ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಸ್ತುತ ದಲಿತರು, ಅಲ್ಪಸಂಖ್ಯಾತರು, ಮಹಿಳೆಯರ ಮೇಲೆ ಅನ್ಯಾಯ, ದಬ್ಬಾಳಿಕೆ ಹೆಚ್ಚುತ್ತಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಕೇಂದ್ರ ಸಲಹಾ ಮಂಡಳಿ ಸದಸ್ಯ ಮೌಲಾನಾ ಮುಹಮ್ಮದ್ ಇಕ್ಬಾಲ್ ಮುಲ್ಲಾ ತೀವ್ರ ಕಳವಳ ವ್ಯಕ್ತಪಡಿಸಿದರು.
ಬೀದರ್ ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್ ಸೀರತ್ ಅಭಿಯಾನ ಪ್ರಯುಕ್ತ ಏರ್ಪಡಿಸಿದ್ದ ‘ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್’ ಸಂವಾದದಲ್ಲಿ ಅವರು ಮಾತನಾಡಿದರು.
‘ಆರನೇ ಶತಮಾನದಲ್ಲಿ ಹೆಣ್ಣುಮಕ್ಕಳನ್ನು ಜನಿಸಿದ ಕೂಡಲೇ ಸಮಾಧಿ ಮಾಡಲಾಗುತ್ತಿತ್ತು. ಇಂದು ಅನೇಕ ಶ್ರೀಮಂತರು ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿದ್ದಾರೆ. ಹೆಣ್ಣುಮಕ್ಕಳ ಬದುಕುವ ಹಕ್ಕು ಕಸಿಯುತ್ತಿದ್ದಾರೆ. ನಿರಪರಾಧಿಗಳು 30-35 ವರ್ಷ ಜೈಲಿನಲ್ಲಿದ್ದು ನಂತರ ನಿರಪರಾಧಿಗಳಾಗಿ ಬಿಡುಗಡೆಗೊಳ್ಳುತ್ತಿದ್ದಾರೆ. ಐದು ವರ್ಷಗಳಿಂದ ಜೈಲಿನಲ್ಲಿರುವ ಕೆಲವರ ವಿಚಾರಣೆ ಇನ್ನೂ ಪ್ರಾರಂಭವೇ ಆಗಿಲ್ಲ’ ಬೇಸರ ವ್ಯಕ್ತಪಡಿಸಿದರು.
ಪ್ರವಾದಿ ಅವರು ಗಂಡು-ಹೆಣ್ಣು ಎನ್ನುವ ಭೇದ ತೊಡೆದು ಹಾಕಿದರು. ಮೂವರು ಹೆಣ್ಣುಮಕ್ಕಳಿದ್ದರೆ, ಅವರ ಪಾಲನೆ-ಪೋಷಣೆ ಮಾಡಿದರೆ ಅವನು ಪ್ರವಾದಿಯವರ ಜತೆ ಸ್ವರ್ಗದಲ್ಲಿರುವನು ಎಂದು ಹೇಳಿದ್ದಾರೆ.ತಾಯಿಯ ಪಾದದಲ್ಲೇ ಸ್ವರ್ಗವಿದೆ. ಪ್ರವಾದಿ ಅವರು ಮಾನವರೆಲ್ಲ ಸಮಾನರು. ಒಂದೇ ತಂದೆ- ತಾಯಿಯ ಮಕ್ಕಳೆಂದು ಸಾರಿದರು. ಜಾತಿ, ಧರ್ಮ, ಮನೆತನ, ಬಣ್ಣ, ಭಾಷೆ ಆಧಾರಿತ ತಾರತಮ್ಯ ಹೋಗಲಾಡಿಸಿದರು. ಜನರ ಮನ ಪರಿವರ್ತನೆಗೈದು ಎಲ್ಲರಿಗೂ ಬದುಕುವ ಹಕ್ಕು ಕಲ್ಪಿಸಿ, ನ್ಯಾಯ ಸ್ಥಾಪಿಸಿದರು. ದೇವರಿಗೆ ಭಯಪಟ್ಟು, ಪ್ರವಾದಿ ಮುಹಮ್ಮದ್(ಸ) ಅವರ ಜೀವನ ಅನುಸರಿಸಿದರೆ ಮತ್ತೆ ನ್ಯಾಯ ಸ್ಥಾಪಿಸಲು ಸಾಧ್ಯವಿದೆ’ ಎಂದು ತಿಳಿಸಿದರು.
ನಿವೃತ್ತ ಪ್ರಾಚಾರ್ಯ ಮುಹಮ್ಮದ್ ನಿಝಾಮುದ್ದೀನ್ ಮಾತನಾಡಿ, ‘ಪೈಗಂಬರ್ ಮುಹಮ್ಮದ್ ನ್ಯಾಯದ ಹರಿಕಾರರಾಗಿದ್ದಾರೆ. ಸಾಮಾಜಿಕ, ಆರ್ಥಿಕ, ಮೂಲಭೂತ ಸೌಲಭ್ಯಗಳಂತಹ ವಿಷಯಗಳಲ್ಲಿ ಅವರ ನ್ಯಾಯ ಪರತೆ ಕಾಣಬಹುದಾಗಿದೆ’ ಎಂದು ತಿಳಿಸಿದರು.
