ತುಮಕೂರು ದಸರಾ ಲಾಂಛನ ಬಿಡುಗಡೆ ಮಾಡಿದ ಗೃಹ ಸಚಿವ ಪರಮೇಶ್ವರ್

Date:

Advertisements

 ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಅವರು ಸೋಮವಾರ ತುಮಕೂರು ದಸರಾ-2025 ಲಾಂಛನವನ್ನು ಬಿಡುಗಡೆ ಮಾಡಿದರು.

ತುಮಕೂರು ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಸಚಿವರು, ಕಳೆದ ವರ್ಷ ವಿನ್ಯಾಸಗೊಳಿಸಿದ್ದ ದಸರಾ ಲಾಂಛನವನ್ನೇ ದಸರಾ ಉತ್ಸವದ ಶಾಶ್ವತ ಲಾಂಛನವನ್ನಾಗಿಸಲು ನಿರ್ಣಯಿಸಲಾಗಿದೆ.  ಮೈಸೂರು ದಸರಾ ಉತ್ಸವದ ಲಾಂಛನವು ಮಹಾರಾಜರ ಕಾಲದಿಂದಲೂ ಬಳಕೆಯಲ್ಲಿರುವಂತೆ ಜಿಲ್ಲೆಯಲ್ಲಿಯೂ ಕಳೆದ ವರ್ಷದ ಲಾಂಛನವನ್ನೇ ಅಂತಿಮಗೊಳಿಸಿ ಮುಂದಿನ ದಿನಗಳಲ್ಲಿ ಶಾಶ್ವತ ದಸರಾ ಲಾಂಛನವಾಗಿ ಬಳಕೆಯಾಗಲಿದೆ ಎಂದು ತಿಳಿಸಿದರು. 

ಕಳೆದ ವರ್ಷ 2024ರ ದಸರಾ ಆಚರಣೆ ಸಂದರ್ಭದಲ್ಲಿ ಹಲವಾರು ಸವಾಲುಗಳನ್ನು ಎದುರಿಸಬೇಕಾಯಿತಾದರೂ ಉತ್ಸವವು ಅಭೂತಪೂರ್ವ ಯಶಸ್ಸು ಕಾಣುವ ಮೂಲಕ ಹೊಸ ಇತಿಹಾಸವನ್ನೇ ಸೃಷ್ಟಿಸಿತು.  ಜಿಲ್ಲೆಯ ಜನತೆಗೆ ನಾಡದೇವಿಯ ಮೇಲಿರುವ ಭಕ್ತಿ, ಪ್ರೀತಿಯೇ ದಸರಾ ಉತ್ಸವದ ಯಶಸ್ಸಿಗೆ ಕಾರಣವಾಯಿತು ಎಂದು ಅಭಿಪ್ರಾಯಪಟ್ಟರು. 

ಮೈಸೂರು ದಸರಾ ಉತ್ಸವಕ್ಕೆ ತನ್ನದೇ ಆದ ಐತಿಹ್ಯವಿದೆ. ದೇಶ-ವಿದೇಶಗಳಿಂದ ಗಣ್ಯರನ್ನು ಉತ್ಸವಕ್ಕೆ ಆಹ್ವಾನಿಸಿ ಸಾಂಸ್ಕೃತಿಕವಾಗಿ ಜನರನ್ನು ಒಗ್ಗೂಡಿಸುವ ಮೈಸೂರು ಮಹಾರಾಜರ ಆಶಯವೇ ಮೈಸೂರು ದಸರಾ ಜಗತ್ಪçಸಿದ್ಧವಾಗಲು ಕಾರಣವಾಯಿತು ಎಂದು ಮೈಸೂರು ದಸರಾ ಬೆಳೆದು ಬಂದ ದಾರಿಯ ಬಗ್ಗೆ ವಿವರಣೆ ನೀಡಿದರು. 

