ಮೈಸೂರು ಜಿಲ್ಲೆ, ಸರಗೂರು ತಾಲ್ಲೂಕು, ಬಿ ಮಟಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸೀಗೆವಾಡಿ ಹಾಡಿಗೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಆದಿವಾಸಿ ಮುಖಂಡರುಗಳು ಅಪರ ಜಿಲ್ಲಾಧಿಕಾರಿ ಡಾ. ಪಿ. ಶಿವರಾಜು ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಸೀಗೆವಾಡಿ ಹಾಡಿಯಲ್ಲಿ ವಾಸಿಸುವ ಸರಿ ಸುಮಾರು 30 ಜೇನು ಕುರುಬ ಸಮುದಾಯ ಕುಟುಂಬಗಳು ಜೀವನಾವಶ್ಯಕ ಸೌಕರ್ಯಗಳಿಂದ ವಂಚಿತವಾಗಿವೆ. ಮನೆ, ಶೌಚಾಲಯ, ರಸ್ತೆ, ಬೀದಿ ದೀಪ ಇದ್ಯಾವುದೂ ಇಲ್ಲವಾಗಿದೆ. ಕೆಲವು ಮನೆಗಳಿಗೆ ವಿದ್ಯುತ್ ಹಾಗೂ ನೀರಿನ ಸಮಸ್ಯೆ ಇದೆ. ಹಾಡಿಗೆ ಸಂಪರ್ಕ ಕಲ್ಪಿಸುವ ಎರಡು ರಸ್ತೆಗಳು ಸಮಸ್ಯೆಯಿಂದ ಕೂಡಿವೆ.ಈಗಾಗಲೇ ಬಿ.ಮಟಕೆರೆಯಿಂದ ಸಂಪರ್ಕ ಕಲ್ಪಿಸುತ್ತಿದ್ದ ರಸ್ತೆ ಒತ್ತುವರಿಯಾಗಿದ್ದು ಅಲ್ಲಿ ರಸ್ತೆ ನಿರ್ಮಿಸಲು ಜಾಗವೇ ಇಲ್ಲದಂತಾಗಿದೆ. ಇನ್ನೊಂದು ಕಡೆ ಇರುವ ರಸ್ತೆ ಅರಣ್ಯ ಇಲಾಖೆಯ ಕಚೇರಿಯಿಂದ ಅರಣ್ಯದ ಅಂಚಿನಿಂದ ಹಾದು ಹೋಗಿ ಕೆರೆಯನ್ನು ದಾಟಿ ಹೋಗಬೇಕು. ಮಳೆ ಹೆಚ್ಚಾದಾಗ ರಸ್ತೆ ನೀರಿನಿಂದ ಆವೃತವಾಗುತ್ತದೆ. ಎರಡು ಕಡೆಯಿಂದಲೂ ಹಾಡಿಗೆ ತೆರಳಲು ಅನಾನುಕೂಲವಾಗುತ್ತಿದೆ.
ಈ ಕೂಡಲೇ ಸೀಗೆವಾಡಿ ಹಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ನಿರ್ಮಿಸಬೇಕು. ಜನರ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದೆ. ಅನೇಕ ಬಾರಿ ಮನವಿ ಮಾಡಿದ್ದರು ಹಾಡಿಯ ಯಾವುದೇ ಮನೆಗಳಿಗೂ ಸಹ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಸಂಪರ್ಕ ಕಲ್ಪಿಸಿರುವುದಿಲ್ಲ. ಸ್ಥಳೀಯ ಗ್ರಾಮ ಪಂಚಾಯತಿಗ ಹಲವಾರು ಬಾರಿ ಮನವಿ ಮಾಡಿಕೊಂಡರು ಸಹ ಸ್ಪಂದಿಸಿಲ್ಲ. ಆದಿವಾಸಿಗಳು ಅರಣ್ಯದಲ್ಲಿ ಬದುಕುವ ಹಕ್ಕು ಕಳೆದುಕೊಂಡು, ನಾಗರಿಕ ಸಮಾಜದಲ್ಲಿ ಬದುಕುವ ವಿಶ್ವಾಸ, ಚಾಕಚಕ್ಯತೆ ಇಲ್ಲದೆ ಅತಂತ್ರರಾಗಿದ್ದಾರೆ. ಅರಣ್ಯ ಇಲಾಖೆ, ಗ್ರಾಮ ಪಂಚಾಯತಿ, ತಾಲ್ಲೂಕು ಆಡಳಿತ ಕಛೇರಿ, ಗಿರಿಜನ ಅಭಿವೃದ್ಧಿ ಇಲಾಖೆಯ ಗಮನಕ್ಕೆ ತಂದರೂ ಸಹ ಸಮಸ್ಯೆ ಬಗೆಹರಿದಿಲ್ಲ.
