ಮಧ್ಯಪ್ರದೇಶ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಸಮ್ಮುಖದಲ್ಲಿಯೇ ಇಂದೋರ್ ಪಾಲಿಕೆಯ ಬಿಜೆಪಿ ಮೇಯರ್ ಪುಷ್ಯಮಿತ್ರ ಭಾರ್ಗವ ಅವರ ಪುತ್ರ ಭಾರೀ ಭಾಷಣ ಮಾಡಿದ್ದು, ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸರ್ಕಾರದ ವೈಫಲ್ಯಗಳನ್ನು ಬಿಚ್ಚಿಡುವ ಮೂಲಕ ವಿಪಕ್ಷಗಳ ಪಾತ್ರ ನಿರ್ವಹಿಸಿದ್ದಾರೆ.
ಇಂದೋರ್ನ ದೇವಿ ಅಹಲ್ಯಾ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಚರ್ಚಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದರು. ಅವರ ಸಮ್ಮುಖದಲ್ಲೇ ಭಾಷಣ ಮಾಡಿದ ಮೇಯರ್ ಪುಷ್ಯಮಿತ್ರ ಭಾರ್ಗವ ಅವರ ಪುತ್ರ ಸಂಘಮಿತ್ರ ಭಾರ್ಗವ ಅವರು ‘ವಿರೋಧ ಪಕ್ಷದ ಕಾರ್ಯ’ ಎಂಬ ವಿಷಯ ಕುರಿತು ಮಾತನಾಡಿದರು. ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದರು.
ಬುಲೆಟ್ ರೈಲು ಯೋಜನೆಯ ಕುರಿತು ಮಾತನಡಿದ ಭಾರ್ಗವ, “ಬುಲೆಟ್ ರೈಲು ಯೋಜನೆಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದೆ. ಯೋಜನೆಯ ಭೂಸ್ವಾಧೀನದಲ್ಲಿ ಭಾರೀ ಹಗರಣಗಳು ನಡೆದಿವೆ. ಆದರೆ, ಬುಲೆಟ್ ರೈಲು ಮಾತ್ರ ಸರ್ಕಾರದ ‘ಪವರ್ಪಾಯಿಂಟ್ ಪ್ರಸೆಂಟೇಷನ್’ (ಪಿಪಿಟಿ) ಮೀರಿ ಅನುಷ್ಠಾನಕ್ಕೆ ಬಂದಿಲ್ಲ” ಎಂದು ಆರೋಪಿಸಿದ್ದಾರೆ.
ರೈಲು ಪ್ರಯಾಣದಲ್ಲಿ ಸುರಕ್ಷತೆ ಸಾಧನೆವೆಂದೇ ಸರ್ಕಾರ ಜಾಹೀರಾತುಗಳ ಮೂಲಕ ಪ್ರಚಾರ ಮಾಡಿದ ‘ಕವಚ’ ತಂತ್ರಜ್ಞಾನದ ಕುರಿತು ಮಾತನಾಡಿದ ಭಾರ್ಗವ, “ಕಳೆದ 10 ವರ್ಷಗಳಲ್ಲಿ 20,000ಕ್ಕೂ ಹೆಚ್ಚು ಜನರು ರೈಲು ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ. ರೈಲು ಹಳಿತಪ್ಪಿದಾಗ, ಬೋಗಿಗಳು ಉರುಳಿ ಬಿದ್ದಾಗ ತಾಯಂದಿರ ಮಡಿಲು ಖಾಲಿಯಾಗುತ್ತದೆ. ಮಕ್ಕಳ ಭವಿಷ್ಯವು ಕತ್ತಲೆಗೆ ಜಾರುತ್ತದೆ. ವೃದ್ಧ ತಂದೆಯ ಕೊನೆಯ ಭರವಸೆಯನ್ನೂ ಕಸಿದುಕೊಳ್ಳುತ್ತದೆ” ಎಂದು ವಾಗ್ದಾಳಿ ನಡೆಸಿದ್ದಾರೆ.
“400 ರೈಲ್ವೇ ನಿಲ್ದಾಣಗಳನ್ನು ಆಧುನೀಕರಣಗೊಳಿಸಿ, ವಿಮಾನ ನಿಲ್ದಾಣದಲ್ಲಿ ದೊರೆಯುವ ಸೌಲಭ್ಯಗಳು ದೊರೆಯವಂತೆ ಮೇಲ್ದರ್ಜೆಗೆ ಏರಿಸಲಾಗುತ್ತದೆ ಎಂಬುದಾಗಿ ಸರ್ಕಾರ ಘೋಷಿಸಿತ್ತು. ಆದರೆ, ಈವರೆಗೆ, ಕೇವಲ 20 ನಿಲ್ದಾಣಗಳನ್ನು ಮಾತ್ರವೇ ಅಭಿವೃದ್ಧಿ ಮಾಡಲಾಗಿದೆ” ಎಂದು ದೂರಿದ್ದಾರೆ.
