ಯುಪಿಎಸ್ಸಿ ಅಭ್ಯರ್ಥಿಯೊಬ್ಬರು ತನ್ನ ಜನನಾಂಗವನ್ನು ಕತ್ತರಿಸಿಕೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಉತ್ತರ ಪ್ರದೇಶದ ಪ್ರಯಾಗ್ರಾಜ್ ಪ್ರದೇಶದಲ್ಲಿ ನಡೆದಿದೆ. ಆತ ತಾನು ಹುಡುಗನ ದೇಹದಲ್ಲಿ ಸಿಲುಕಿಕೊಂಡಿರುವ ಹುಡುಗಿ ಎಂದು ಬಹಳ ದಿನಗಳಿಂದ ಭಾವಿಸಿದ್ದಾಗಿಯೂ ಹೇಳಿಕೊಂಡಿದ್ದಾರೆ.
ಐಎಎಸ್ ಅಧಿಕಾರಿಯಾಗುವ ಆಸೆ ಹೊತ್ತಿದ್ದ 17 ವರ್ಷದ ಯುವಕ, ಯುಪಿಎಸ್ಸಿ ತರಬೇಕಿಗಾಗಿ ಪ್ರಯಾಗ್ರಾಜ್ ಪಟ್ಟಣಕ್ಕೆ ತೆರಳಿದ್ದರು. ಆದರೆ, ಅಲ್ಲಿ ತನ್ನ ಲಿಂಗ ಗುರುತಿನ ವಿಚಾರವನ್ನು ಆತನನ್ನು ಹೆಚ್ಚಾಗಿ ಕಾಡಲಾರಂಭಿಸಿದೆ. ಇದರಿಂದ, ಮಾನಸಿಕವಾಗಿ ಜರ್ಜರಿತನಾಗಿದ್ದ ಆತ, ಅಧ್ಯಯನದತ್ತ ಗಮನಹರಿಸಲು ಸಾಧ್ಯವಾಗದೆ, ಕುಗ್ಗಿದ್ದನು ಎಂದು ತಿಳಿದುಬಂದಿದೆ.
ಆತ ತನ್ನ 14ನೇ ವಯಸ್ಸಿನಲ್ಲಿದ್ದಾಗ ಶಾಲಾ ಕಾರ್ಯಕ್ರಮವೊಂದರಲ್ಲಿ ಹುಡುಗಿಯರೊಂದಿಗೆ ನೃತ್ಯ ಮಾಡುವಾಗ, ಆತನನ್ನು ವಿಭಿನ್ನ ಭಾವನೆ ಮೂಡಿತ್ತು. ಅಂದಿನಿಂದ, ಆತ ತಾನು ಗಂಡಲ್ಲ ಹೆಣ್ಣು ಎಂಬ ಭಾವನೆಯೊಂದಿಗೆ ಮೌನವಾಗಿ ಬದುಕುತ್ತಿದ್ದರು. ಈ ಬಗ್ಗೆ ತನ್ನ ಪೋಷಕರಿಗೆ ಹೇಳಿಕೊಂಡರೆ ಅವರು ತಿರಸ್ಕರಿಸುತ್ತಾರೆಂದು ಹೆದರಿದ್ದರು ಎಂದು ವೈದ್ಯರ ಬಳಿ ಯುವಕ ಹೇಳಿಕೊಂಡಿದ್ದಾರೆ.