ಮೈಸೂರು ದಸರಾ ಮಾದರಿಯಲ್ಲಿಯೇ ತುಮಕೂರಿನಲ್ಲಿಯೂ ಹಲವಾರು ವಿನೂತನ ಹಾಗೂ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಾಕರ್ಷಕಗೊಳಿಸಲು ಈಗಾಗಲೇ 21 ಸಮಿತಿಗಳನ್ನು ರಚಿಸಿ ಜಿಲ್ಲಾಡಳಿತ ಕಾರ್ಯತತ್ಪರವಾಗಿದೆ ಎಂದು ತಿಳಿಸಿದರಲ್ಲದೆ,  ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2ರವರೆಗೆ 11 ದಿನಗಳ ಕಾಲ ನಡೆಯಲಿರುವ ಜಿಲ್ಲಾ ದಸರಾ ಉತ್ಸವಕ್ಕೆ ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಸೆಪ್ಟೆಂಬರ್ 22ರಂದು ವಿದ್ಯುಕ್ತವಾಗಿ ಚಾಲನೆ ನೀಡಲಾಗುವುದು.  ನಾಡಿನ ಶಕ್ತಿ ದೇವತೆ ಚಾಮುಂಡೇಶ್ವರಿ ದೇವಿಯನ್ನು ಭವ್ಯ ಮಂಟಪದಲ್ಲಿ ಪ್ರತಿಷ್ಠಾಪಿಸಿ ಪ್ರತೀ ದಿನ ವಿವಿಧ ಅಲಂಕಾರದಲ್ಲಿ ಪೂಜಿಸಿ  ಶಾಸ್ರೋಕ್ತವಾಗಿ ಹೋಮ-ಹವನಗಳನ್ನು ನಡೆಸಲಾಗುವುದು ಎಂದು ತಿಳಿಸಿದರು. 

ಈ ಜಿಲ್ಲಾ ದಸರಾ ಉತ್ಸವವನ್ನು ಯಾವುದೇ ಸರ್ಕಾರ, ಯಾವುದೇ ಆಡಳಿತ ವರ್ಗವಿರಲಿ ಪ್ರತೀ ವರ್ಷ ಆಚರಣೆಯನ್ನು ಮುಂದುವರೆಸಿಕೊಂಡು ಹೋಗಬೇಕು.  ಉತ್ಸವವನ್ನು ಎಲ್ಲರೂ ಒಟ್ಟಾಗಿ ಆಚರಿಸಬೇಕೇ ಹೊರತು ಒಡಕು-ಕೆಡಕುಗಳಿಗೆ ಅವಕಾಶ ನೀಡಬಾರದು ಎಂದು ಮಾರ್ಮಿಕವಾಗಿ ನುಡಿದರಲ್ಲದೆ, ಯಾವುದೇ ಜಾತಿ, ಧರ್ಮ, ಪಂಥ, ಪಕ್ಷವೆಂದು ಬೇಧ-ಭಾವವಿಲ್ಲದೆ ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಳೆದ ಬಾರಿಯಂತೆ ಈ ಬಾರಿಯೂ ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. 

ಕಳೆದ ವರ್ಷದ ಜಿಲ್ಲಾ ದಸರಾ ಉತ್ಸವದ ಯಶಸ್ಸು ರಾಜ್ಯದ ಇತರೆ ಜಿಲ್ಲೆಗಳಲ್ಲಿಯೂ ತುಮಕೂರಿನ ಕೀರ್ತಿಯನ್ನು ಹೆಚ್ಚಿಸುವಂತೆ ಮಾಡಿದೆ. ಈ ವರ್ಷದ ಉತ್ಸವದಲ್ಲಿ ಬೃಹತ್ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ವಸ್ತು ಪ್ರದರ್ಶನದಲ್ಲಿ ಹೆಚ್‌ಎಎಲ್, ಇಸ್ರೋ, ತೋಟಗಾರಿಕೆ ವಿಶ್ವ ವಿದ್ಯಾನಿಲಯ,  ಸೇರಿದಂತೆ ವಿವಿಧ ಇಲಾಖೆಗಳು ಪಾಲ್ಗೊಳ್ಳಲಿವೆ. ಇದರ ಜೊತೆಗೆ ಏರ್ಪಡಿಸಲಾಗುವ ಫಲ-ಪುಷ್ಪ ಪ್ರದರ್ಶನದಲ್ಲಿ ತುಮಕೂರಿನ ಹೆಸರಾಂತ ತಿಪಟೂರು ತಾಲ್ಲೂಕಿನ ಅರಳುಗುಪ್ಪೆ ದೇವಾಲಯದ ಮಾದರಿಯನ್ನು ನಿರ್ಮಿಸಲಾಗುವುದು ಎಂದು ಹೇಳಿದರು. 