ಭಾರ್ಗವ ಅವರ ಭಾಷಣವನ್ನು ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಸೇರಿದಂತೆ ಕಾಂಗ್ರೆಸ್ ನಾಯಕರು ಶ್ಲಾಘಿಸಿದ್ದಾರೆ. ‘ಪ್ರಭಾವಿ ಭಾಷಣಕಾರ’ ಎಂದು ಬಣ್ಣಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ದೇಶಪಾಂಡೆ ದುರ್ವರ್ತನೆ: ವಯಸ್ಸಾದರೂ ಬುದ್ಧಿ ಬರಲಿಲ್ಲವೇ?
ಭಾರ್ಗವ್ ಅವರ ತಂದೆ ಪುಷ್ಯಮಿತ್ರ ಭಾರ್ಗವ, ವೃತ್ತಿಯಲ್ಲಿ ವಕೀಲರಾಗಿದ್ದರು. ಬಿಜೆಪಿ ಸೇರಿ ರಾಜಕೀಯ ಅರಂಭಿಸಿದ ಅವರು ಪ್ರಸ್ತುತ ಇಂದೋರ್ ಮಹಾನಗರ ಪಾಲಿಕೆಯ ಮೇಯರ್ ಆಗಿದ್ದಾರೆ. ತಮ್ಮ ಮಗನ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪುಷ್ಯಮಿತ್ರ ಅವರು, “ಭಾಷಣದಲ್ಲಿ ಭಾರ್ಗವ ಮಾತನಾಡಿದ ಅಂಶಗಳು ಅವರ ಸ್ವಂತ ಅಭಿಪ್ರಾಯಗಳು. ಅವರು ಸರ್ಕಾರದ ಪರ ಮತ್ತು ವಿರುದ್ಧವಾಗಿ ಮಾತನಾಡಿದರು. ಸಂಘಟಕರು ಅವರ ಚರ್ಚಾ ಕೌಶಲ್ಯವನ್ನು ನೋಡಿ, ಅಭಿನಂದಿಸಿದ್ದಾರೆ. ಅದೊಂದು ಸ್ಪರ್ಧೆ. ಆದರೆ, ಕಾಂಗ್ರೆಸ್ ಅಂತಹ ಕ್ರೀಡೆಗಳನ್ನೂ ರಾಜಕೀಯವಾಗಿಯೇ ನೋಡುತ್ತದೆ ಮತ್ತು ಬಳಸಿಕೊಳ್ಳುತ್ತದೆ” ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಯಾದವ್ ಕೂಡ ಬಿಜೆಪಿ ವಿರುದ್ಧದ ಭಾಷಣದ ಕುರಿತು ಹೆಚ್ಚು ರಾಜಕೀಯ ಚರ್ಚೆಯಾಗದಂತೆ ನೋಡಿಕೊಳ್ಳಲು ಯತ್ನಿಸಿದರು. “ನಾನು ನನ್ನ ಸೋದರಳಿಯನಿಗೆ (ಭಾರ್ಗವ) ದೊಡ್ಡ ಚಪ್ಪಾಳೆ ತಟ್ಟುತ್ತೇನೆ… ಅವರು ತಮ್ಮ ಅಭಿಪ್ರಾಯಗಳನ್ನು ನಿರ್ಭಯವಾಗಿ ಮಂಡಿಸಿದ ರೀತಿ ಅಭಿನಂದನೀಯ… ಅವರಿಗೆ ‘ವಿರೋಧ ಪಕ್ಷ ಕಾರ್ಯ’ ಎಂಬ ವಿಷಯವನ್ನು ನೀಡಿದಾಗ, ಅವರು ಅದರಂತೆಯೇ ಉತ್ತಮವಾಗಿ ಮಾತನಾಡಿದರು. ಆದರೆ, ನಾನು ಖಂಡಿತವಾಗಿಯೂ ಅವರು ಮಂಡಿಸಿದ ವಿಷಯಗಳಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡಬಯಸುತ್ತೇನೆ…” ಎಂದು ಯಾದವ್ ಹೇಳಿದ್ದಾರೆ.