ಕರ್ನಾಟಕ ಸರ್ಕಾರವು ಜಾಗತಿಕ ಶೈಕ್ಷಣಿಕ ವಲಯದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ವಿಶ್ವದ ಅತ್ಯಂತ ಶ್ರೇಷ್ಠ ಮತ್ತು ಪುರಾತನ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಇಂಗ್ಲೆಂಡ್ನ ಪ್ರತಿಷ್ಠಿತ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದೊಂದಿಗೆ ಸಂಶೋಧನೆ ಮತ್ತು ಅಭಿವೃದ್ಧಿ ಉತ್ತೇಜಿಸುವ ನಿಟ್ಟಿನಲ್ಲಿ ದೀರ್ಘಾವಧಿಯ ಶೈಕ್ಷಣಿಕ ಸಹಯೋಗವನ್ನು ಘೋಷಿಸಿದೆ.
ಈ ಸಹಯೋಗವು ಕರ್ನಾಟಕದ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಹೊಸ ಆಯಾಮ ನೀಡುವುದರೊಂದಿಗೆ, ವಿದ್ಯಾರ್ಥಿ ಹಾಗೂ ಅಧ್ಯಾಪಕರಿಗೆ ಅಂತಾರಾಷ್ಟ್ರೀಯ ಮಟ್ಟದ ಜ್ಞಾನ ವಿನಿಮಯ, ಸಂಶೋಧನೆ ಹಾಗೂ ಆವಿಷ್ಕಾರಕ್ಕೆ ಅವಕಾಶಗಳನ್ನು ಒದಗಿಸುವುದೇ ಪ್ರಧಾನ ಉದ್ದೇಶವಾಗಿದೆ.
ಈ ಸಹಯೋಗವನ್ನು ಪ್ರೊ. ರಾಜೀವ್ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ನಿರ್ದೇಶಕ ಪ್ರೊ. ಟೊನ್ನಿ ಅವರು ಮುನ್ನಡೆಸಲಿದ್ದಾರೆ. ʼಸಂಶೋಧನಾ ಸಹಭಾಗಿತ್ವʼ, ʼಜ್ಞಾನ ವಿನಿಮಯʼ ಹಾಗೂ ʼವಿದ್ಯಾರ್ಥಿ ವಿನಿಮಯʼ ಕಾರ್ಯಕ್ರಮಗಳು ಸಹಯೋಗದ ಪ್ರಮುಖ ಕ್ಷೇತ್ರಗಳಾಗಿ ಕಾರ್ಯನಿರ್ವಹಿಸಲಿವೆ.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಮೋದಿಯವರ ತಾಯಿ ಮಾತ್ರ ಹೆಣ್ಣೇ! ಸೋನಿಯಾರನ್ನು ಅವಮಾನಿಸುವುದು ಸರಿಯೇ?
ಈ ಮಹತ್ವದ ಉಪಕ್ರಮವನ್ನು ಪರಿಕಲ್ಪನೆಗೊಳಿಸಿ ಮುನ್ನಡೆಸಲು ಪ್ರೊ. ಸುರೇಶ್ ರೇಣುಕಪ್ಪ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಉಳಿದಂತೆ ಸಚಿವ ಡಾ. ಎಂ ಸಿ ಸುಧಾಕರ್, ಸಚಿವ ಡಾ. ಶರಣಪ್ರಕಾಶ್ ಪಾಟೀಲ, ಶಾಸಕ ಡಾ. ಮಂಜುನಾಥ ಭಂಡಾರಿ, ಕುಲಪತಿ ಪ್ರೊ. ಜಯಕರ್, ಕುಲಪತಿ ಪ್ರೊ. ಭಗವಾನ್ ಸೇರಿದಂತೆ ಹಲವು ಗಣ್ಯರು ಬೆಂಬಲ ನೀಡಿದ್ದಾರೆ.
ಈ ಸಹಯೋಗವು ವಿದ್ಯಾರ್ಥಿಗಳಿಗೆ ವಿಶ್ವಮಟ್ಟದ ಅವಕಾಶಗಳನ್ನು, ಅಧ್ಯಾಪಕರಿಗೆ ಅಂತಾರಾಷ್ಟ್ರೀಯ ಸಂಶೋಧನಾ ವೇದಿಕೆಗಳನ್ನು ಮತ್ತು ಕರ್ನಾಟಕದ ಶೈಕ್ಷಣಿಕ ಸಂಸ್ಥೆಗಳಿಗೆ ಜಾಗತಿಕ ಪ್ರಾಮುಖ್ಯತೆಯನ್ನು ತಂದುಕೊಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.