ಉತ್ಸವದಲ್ಲಿ ವಿಶೇಷವಾಗಿ ಈ ಬಾರಿ ಹೆಲಿಕಾಪ್ಟರ್ ಪ್ರವಾಸ(ಹೆಲಿ ರೈಡ್), ಹಾಟ್ ಏರ್ ಬಲೂನ್, ಕಾಲೇಜು ವಿದ್ಯಾರ್ಥಿಗಳಿಂದ ಪಂಜಿನ ಕವಾಯತು, ಮಹಿಳಾ ಬೈಕ್ ರೈಡ್, ರಂಗೋಲಿ ಸ್ಪರ್ಧೆ, ದೀಪಾಲಂಕಾರ, ಡ್ರೋನ್ ಶೋ, ಬಾಣ-ಬಿರುಸುಗಳ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರಲ್ಲದೆ, ಮಹಿಳಾ ಮತ್ತು ಮಕ್ಕಳ ದಸರಾ, ಯುವ ದಸರಾ, ಕವಿಗೋಷ್ಠಿ ಹಾಗೂ ದಸರಾ ಕ್ರೀಡೆಯಲ್ಲಿ ಟೆನ್ನಿಸ್, ಶೂಟಿಂಗ್, ಕಬಡ್ಡಿ, ವಾಲಿಬಾಲ್, ಕುಸ್ತಿ ಪಂದ್ಯಗಳು ನಡೆಯಲಿವೆ. ಕಡೆಯ ದಿನ ಅಕ್ಟೋಬರ್ 2ರಂದು ಸುತ್ತ-ಮುತ್ತಲಿನ ಗ್ರಾಮ ದೇವತೆಗಳ ಮೆರವಣಿಗೆ, ಜಂಬೂ ಸವಾರಿ ಜರುಗಲಿದೆ ಎಂದು ತಿಳಿಸಿದರು. 

ಸಾರ್ವಜನಿಕರು ಹೆಲಿ ರೈಡ್‌ಗಾಗಿ 3900 ರೂ.ಗಳ ಶುಲ್ಕ ಪಾವತಿಸಿ ಇಂದಿನಿಂದಲೇ ಮೊಬೈಲ್ ಆಪ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹಾಟ್ ಏರ್ ಬಲೂನ್ ರೈಡ್‌ಗಾಗಿ 1000 ರೂ.ಗಳ ಶುಲ್ಕವನ್ನು ನಿಗದಿಪಡಿಸಲಾಗಿದೆ ಎಂದರು. 

ದಸರಾ ಅಂಗವಾಗಿ ಏರ್ಪಡಿಸಲಾಗುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಕಲಾವಿದರಿಗೆ ಆದ್ಯತೆ ನೀಡಲಾಗುವುದು. ಕಳೆದ ವರ್ಷ 3000 ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಲಾಗಿತ್ತು.  ಈ ಬಾರಿ ಮೂಡುಬಿದರೆಯ ಆಳ್ವಾಸ್ ಸಾಂಸ್ಕೃತಿಕ ತಂಡ, ಅನನ್ಯ ಭಟ್, ಅನುರಾಧ ವಿಕ್ರಾಂತ್, ಅರ್ಜುನ್ ಜನ್ಯ ತಂಡದಿAದ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮದ ಜೊತೆಗೆ ಕನ್ನಡದ ಸುಪ್ರಸಿದ್ಧ ಚಲನಚಿತ್ರ ನಟ ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ನಟಿ ರಮ್ಯಾ ಆಗಮಿಸಿ ನಮ್ಮನ್ನೆಲ್ಲಾ ರಂಜಿಸಲಿದ್ದಾರೆ ಎಂದು ತಿಳಿಸಿದರು.