ಪ್ರಯಾಗ್ರಾಜ್ಗೆ ತೆರಳಿದ ಬಳಿಕ, ಅವರು ಓರ್ವ ಹುಡುಗ ಹೇಗೆ ಹುಡುಗಿ ಆಗಬಹುದು ಎಂಬುದರ ಬಗ್ಗೆ ಆನ್ಲೈನ್ನಲ್ಲಿ ಹುಡುಕಾಟ ನಡೆಸಿದ್ದಾರೆ. ಶಸ್ತ್ರಚಿಕಿತ್ಸೆ ಕುರಿತಾದ ವಿವರಗಳ ವಿಡಿಯೋಗಳನ್ನು ನೋಡಿದ್ದಾರೆ. ಬಳಿಕ, ಅವರು ಡಾ. ಜೆನಿತ್ ಎಂದು ಗುರುತಿಸಲ್ಪಟ್ಟ ಸ್ಥಳೀಯ ವೈದ್ಯರನ್ನು ಸಂಪರ್ಕಿಸಿದ್ದು, ತಮ್ಮ ಖಾಸಗಿ ಭಾಗವನ್ನು ಹೇಗೆ ಕತ್ತರಿಸಬಹುದು ಎಂಬುದರ ಬಗ್ಗೆ ಸಲಹೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ವೈದ್ಯರಿಂದ ಸಲಹೆ ಪಡೆದುಕೊಂಡು ಬಂದ ಯುವಕ, ಅರವಳಿಕೆ, ಶಸ್ತ್ರಚಿಕಿತ್ಸಾ ಬ್ಲೇಡ್ ಹಾಗೂ ಇತರ ವಸ್ತುಗಳನ್ನು ಪಡೆದುಕೊಂಡು ಬಂದಿದ್ದಾರೆ. ತನ್ನ ಬಾಡಿಗೆ ರೂಮ್ನಲ್ಲಿ ತನಗೆ ತಾನೇ ಇಂಜೆಕ್ಷನ್ ಮಾಡಿಕೊಂಡು, ಜನನಾಂಗವನ್ನು ಕತ್ತರಿಸಿಕೊಂಡಿದ್ದಾನೆ. ರಕ್ತಸ್ತ್ರಾವ ಮತ್ತು ನೋವು ತೀವ್ರವಾದಾಗ ವೈದ್ಯಕೀಯ ಸಹಾಯಕ್ಕಾಗಿ ಆ್ಯಂಬುಲೆನ್ಸ್ಗೆ ಕರೆ ಮಾಡಿದ್ದಾನೆ. ಕೂಡಲೇ ಸ್ಥಳಕ್ಕೆ ಆ್ಯಂಬುಲೆನ್ಸ್ ಧಾವಿಸಿದ್ದು, ಆತನನ್ನು ಆಸ್ಪತ್ರೆಗೆ ಕರೆದೊಯ್ದು, ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಈ ಲೇಖನ ಓದಿದ್ದೀರಾ?: ನೇಪಾಳದ ಭೀಕರ ಪರಿಸ್ಥಿತಿಗೆ ಕಾರಣಗಳೇನು? ಕಳೆದ 17 ವರ್ಷಗಳಲ್ಲಿ ಆಗಿದ್ದೇನು?
ಈ ಕೃತ್ಯವು ಅತ್ಯಂತ ಅಪಾಯಕಾರಿ ಮತ್ತು ಮಾರಕ ಎಂದು ವೈದ್ಯರು ಹೇಳಿದ್ದಾರೆ. “ಶಸ್ತ್ರಚಿಕಿತ್ಸಕರು ಆತನಿಗೆ ಚಿಕಿತ್ಸೆ ನೀಡಿ, ಆತನ ಆರೋಗ್ಯ ಸ್ಥಿರವಾಗುವಂತೆ ಮಾಡಿದ್ದಾರೆ. ಹೊಸ ಮೂತ್ರನಾಳವನ್ನು ಜೋಡಿಸಲು ಮತ್ತೊಂದು ಶಸ್ತ್ರಚಿಕಿತ್ಸೆ ನಡೆಸಬೇಕಿದೆ. ಅಲ್ಲದೆ, ಆತನ ಮಾನಸಿಕ ಆರೋಗ್ಯವನ್ನು ಸ್ಥರಗೊಳಿಸಲು ಕೌನ್ಸೆಲಿಂಗ್ ಕೊಡಿಸುವಂತೆಯೂ ವೈದ್ಯರು ಸಲಹೆ ನೀಡಿದ್ದಾರೆ” ಎಂದು ಆಸ್ಪತ್ರೆ ಮೂಲಗಳು ತಿಳಸಿವೆ.