ಧರ್ಮಸ್ಥಳದಲ್ಲಿ ನಡೆದಿರುವ ಅಸಹಜ ಸಾವುಗಳ ಪ್ರಕರಣದ (39/2025) ಸಾಕ್ಷಿ ಪ್ರದೀಪ್ ಅವರ ಹೇಳಿಕೆಯನ್ನು ನ್ಯಾಯಾಲಯದಲ್ಲಿ ದಾಖಲಿಸಿಕೊಳ್ಳಲಾಗಿದೆ. ಶುಕ್ರವಾರ ಕೋರ್ಟ್ಗೆ ಕರೆದೊಯ್ದು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS) ಸೆಕ್ಷನ್ 183ರ ಅಡಿಯಲ್ಲಿ ಹೇಳಿಕೆ ಪಡೆಯಲಾಗಿದೆ.
ಬೆಳ್ತಂಗಡಿ ತಾಲ್ಲೂಕಿನಲ್ಲಿ ಮೆಕ್ಯಾನಿಕಲ್ ಅಂಗಡಿ ನಡೆಸುತ್ತಿರುವ ಪ್ರದೀಪ್ ಅವರು ಬಂಟ್ವಾಳದ ನಿವಾಸಿ. ಸೌಜನ್ಯ ಅವರ ಮಾವ, ಹೋರಾಟಗಾರ ವಿಠಲ್ ಗೌಡ ಅವರ ಆಪ್ತ ಸಹಾಯಕರಾಗಿಯೂ ಗುರುತಿಸಿಕೊಂಡಿದ್ದಾರೆ. ಜೊತೆಗೆ ಜಸ್ಟೀಸ್ ಫಾರ್ ಸೌಜನ್ಯ ಆಂದೋಲನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಅಸಹಜ ಸಾವುಗಳು ಮತ್ತು ತಲೆಬುರುಡೆಗೆ ಸಂಬಂಧಿಸಿದಂತೆ ಪ್ರದೀಪ್ ಅವರನ್ನು ಎಸ್ಐಟಿ ಹಲವು ದಿನಗಳಿಂದ ವಿಚಾರಣೆ ನಡೆಸಿತ್ತು. ಅವರ ಹೇಳಿಕೆಯನ್ನು ಈಗ ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಲಾಗಿದೆ.
“ಸೆಕ್ಷನ್ 183ರ ಅಡಿಯಲ್ಲಿ ಅವರ ಹೇಳಿಕೆಯನ್ನು ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದಲ್ಲಿ ದಾಖಲಿಸಿಕೊಳ್ಳಲಾಗಿದೆ. ಇದು ಗೌಪ್ಯ ಹೇಳಿಕೆಯಾಗಿರುವುದರಿಂದ ನಾವು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ” ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿರುವುದಾಗಿ ‘ಬಿಎಲ್ಆರ್ ಪೋಸ್ಟ್’ ವರದಿ ಮಾಡಿದೆ.
“ಪ್ರದೀಪ್ ಅವರನ್ನು ಪ್ರಕರಣದಲ್ಲಿ ದೂರುದಾರ ಸಾಕ್ಷಿಯಾಗಿ ಪರಿಗಣಿಸಲಾಗುವುದಿಲ್ಲ. ಹೇಳಿಕೆ ದಾಖಲಿಸಲು ಮಾತ್ರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಹಂತದಲ್ಲಿ ಯಾವುದೇ ಬಂಧನವಿಲ್ಲ” ಎಂದು ಮೂಲಗಳು ಹೇಳಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ನ್ಯಾಯಾಧೀಶರ ಮುಂದೆ ಎರಡು ಗಂಟೆಗಳ ಕಾಲ ಹೇಳಿಕೆಯನ್ನು ದಾಖಲಿಸಲಾಗಿದೆ.
ಇದರ ನಡುವೆ ಎಸ್ಐಟಿ ತನಿಖೆಯನ್ನು ಚುರುಕುಗೊಳಿಸಿದೆ. ಧರ್ಮಸ್ಥಳದಲ್ಲಾದ ಅಸ್ವಾಭಾವಿಕ ಸಾವುಗಳು ಮತ್ತು ಅಂತ್ಯಕ್ರಿಯೆಗೆ ಸಂಬಂಧಿಸಿದ ಪಂಚಾಯಿತಿ ದಾಖಲೆಗಳನ್ನು ಎಸ್ಐಟಿ ಸಂಗ್ರಹಿಸುತ್ತಿದೆ ಎಂದು ವರದಿಯಾಗಿದೆ. ನೇತ್ರಾವತಿ ಸ್ನಾನಘಟ್ಟದ ಬಳಿಯ ಬಂಗ್ಲೆಗುಡ್ಡೆಯಲ್ಲಿ ಈಗಾಗಲೇ ಮಹಜರು ಪೂರ್ಣಗೊಂಡಿದೆ. ಅಲ್ಲಿ ಹೆಚ್ಚಿನ ಸಂಖ್ಯೆಯ ಅಸ್ಥಿಪಂಜರದ ಅವಶೇಷಗಳು ಕಂಡುಬಂದಿವೆ.
ಪ್ರಕರಣದ ಏಕೈಕ ಆರೋಪಿ ಚಿನ್ನಯ್ಯನನ್ನು ಆಗಸ್ಟ್ 23 ರಂದು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಸುಳ್ಳು ಸಾಕ್ಷ್ಯ ಮತ್ತು ಮ್ಯಾಜಿಸ್ಟ್ರೇಟ್ ಮುಂದೆ ಸಲ್ಲಿಸಿದ ತಲೆಬುರುಡೆಗೆ ಸಂಬಂಧಿಸಿದ ಸಾಕ್ಷ್ಯಗಳು ನಕಲಿ ಎಂಬ ಆರೋಪವನ್ನು ಚಿನ್ನಯ್ಯ ಎದುರಿಸುತ್ತಿದ್ದಾರೆ. ಚಿನ್ನಯ್ಯನ ದೂರನ್ನು ಆಧರಿಸಿ ಜುಲೈ 19 ರಂದು ಎಸ್ಐಟಿ ರಚಿಸಲಾಯಿತು. ನಂತರ ಅವರು ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದರು. ಇದರ ನಂತರ, ಎಸ್ಐಟಿ ಎರಡು ವಾರಗಳ ಕಾಲ ಅಸ್ಥಿಪಂಜರವನ್ನು ಹೊರತೆಗೆಯುವ ಕಾರ್ಯಾಚರಣೆಯನ್ನು ನಡೆಸಿತು. ಆ ವೇಳೆ ಇಬ್ಬರು ವ್ಯಕ್ತಿಗಳ ಕಳೇಬರಗಳು ಸಿಕ್ಕಿವೆ ಎಂದು ವರದಿಯಾಗಿದೆ.
ಚಿನ್ನಯ್ಯ ಈಗ ಶಿವಮೊಗ್ಗ ಜೈಲಿನಲ್ಲಿದ್ದಾರೆ. ಅವರ ಜಾಮೀನು ಅರ್ಜಿಯನ್ನು ಶುಕ್ರವಾರ ವಿಚಾರಣೆಗೆ ಒಳಪಡಿಸಲಾಯಿತು. ವಿಚಾರಣೆಯ ನಂತರ, ನ್ಯಾಯಾಧೀಶ ವಿಜಯೇಂದ್ರ ಟಿಎಚ್ ಅವರು ಆದೇಶವನ್ನು ಸೆಪ್ಟೆಂಬರ್ 16 ಕ್ಕೆ ಕಾಯ್ದಿರಿಸಿದರು.