ಮದ್ದೂರು ನಗರದಲ್ಲಿ ಗಣಪತಿ ಮೆರವಣಿಗೆ ವೇಳೆ ನಡೆದಿರುವ ಕಲ್ಲುತೂರಾಟದ ಘಟನೆ ಗಂಭೀರವಾದ ವಿಷಯ. ಮೆರವಣಿಗೆ ವೇಳೆ ಲೈಟ್ ಆಫ್ ಮಾಡಿರುವ ಮಾಹಿತಿ ಇದೆ. ಇದು ‘ಪೂರ್ವಯೋಜಿತ ಕೃತ್ಯ’ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಇದರ ಹಿಂದೆ ಯಾರಿದ್ದಾರೆ ಎಲ್ಲವೂ ಕೂಡ ಗೊತ್ತಾಗಬೇಕು. ಬಂಧಿತರಲ್ಲಿ ಇಬ್ಬರು ಹೊರ ಜಿಲ್ಲೆಯವರೆಂದು ತಿಳಿದುಬಂದಿದೆ. ನಾವು ಒಂದು ಸಮುದಾಯದ ಪರ ನಿಲ್ಲುವ ಪ್ರಶ್ನೆಯೇ ಇಲ್ಲ. ಮಂಡ್ಯ ಜನತೆಯ ಪರ ನಿಲ್ಲುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಉನ್ನತ ಮಟ್ಟದಲ್ಲಿ ಎಲ್ಲ ರೀತಿಯಲ್ಲೂ ಪೊಲೀಸ್ ಇಲಾಖೆಯಿಂದ ತನಿಖೆ ನಡೆಸಲು ಐಜಿ ಹಾಗೂ 8 ಮಂದಿ ಪೊಲೀಸ್ ವರಿಷ್ಠಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಸಂಪೂರ್ಣ ವರದಿ ಸಿದ್ದಪಡಿಸಿ ಶೀಘ್ರದಲ್ಲೇ ಮುಖ್ಯಮಂತ್ರಿಯವರಿಗೆ ಸಲ್ಲಿಸಲಾಗುವುದು” ಎಂದರು.

“ಘಟನೆಗೆ ಸಂಬಂಧಿಸಿದಂತೆ ಈಗಾಗಲೇ 21 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ನಾವು ಮಂಡ್ಯ ಜಿಲ್ಲೆಯ ಜನತೆಯ ಪರ ನಿಲ್ಲುತ್ತೇವೆ. ಈ ವಿಷಯದಲ್ಲಿ ಯಾವುದೇ ರೀತಿಯ ರಾಜಕೀಯ ಮಾಡುವುದಿಲ್ಲ. ಯಾರನ್ನೂ ಓಲೈಸುವುದಿಲ್ಲ. ಎಲ್ಲ ರೀತಿಯ ಆಯಾಮದಲ್ಲೂ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು” ಎಂದರು.
ʼಕೃತ್ಯಕ್ಕೆ ಪ್ರತಾಪ ಸಿಂಹರಂಥ ಪ್ರಚೋದನಾಕಾರಿ ಮನಸ್ಥಿತಿಗಳೇ ಕಾರಣʼ: ಆರೋಪ
“ಇಂತಹ ಘಟನೆ ನಡೆಯಲು ಪ್ರತಾಪ ಸಿಂಹ ಅವರಂಥ ಪ್ರಚೋದನಾಕಾರಿ ಮನಸ್ಥಿತಿಗಳೇ ಕಾರಣ. ಈಗಾಗಲೇ ಬಿಜೆಪಿ ಅವರನ್ನು ದೂರ ಇಟ್ಟಿದೆ. ಅದಕ್ಕಾಗಿ ಏನೇನೋ ಪ್ರಚೋದನೆ ಮಾಡ್ತಾರೆ. ನಾನು ತುಂಬಾ ರಾಜಕೀಯ ನೋಡಿಕೊಂಡು ಬಂದಿದ್ದೇನೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬಿಜೆಪಿ ಶಾಸಕ ಟಿ.ಎಸ್.ಶ್ರೀವತ್ಸ ಸಹಿತ ಹಲವು ಮುಖಂಡರು ಪೊಲೀಸ್ ವಶಕ್ಕೆ
“ಕುಮಾರಸ್ವಾಮಿಯವರು ‘ಕಾಂಗ್ರೆಸ್ ಅವನತಿʼ ಶುರು ಅಂತಾರೆ. ಮೊದಲು ಜೆಡಿಎಸ್ ಅವನತಿಯಾಗುವುದನ್ನು ತಡೆಯಲಿ. ಇದಕ್ಕೆ ರಾಜಕೀಯ ಬೆರೆಸಬೇಡಿ. ರಾಜಕಾರಣ ಹೋರಾಟ ಬೇರೆ ಕಡೆ ಮಾಡೋಣ. ಧರ್ಮದ ಹೆಸರಿನಲ್ಲಿ ನಮ್ಮ ಸರ್ಕಾರ ರಾಜಕೀಯ ಮಾಡುವುದಿಲ್ಲ. ಧಾರ್ಮಿಕ ಸಂಘಟನೆಗಳು ಯಾವುದೇ ರಾಜಕೀಯ ಪ್ರಚೋದನೆಗೆ ಒಳಗಾಗಬಾರದು” ಎಂದು ಮನವಿ ಮಾಡಿದರು.
ಈ ವೇಳೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಕುಮಾರ, ಜಿ.ಪಂ ಸಿಇಒ ನಂದಿನಿ ಸೇರಿದಂತೆ ಅನೇಕರು ಇದ್ದರು.