ಲಿಂಗಸೂಗೂರು ಪುರಸಭೆ ವ್ಯಾಪ್ತಿಯ ಹುಲಿಗುಡ್ಡ ಸೀಮಾದ ವಾರ್ಡ್ 8ರಲ್ಲಿರುವ ಲೇಔಟ್ನ ಉದ್ಯಾನ ವನದ ಜಾಗವನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ನಿವೇಶನಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡಲು ಯತ್ನಿಸಿದ ಹಿನ್ನಲೆಯಲ್ಲಿ ಪುರಸಭೆ ಮುಖ್ಯಾಧಿಕಾರಿ, ಕಂದಾಯ ಅಧಿಕಾರಿ ಹಾಗೂ ಕಂದಾಯ ನಿರೀಕ್ಷಕರನ್ನು ಜಿಲ್ಲಾಧಿಕಾರಿಗಳು ಅಮಾನತು ಮಾಡಿ ಆದೇಶಿಸಿದ್ದಾರೆ.
ಪುರಸಭೆ ವ್ಯಾಪ್ತಿಯಲ್ಲಿ ಬರುವ ಹುಲಿಗುಡ್ಡ ಸೀಮಾದ 10/1/1, 10/2/1, 10/1/13 209-32 ಎಕರೆ ಜಮೀನಿನ ಅನುಮೋದಿತ ವಿನ್ಯಾಸದಲ್ಲಿ ಉದ್ಯಾನವನ ಮತ್ತು ಬಯಲು ಜಾಗಗಾಗಿ ಕಾಯ್ದಿರಿಸಿದ ಸ್ಥಳದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ 9 ಅನಧಿಕೃತ ನಿವೇಶನಗಳನ್ನು ಸೃಜಿಸಿ ಹಾಗೂ ಸದರಿ ನಿವೇಶನಗಳಿಗೆ ನಮೂನೆ -3 (ನಕಲು ಖಾತಾ) ನೀಡಲು ಶಿಫಾರಸ್ಸು ಮಾಡಿರುವುದು ಸಾಬೀತಾಗಿದೆ.
ಕರ್ತವ್ಯ ಲೋಪ ಮತ್ತು ಅಧಿಕಾರ ದುರುಪಯೋಗ ಕಂಡು ಬಂದಿರುವ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಮುಖ್ಯಾಧಿಕಾರಿ ರವಿ ಸಿರಗುಪ್ಪಿ ಮತ್ತು ಕಂದಾಯ ಅಧಿಕಾರಿ ಅಶೋಕ ಹಾಗೂ ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ಖಯಾಜ್ ಅವರನ್ನು ಅಮಾನತು ಮಾಡಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು |11 ಖಾಸಗಿ ಆಸ್ಪತ್ರೆಗಳ ಮೇಲೆ ಆರೋಗ್ಯ ಅಧಿಕಾರಿಗಳ ದಾಳಿ
ಅಮಾನತು ಅವಧಿಯಲ್ಲಿ ಸದರಿ ನೌಕರರು ಕರ್ನಾಟಕ ಸೇವಾ ನಿಯಮಗಳು ನಿಯಮ 98 ರಂತೆ ನಿಯಮಾನುಸಾರ ಜೀವನಾಂಶ ಭತ್ಯೆ ಪಡೆಯಲು ಅರ್ಹರಿರುತ್ತಾರೆ ಎಂದು ಜಿಲ್ಲಾಧಿಕಾರಿ ಕೆ.ನಿತೀನ್ ಆದೇಶದಲ್ಲಿ ತಿಳಿಸಿದ್ದಾರೆ.