ಜ್ಯುವೆಲ್ಲರಿ ವರ್ಕ್ ಶಾಪ್ ವೊಂದಕ್ಕೆ ಕಳ್ಳರು ನುಗ್ಗಿ ಅಪಾರ ಮೌಲ್ಯದ ಸೊತ್ತುಗಳನ್ನು ಕಳವುಗೈದ ಘಟನೆ ಸೆ. 8 ರಂದು ಸೋಮವಾರ ರಾತ್ರಿ ನಗರದ ಚಿತ್ತರಂಜನ್ ಸರ್ಕಲ್ ಬಳಿ ನಡೆದಿದೆ.
ಚಿತ್ತರಂಜನ್ ಸರ್ಕಲ್ ಬಳಿ ಇರುವ ಚಿನ್ನ ಮತ್ತು ಬೆಳ್ಳಿ ಕರಗಿಸುವ ‘ವೈಭವ್ ರಿಫೈನರ್’ ಎಂಬ ಅಂಗಡಿಯ ನಕಲಿ ಬೀಗ ಬಳಸಿ ಒಳನುಗ್ಗಿದ ಕಳ್ಳರು ಡ್ರಾವರ್ನ ನಕಲಿ ಬೀಗದಿಂದ 600 ಗ್ರಾಂ ತೂಕದ ಚಿನ್ನದ ಗಟ್ಟಿ ಮತ್ತು ಗೋಲ್ಡ್ ಲಿಕ್ವಿಡ್ ಸೇರಿದಂತೆ ವಿವಿಧ ಸೊತ್ತುಗಳನ್ನು ಕಳವು ಮಾಡಿರುವುದಾಗಿ ತಿಳಿದುಬಂದಿದೆ.
ಈ ಹಿಂದೆ ಅಂಗಡಿಯಲ್ಲಿ ದುಡಿಯುತ್ತಿದ್ದ ಕಾರ್ಮಿಕರೇ ಈ ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿರುವ ಸಂದೇಹ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಕಲಿ ಕೀ ಬಳಸಿ ಪರಿಚಿತರಿಂದಲೇ ಕೃತ್ಯ ನಡೆದಿರಬಹುದು ಎಂದು ಶಂಕಿಸಲಾಗಿದೆ. ಸಿಸಿ ಕ್ಯಾಮರಾಕ್ಕೆ ಪೈಂಟ್ ಎರಚಿದ ದೃಶ್ಯ ಸೆರೆ ಸೆರೆಯಾಗಿದೆ.
ಸ್ಥಳಕ್ಕೆ ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ. ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಮಂಜುನಾಥ ಭೇಟಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.