ತುಮಕೂರು ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವಂತೆ 3ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಿಲ್ಲೆಯ 330 ಗ್ರಾಮ ಪಂಚಾಯತಿಗಳ ಮನೆ-ಮನೆಗೂ ಭೇಟಿ ನೀಡಿ ಜನತೆಗೆ ಆಹ್ವಾನ ನೀಡಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಜಿ.ಬಿ ಜ್ಯೋತಿಗಣೇಶ್, ಬಿ.ಸುರೇಶ್ ಗೌಡ,  ಡಾ. ಹೆಚ್.ಡಿ. ರಂಗನಾಥ್, ಹಾಗೂ ಷಡಕ್ಷರಿ ಮಾತನಾಡಿ ದಸರಾ ಉತ್ಸವ-2025ರ ಯಶಸ್ಸಿಗೆ ಶುಭ ಕೋರಿದರು. 

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜಿ. ಹಿಮಂತರಾಜು ಅವರು ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾಧಿಕಾರಿ  ಶುಭ ಕಲ್ಯಾಣ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಜಿಲ್ಲಾ ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭು ಜಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ದಸರಾ ಸಮಿತಿ ಹಾಗೂ ಉಪ ಸಮಿತಿಗಳ ಅಧಿಕಾರಿ ಹಾಗೂ ಅಧಿಕಾರೇತರ ಸದಸ್ಯರು ಸೇರಿದಂತೆ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು. 

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗದ ಸಂಚಾರ ವ್ಯವಸ್ಥೆಯಲ್ಲಿ ಅರಾಜಕತೆ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಾಗರಿಕರು ಹೈರಾಣು

ಒಮ್ಮೆ ಶಾಂತ, ಶಿಕ್ಷಣ ಹಾಗೂ ಸಂಸ್ಕೃತಿಯ ತಾಣವಾಗಿದ್ದ ಶಿವಮೊಗ್ಗ ನಗರ ಇತ್ತೀಚಿನ...

ತುಮಕೂರು | ಗಾಂಧೀ ತತ್ವಗಳಿಗೆ ವಿಶ್ವ ಮನ್ನಣೆ : ಡಾ. ಜಿ.ಪರಮೇಶ್ವರ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಅಹಿಂಸಾ ತತ್ವಗಳಿಗೆ ಇಡೀ ವಿಶ್ವದಲ್ಲಿಯೇ ಮನ್ನಣೆ ದೊರೆತಿದೆ...

ಶಿವಮೊಗ್ಗ | ಸತ್ಯ – ಅಹಿಂಸೆ ಪ್ರಬಲ ಅಸ್ತ್ರಗಳು : ಡಾ. ಟಿ. ಅವಿನಾಶ್

ಶಿವಮೊಗ್ಗ, ಭಾರತ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡಲು ಮಹಾತ್ಮ ಗಾಂಧೀಜಿಯವರು ಬಳಸಿದ ಅಸ್ತ್ರಗಳೆಂದರೆ...

ಉಡುಪಿ | ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಹಾತ್ಮಾ ಗಾಂಧೀಜಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ

ದೇಶದಲ್ಲಿ ಸಮಾನತೆಯನ್ನು ಬಯಸಿದ್ದೇ ಗಾಂಧೀಜಿಯವರ ಹತ್ಯೆಗೆ ಕಾರಣವಾಯಿತು, ಶೂದ್ರ ಮತ್ತು ಅತ್ಯಂತ...

Download Eedina App Android / iOS

X