ವಿಜಯನಗರ ಜಿಲ್ಲೆಯ ಹೊಸಪೇಟೆಯ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕಳೆದ ವರ್ಷ ಆಗಸ್ಟ್ ತಿಂಗಳಲ್ಲೇ ತುಕ್ಕು ಹಿಡಿದು ಕೊಚ್ವಿ ಹೊಗಿತ್ತು. ಆದರೆ, ಇದರ ಕಾಮಗಾರಿ ಮಂದಗತಿಯಲ್ಲಿ ಸಾಗಿದ್ದು ಆದಷ್ಟು ಬೇಗ ಜಲಾಶಯದ ಕ್ರಸ್ಟ್ ಗೇಟ್ಗಳನ್ನು ದುರಸ್ತಿಗೊಳಿಸಬೇಕೆಂದು ತುಂಗಭದ್ರಾ ಜಲಾಶಯದ ಆವರಣದಲ್ಲಿ ನೂರಾರು ಸಂಖ್ಯೆಯಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಜಲಾಶಯದ ಆವರಣದಲ್ಲಿ 4 ಜಿಲ್ಲೆಗಳ ಪಕ್ಷಾತೀತ ಹೋರಾಟ ಸಮಿತಿ ನೂರಾರು ರೈತರೊಂದಿಗೆ ಒಂದು ವರ್ಷದಿಂದ ದುರಸ್ತಿಯಾಗದ ಕ್ರಸ್ಟ್ಗಳನ್ನು ದುರಸ್ತಿ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ನೀರಾವರಿ ನಿಗಮ ಮುನಿರಾಬಾದ್ ಮುಖ್ಯ ಅಭಿಯಂತರರಿಗೆ ಹಾಗೂ ಭಾರತ ಸರಕಾರ ತುಂಗಭದ್ರಾ ಜಲಾಶಯ ಮಂಡಳಿ ಕಾರ್ಯದರ್ಶಿ ಹೊಸಪೇಟೆ ಇವರಿಗೆ ಮನವಿ ಸಲ್ಲಿಸಿದರು.
ಮಾಜಿ ಶಾಸಕ, ಸಚಿವ ವೆಂಕಟ ನಾಡಗೌಡ ಮಾತನಾಡಿ, “ಜನರು ಸ್ವಾಲಂಬಿಯಾಗಿ ಬದುಕುವುದಕ್ಕೆ ಯಾವ ಸರಕಾರವೂ ಯೋಜನೆ ರೂಪಿಸಿಲ್ಲ. ಕಾರ್ಪೊರೇಟ್ಗಳ ಅನುಕೂಲಕ್ಕೆ ತಕ್ಕಂತೆ ಯೋಜನೆ ರೂಪಿಸುತ್ತಿವೆ. ಎರಡು ರಾಜ್ಯದ ರೈತರು ಹಾಗೂ ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ರೈತರು ತುಂಗಾಭದ್ರಾ ಜಲಾಶಯದ ನೀರು ನೆಚ್ಚಿದ್ದಾರೆ. ಆದರೆ, ಸರ್ಕಾರ ರೈತರ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಾಜ್ ಮಾಲಿಪಾಟೀಲ್ ಮಾತಾನಾಡಿ, “ಕರ್ನಾಟಕ ಹಾಗೂ ಆಂಧ್ರಪ್ರದೇಶ ರೈತರು ತುಂಗಾಭದ್ರಾ ಜಲಾಶಯ ನೆಚ್ವಿ ಬದುಕನ್ನ ಕಟ್ಟಿಕೊಂಡಿದ್ದಾರೆ. ಕಳೆದ ವರ್ಷದಲ್ಲಿ ಜಲಾಶಯದ ಡ್ಯಾಮ್ನ ಕ್ರಸ್ಟ್ಗಳು ಶಿಥಿಲಗೊಂಡಿದ್ದು ಮಾಹಿತಿ ಇದ್ದರೂ ಇಲ್ಲಿಯವರೆಗೂ ಅದನ್ನು ದುರಸ್ತಿಗೊಳಿಸುವ ಕೆಲಸ ಮಾಡುತ್ತಿಲ್ಲ. ಕಾಲಮಿತಿಯಲ್ಲಿ ಕ್ರಸ್ಟ್ ಗೇಟ್ಗಳನ್ನು ಅಳವಡಿಸದೇ ತಾತ್ಸಾರ ತೋರುತ್ತಿದೆ. ನದಿಯ ನೀರನ್ನೇ ನಂಬಿರುವ ರೈತರಿಗೆ ಅನುಕೂಲ ಮಾಡುವ ಇಚ್ಛಾಸಕ್ತಿ ಸರಕಾರಕ್ಕೆ ಹಾಗೂ ಜನಪ್ರತಿನಿಧಿಗಳಿಗೆ ಇಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನದ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, “ಈ ದೇಶದ ಮೂಲ ಒಕ್ಕಲುತನ ತುಂಗಭದ್ರಾ ಆಣೆಕಟ್ಟೆಯ ಸಮೀಪದಲ್ಲಿ 200ಕ್ಕೂ ಹೆಚ್ಚು ಕೈಗಾರಿಕಾ ಕಾರ್ಖಾನೆಗಳು ಇವೆ ಜಲಾಶಯದ ನೀರು ಕಾರ್ಖಾನೆಗಳಿಗೆ ಬಳಸಲಾಗುತ್ತಿದೆ ಕೊಪ್ಪಳದ ಭಾಗದ ರೈತರಿಗೆ ನೀರಿನ ಕೊರತೆಯಾಗಿದೆ. ಬಸಾಪುರ ಗ್ರಾಮದ ಕೆರೆಯನ್ನು ಸರಕಾರ ಬಲ್ಡೋಟಾ ಕಾರ್ಖಾನೆಗೆ ಲೀಜ್ ಕೊಟ್ಟಿದೆ. ಆ ಕೆರೆಯನ್ನು ಲೀಜ್ ಕೊಡಲು ಯಾವ ಅಧಿಕಾರ ಇದೆ ಕೇಳಬೇಕಿದೆ. ಅಲ್ಲದೇ ಸರಕಾರ ರೈತರ ಮೇಲೆ ದಾಡಸಿತನ ತೋರಿಸುತ್ತಿದೆ ಹಾಗೆ ನಾವೂ ಸರಕಾರಕ್ಕೆ ನಮ್ಮ ದಾಡಸಿ ತೋರಿದಾಗ ಎಚ್ಚೆತ್ತುಕೊಂಡು ಜಲಾಶಯದ ಕ್ರಸ್ಟ್ ಗೇಟ್ ಶೀಘ್ರವೇ ದುರಸ್ತಿಗೊಳಿಸುತ್ತದೆ” ಎಂದರು.
ಇದನ್ನೂ ಓದಿ: ವಿಜಯನಗರ | ಮಹಮದ್ ಪೈಗಂಬರ್ ಜನ್ಮದಿನ: ಡಿವೈಎಫ್ಐನಿಂದ ಸಿಹಿ ಹಂಚಿಕೆ
ಮಾನ್ವಿ ಮಾಜಿ ಶಾಸಕ ಗಂಗಾಧರ ನಾಯಕ್ ಮಾತನಾಡಿ, “ಸರಕಾರ ಮನಸ್ಸು ಮಾಡಿದರೆ ಜಲಾಶಯದ ಕ್ರಸ್ಟ್ ಗೇಟ್ ತೆರೆಯುವುದು ದೊಡ್ಡ ಮಾತಲ್ಲ. ಆದರೆ, ರೈತರ ಹಿತಾಸಕ್ತಿ ಕಾಯುವ ಇಚ್ಚೆ ಇಲ್ಲ ಸರಕಾರಕ್ಕೆ. ಜನಶಕ್ತಿ ಇದ್ದಲ್ಲಿ ಸರಕಾರ ಬರುತ್ತದೆ ಜನಶಕ್ತಿ ಇಲ್ಲಂದ್ರೆ ಅಲ್ಲಿಯೇ ಕೂಡುತ್ತದೆ. ಕ್ರಸ್ಟ್ ಗೇಟ್ ತೆರೆಯುವಂತೆ ಸದನದಲ್ಲಿ ಧ್ವನಿ ಎತ್ತಬೇಕು. ಹಾಗೂ ನದಿಯ ನೀರು ಕಳ್ಳತನವಾಗುತ್ತಿದೆ. ಅದರ ಮೇಲೆ ನಿಗಾವಹಿಸಿ ಅಂತವರನ್ನ ಬಂಧಿಸಬೇಕು ಹಾಗೂ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನಾಕಾರರ ಮನವಿ ಸ್ವೀಕರಿಸಲು ತುಂಗಾಭದ್ರಾ ಜಲಾಶಯದ ಕಾರ್ಯದರ್ಶಿ ಬರದೇ ತಮ್ಮ ಕೆಳ ಅಧಿಕಾರಿ ಕಳಿಸಿದ್ದರಿಂದ ರೈತ ಮುಖಂಡರು ಇಂಜಿನಿಯರ್ ಹಾಗೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಂತರ ಕಾರ್ಯದರ್ಶಿ ಒಆರ್ಕೆ ರೆಡ್ಡಿ ಬಂದು ಮನವಿ ಸ್ವೀಕರಿಸಿದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪೂರ ನಾಗೇಂದ್ರ, ಮಾಂತೇಶ ಪಾಟೀಲ್, ಜೆ.ಎಮ್ ವೀರಸಂಗಯ್ಯ, ಆರ್.ಎಸ್.ಪಾಟೀಲ್ ಭೀಮಸೇನ ಪಾಟೀಲ್, ಡಿಎಚ್ ಪೈಜಾರ, ಶ್ಯಾಮ ಸುಧಾಕರ, ಕೀರ್ತಿ ನಾಯಕ ಹಾಗೂ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.