಮಿತಿ ಇಲ್ಲದೇ ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅಪರಾಧಗಳೇ ಇದಕ್ಕೆ ಸಾಕ್ಷಿ. ಸಮಸ್ಯೆಗಳ ವಿರುದ್ಧ ಎಲ್ಲ ಮಹಿಳೆಯರು, ಪ್ರಜ್ಞಾವಂತ ನಾಗರಿಕರು ಒಂದಾಗಿ ಹೋರಾಡುವುದೊಂದೇ ನಮ್ಮೆದುರುಗಿರುವ ದಾರಿ” ಎಂಬುದನ್ನು ಒತ್ತಿ ಹೇಳಿದರು.
ಪ್ರತಿಭಟನೆಯ ಅಧ್ಯಕ್ಷತೆಯನ್ನು ಜಿಲ್ಲಾ ಉಪಾಧ್ಯಕ್ಷೆ ದೇವಮ್ಮ ದೇವತ್ಕಲ್ ವಹಿಸಿಕೊಂಡಿದ್ದರು. ಜಿಲ್ಲಾ ಕಾರ್ಯದರ್ಶಿ ಗಂಗೂಬಾಯಿ ಕೋಕರೆ, ಸಂಘಟನಾಕಾರರಾದ ಅನುಸೂಯ ಶಾನವಾಡ, ಎಲ್ಲಮ್ಮ ಪಾಟಿಲ್, ಜಯಲಕ್ಷ್ಮಿ ಹುರುಳಿ, ಅರುಣಮ್ಮ ದಾದುಗೋಳ, ಫಕೀರವ್ವ ಅರೇರ ಸೇರಿದಂತೆ ಹಳ್ಳಿ, ಬಡಾವಣೆಯ ಮಹಿಳೆಯರು, ಕಾಲೇಜು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಮಹಿಳಾ ಸಂಘಟನೆ ರಚನೆ: ಗೀತಾ ಎಚ್ ಟಿ
ಸ್ತ್ರೀಭ್ರೂಣ ಹತ್ಯೆ ನಿಲ್ಲಲಿ, ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಿ, ಅಶ್ಲೀಲ ಸಿನಿಮಾ ಸಾಹಿತ್ಯಗಳನ್ನು ಹಾಗೂಜಾಲತಾಣಗಳನ್ನು ನಿಷೇಧಿಸಿ, ಮದ್ಯಪಾನ ಹಾಗೂ ಮಾದಕ ವಸ್ತುಗಳನ್ನು ನಿಷೇಧಿಸಿ, ಬಾಲ್ಯವಿವಾಹವನ್ನು ತಡೆಗಟ್ಟಿ, ಮಹಿಳೆಯರಿಗೆ ಭದ್ರತೆ ಖಾತ್ರಿಪಡಿಸಿ ಸೇರಿದಂತೆ ಮುಂತಾದ ಘೋಷಣೆಗಳೊಂದಿಗೆ ಪ್ರತಿಭಟನಾ ಪ್ರದರ್ಶನ ಮುಕ್ತಾಯಗೊಂಡಿತು.