ಉಪನ್ಯಾಸಕಿ ವಿದ್ಯಾದೇವಿ ಹಿರೇಮಠ ಮಾತನಾಡಿ, ‘ನಾನು ಪ್ರವಾದಿ ಮುಹಮ್ಮದ್ರ ಜೀವನದ ಪುಸ್ತಕ ಓದಿದಾಗ ಅವರ ಕುರಿತ ನನ್ನ ಮೊದಲಿನ ಅಭಿಪ್ರಾಯ ಬದಲಾಯಿತು. ನಿಷ್ಪಕ್ಷಪಾತ ಕನ್ನಡಕದಿಂದ ಇಸ್ಲಾಂ ಧರ್ಮದ ಅಧ್ಯಯನ ಮಾಡಿದರೆ ಸತ್ಯ ತಿಳಿಯುತ್ತದೆ ಎಂದರು.
ಡಾ.ರಾಮಚಂದ್ರ ಗಣಾಪುರ, ಡಾ. ವಿಜಯಶ್ರೀ ಬಶೆಟ್ಟಿ ಅವರು ಪ್ರವಾದಿಯವರ ಜೀವನದ ಮೇಲೆ ಬೆಳಕು ಚೆಲ್ಲಿದರು.
ಇದೇ ಸಂದರ್ಭದಲ್ಲಿ ಶಾಂತಿ ಪ್ರಕಾಶನದ ಪ್ರವಾದಿ ಮುಹಮ್ಮದ್ ಅವರ ಜೀವನ ಕುರಿತ ಎರಡು ಕೃತಿಗಳನ್ನು ಮೌಲಾನಾ ಮುಹಮ್ಮದ್ ಇಕ್ಬಾಲ್ ಮುಲ್ಲಾ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ ಬಿಡುಗಡೆ ಮಾಡಿದರು.
ಜಮಾ ಅತೆ ಇಸ್ಲಾಮಿ ಹಿಂದ್ ರಾಜ್ಯ ಸಲಹಾ ಮಂಡಳಿ ಸದಸ್ಯ ಮುಹಮ್ಮದ್ ಆಸಿಫುದ್ದೀನ್, ಬೀದರ್ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ವಿಠ್ಠಲದಾಸ್ ಪ್ಯಾಗೆ, ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದ ಸಂಚಾಲಕಿ ಅಸ್ಮಾ ಸುಲ್ತಾನಾ, ಜಿಲ್ಲಾ ಸಂಚಾಲಕಿ ತಾಹೀದ್ ಸಿಂಧೆ, ಪ್ರಮುಖರಾದ ಶ್ರೀಕಾಂತ ಸ್ವಾಮಿ, ಗುರುನಾಥ ಗಡ್ಡೆ, ಓಂಪ್ರಕಾಶ ರೊಟ್ಟೆ, ಮಹೇಶ ಗೋರನಾಳಕರ್, ವಿನಯ್ ಮಾಳಗೆ, ಎಂ.ಎಸ್. ಉಪ್ಪಿನ್, ಡಾ.ಲಕ್ಕಿ, ಬಾಬುರಾವ್ ಹೊನ್ನಾ, ವಿಜಯಕುಮಾರ, ಜಗದೀಶ್ವರ ಬಿರಾದಾರ, ಶಿಕ್ಷಕಿಯರಾದ ಬಿಲ್ಕಿಸ್ ಫಾತಿಮಾ, ಲತಿಕಾ, ಡಾ. ಸಾಲಿಕಾ ಕೌಸರ್ ಮತ್ತಿತರರು ಇದ್ದರು.
ಇದನ್ನೂ ಓದಿ : ಧಾರವಾಡ | ಸೌಹಾರ್ದತೆಗೆ ಸಾಕ್ಷಿಯಾದ ಈದ್ ಮಿಲಾದ್; ಹಬ್ಬದಲ್ಲಿ ವಿವಿಧ ಧರ್ಮಿಯರು ಭಾಗಿ
ಮುಹಮ್ಮದ್ ತಾಹಾ ಕಲೀಮುದ್ದೀನ್ ಕುರ್ಆನ್ ಪಠಿಸಿದರು. ಸಿರಾಜ್ ನೆಲವಾಡ ಕನ್ನಡಕ್ಕೆ ಅನುದಾದಿಸಿದರು. ಜಮಾಅತೆ ಇಸ್ಲಾಮಿ ಹಿಂದ್ ಸ್ಥಳೀಯ ಘಟಕದ ಅಧ್ಯಕ್ಷ ಮುಹಮ್ಮದ್ ಮೌಅಜ್ಜಂ ಸ್ವಾಗತಿಸಿದರು. ಮುಹಮ್ಮದ್ ಆರಿಫುದ್ದೀನ್ ವಂದಿಸಿದರು.