ಸಹಕಾರ ಸಂಘಗಳ ಸ್ಥಾಪನೆಯಿಂದ ಮಹಿಳೆಯರಿಗೆ ಸ್ವಯಂ ಉದ್ಯೋಗದ ಜೊತೆಗೆ ಆರ್ಥಿಕ ಬಲವರ್ಧನೆಯು ಸಾಧ್ಯ ಎಂದು ಶಾಸಕ ಸ್ವರೂಪ್ ಪ್ರಕಾಶ್ ಅಭಿಪ್ರಾಯಪಟ್ಟರು.
ಹಾಸನ ತಾಲೂಕಿನ ನಂಜೆ ದೇವರ ಕಾವಲ್ ಗ್ರಾಮದಲ್ಲಿ ಇಂದು ಸಮುದಾಯ ಭವನ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘ ಉದ್ಘಾಟಿಸಿ ಮಾತನಾಡಿದ ಅವರು, “ಹಾಲು ಉತ್ಪಾದನೆಯಲ್ಲಿ ಹಾಸನ ಹಾಲು ಒಕ್ಕೂಟ ರಾಜ್ಯದಲ್ಲಿ ಎರಡನೇ ಸ್ಥಾನ ಗಳಿಸಿದೆ. ಇದಕ್ಕೆ ಹಲವರ ಕೊಡುಗೆ ಇದೆ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು, ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರ ಪರಿಕಲ್ಪನೆಗೆ ಅನುಗುಣವಾಗಿ ಹಾಸನದಲ್ಲಿ ಕ್ಷೀರ ಉತ್ಪನ್ನ ಹೆಚ್ಚಾಗುತ್ತಿದೆ. ಇದರಿಂದ ಸಾವಿರಾರು ಮಹಿಳೆಯರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಅಲ್ಲದೆ ಹಲವು ಬಡ ಕುಟುಂಬಗಳು ಹೈನುಗಾರಿಕೆ ಹಾಗೂ ಹಾಲು ಉತ್ಪಾದನೆಯಿಂದ ಲಾಭಾಂಶ ಕಂಡುಕೊಂಡಿವೆ. ಇದಕ್ಕೆ ಇನ್ನಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರತಿ ಹಳ್ಳಿಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಸ್ಥಾಪನೆಗೆ ಮುಂದಾಗಿದ್ದೇವೆ” ಎಂದರು.
“ಗ್ರಾಮದಲ್ಲಿ ಸ್ಥಾಪನೆ ಆಗಿರುವ ವಿವಿಧೋದ್ದೇಶ ಸಹಕಾರ ಸಂಘದಿಂದ ಸುತ್ತಮುತ್ತಲ ಗ್ರಾಮದ ಜನರಿಗೆ ಹಲವು ಅನುಕೂಲಗಳು ಇವೆ, ಕೇವಲ ಹಾಲು ಉತ್ಪಾದನೆ ಮಾತ್ರವಲ್ಲದೆ, ವಿವಿಧ ಉದ್ದೇಶಗಳಿಗೆ ಈ ಸಂಘವನ್ನು ಬಳಸಿಕೊಳ್ಳಬಹುದು, ತಾವು ಬೆಳೆದ ಬೆಳೆಗಳು, ಔಷಧಿ, ಅಗತ್ಯ ವಸ್ತುಗಳ ಮಾರಾಟದ ವ್ಯವಸ್ಥೆಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು” ಎಂದರು.
ಇದನ್ನೂ ಓದಿ: ಹಾಸನ | ದಸರಾ ಆಹ್ವಾನ ತಿರಸ್ಕರಿಸುವಂತೆ ಸಾಹಿತಿ ಬಾನು ಮುಷ್ತಾಕ್ಗೆ ಮನವಿ
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್ ಮಾತನಾಡಿ, “ರೈತರಿಗೆ ಹಾಸನ ಜಿಲ್ಲಾ ಸಹಕಾರ ಬ್ಯಾಂಕ್ನಿಂದ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಕೇವಲ ಸಾಲ ನೀಡುವುದಲ್ಲದೆ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜನರು ಇದರ ಬಗ್ಗೆ ಮಾಹಿತಿ ಪಡೆದು, ಸದುಪಯೋಗ ಪಡೆದುಕೊಳ್ಳಬೇಕು. ಗ್ರಾಮದಲ್ಲಿ ಆರಂಭವಾಗಿರುವ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಆಹಾರ ಉತ್ಪನ್ನಗಳ ಮಾರಾಟಕ್ಕೂ ಅವಕಾಶ ಕಲ್ಪಿಸಬಹುದು. ಬಿತ್ತನೆ ಬೀಜ ಹಾಗೂ ಇನ್ನಿತರ ವಸ್ತುಗಳ ವ್ಯಾಪಾರ ವಹಿವಾಟಿಗೆ ಕೂಡ ಸಂಘ ಅನುಕೂಲ ಆಗಲಿದೆ. ಹಾಲನ್ನು ಉತ್ಪಾದನೆ ಮಾಡಿ ಶೇಖರಣೆ ಮಾಡಲು ಬಲ್ಕ್ ಮಿಲ್ಕ್ ಕೂಲರ್ ಸ್ಥಾಪನೆ ಮಾಡಲಾಗಿದೆ. ಇದರ ಸದುಪಯೋಗ ಪಡಿಸಿಕೊಳ್ಳಬೇಕು” ಎಂದು ಮನವಿ ಮಾಡಿದರು.
ಸಹಕಾರ ಇಲಾಖೆ ರೈತರ, ಬಡವರ ಆರ್ಥಿಕ ಕ್ಷೇಮಾಭಿವೃದ್ಧಿಗೆ ಕೆಲಸ ಮಾಡುತ್ತಿದೆ. ವಿವಿಧೋದ್ದೇಶ ಸಹಕಾರ ಸಂಘವನ್ನು ಎಲ್ಲಾ ನಿರ್ದೇಶಕರು ಹಾಗೂ ಪದಾಧಿಕಾರಿಗಳು ಒಗ್ಗಟ್ಟಾಗಿ ಒಳ್ಳೆಯ ರೀತಿಯಲ್ಲಿ ನಡೆಸಿಕೊಂಡು ಹೋದಲ್ಲಿ ಮುಂದಿನ ಪೀಳಿಗೆಗೆ ಉತ್ತಮ ಸೌಲಭ್ಯ ಒದಗಿಸಲು ಸಾದ್ಯ ಇದಕ್ಕೆ ಪೂರಕ ಸಹಕಾರ ಬೇಕಾದಲ್ಲಿ ಕೇಂದ್ರ ಸಹಕಾರ ಬ್ಯಾಂಕ್ ನೆರವು ಪಡೆಯಲು ಮನವಿ ಮಾಡಿದರು.