ಹಾಗಾಗಿ, ಇನ್ನು ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ತಮ್ಮ ಬದುಕಿಗಾಗಿ ಹೋರಾಡುತ್ತಿರುವ ಆದಿವಾಸಿಗಳ ಹಕ್ಕುಗಳನ್ನು ರಕ್ಷಿಸಲು ಈ ಕೆಳಕಂಡ ಹಕ್ಕೊತ್ತಾಯಗಳ ಆದ್ಯತೆ ಆಧಾರದ ಮೇಲೆ ಬಗೆಹರಿಸದೇ ಇದ್ದಲ್ಲಿ ಅಖಿಲ ಭಾರತ ಜನ ಅಧಿಕಾರ ಸುರಕ್ಷಾ ಸಮಿತಿ(AIJASC) ಪರವಾಗಿ ಸಿಗೇವಾಡಿ ಹಾಡಿ ಆದಿವಾಸಿಗಳು ದಸರಾ ಸಂದರ್ಭದಲ್ಲಿಯೇ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ?ಚಾಮರಾಜನಗರ | ಸೆ.15 ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ : ಅಗತ್ಯ ಸಿದ್ಧತೆಗೆ ಸೂಚನೆ
ಮನವಿ ಸಲ್ಲಿಸುವಾಗ ಜನ ಅಧಿಕಾರ ಸುರಕ್ಷಾ ಸಮಿತಿಯ ಸಂಚಾಲಕ ಟಿ. ಆರ್. ಸುನಿಲ್, ಹಾಡಿಯ ಮುಖಂಡರುಗಳಾದ ಕುಮಾರ್, ಮಾರ, ರಾಜೇಶ್ ರಾಜು, ಮಾದೇವ್, ಬಾಬು ಇದ್ದರು.
ಹಕ್ಕೋತ್ತಾಯಗಳು:
- 30 ಹೊಸ ಮನೆಗಳು, ಶೌಚಾಲಯ ನಿರ್ಮಿಸಬೇಕು. ಅಲ್ಲಿಯವರೆಗೆ ತಾತ್ಕಾಲಿಕವಾಗಿ ಮನೆ ಮೇಲ್ಚಾವಣಿ ದುರಸ್ತಿ ಹಾಗೂ ಮಹಿಳೆಯರಿಗೆ ಸಮುದಾಯ ಶೌಚಾಲಯ ಮತ್ತು ಸ್ನಾನದ ಗೃಹ ನಿರ್ಮಿಸಿ. 15 ಮನೆಗಳಿಗೆ ನಿವೇಶನವನ್ನು ನೀಡಬೇಕು.
- ಸಿಗೇವಾಡಿ ಹಾಡಿಗೆ ಬಿ.ಮಟಕೆರೆಯಿಂದ ಸಂಪರ್ಕ ಕಲ್ಪಿಸುವ ರಸ್ತೆಯ ಒತ್ತುವರಿಯನ್ನು ತೆರವು ಮಾಡಿಸಿ ರಸ್ತೆ ನಿರ್ಮಿಸಿ, ಅಲ್ಲಿಯವರೆಗೆ ಮೊಳೆಯೂರು ಅರಣ್ಯ ಇಲಾಖೆ ಕಛೇರಿಯಿಂದ ಹಾಡಿಗೆ ಬರುವ ರಸ್ತೆ ಡಾಂಬರೀಕರಣ ಮಾಡಿಸಬೇಕು.
- ಕುಡಿಯುವ ನೀರಿನ ನಲ್ಲಿಗಳ ದುರಸ್ತಿ ಹಾಗೂ ಐದು ಮನೆಗಳಿಗೆ ನೀರಿನ ಸಂಪರ್ಕದ ವ್ಯವಸ್ಥೆ ಸಮರ್ಪಕವಾಗಿ ಒದಗಿಸಿ. ಜಲ ಜೀವನ್ ಮಿಷನ್ ಕಳಪೆ ಕಾಮಗಾರಿಯಿಂದ ಆಗಿರುವ ಸಮಸ್ಯೆಗಳನ್ನು ಬಗೆಹರಿಸಿ.
- ಅರಣ್ಯ ಕಛೇರಿ ರಸ್ತೆಯಿಂದ ಹಾಡಿಯ ಕೊನೆಯವರೆಗೆ ಬೀದಿ ದೀಪ ಹಾಕಿಸಿ. ಬಾಕಿ ಇರುವ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ನೀಡಿ. ಹಾಡಿಯ ಸಮುದಾಯ ಭವನಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿ.
- ಆಧಾರ ಕಾರ್ಡ್, ಪಡಿತರ ಚೀಟಿ ಹೊಂದಿಲ್ಲದವರಿಗೆ ಬಿಪಿಎಲ್ ಪಡಿತರ ಚೀಟಿ ಮಾಡಿಸಿಕೊಡಬೇಕು.
- ಹೊಸ ಕುಟುಂಬಗಳಿಗೆ ಪೌಷ್ಟಿಕ ಆಹಾರ ಸಾಮಾಗ್ರಿಗಳನ್ನು ವಿತರಿಸಿ.
- ಸಿಗೇವಾಡಿಯ ಬಹುತೇಕರು ಕೃಷಿ ಭೂಮಿ ಇಲ್ಲದ ಕೂಲಿ ಕಾರ್ಮಿಕರಾಗಿದ್ದು. ಕೃಷಿ ಭೂಮಿಯನ್ನು ಒದಗಿಸಬೇಕು.ಅರಣ್ಯ ಹಕ್ಕುಪತ್ರವನ್ನು ವಿತರಿಸಬೇಕು ಹಾಗೂ ಅರಣ್ಯ ಕಿರು ಉತ್ಪನ್ನಗಳನ್ನು ಸಂಗ್ರಹಿಸಲು ಅವಕಾಶ ನೀಡಬೇಕು.
- ಪ್ರತಿ ಮನೆಗಳಿಗೂ ಉಚಿತವಾಗಿ ಎಲ್.ಪಿ.ಜಿ ಸಿಲಿಂಡರ್ ಸಂಪರ್ಕ ಹಾಗೂ ಸ್ಟೌವ್ ಒದಗಿಸಬೇಕು.
- ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ 10 ಜನರಿಗೆ ಅನುದಾನ ಒದಗಿಸಬೇಕು.