ವೈಯಕ್ತಿಕ ದ್ವೇಷಕ್ಕೆ ಮನೆ ಹಾಗೂ ಜಾನುವಾರುಗಳ ಶೆಡ್ಡಿಗೆ ಬೆಂಕಿ ತಗುಲಿ ಸುಮಾರು 6 ಲಕ್ಷ ಮೌಲ್ಯದ ಜಾನುವಾರುಗಳು ಸೇರಿದಂತೆ ಅನೇಕ ವಸ್ತುಗಳು ಬೆಂಕಿಗೆ ಭಸ್ಮವಾಗಿರುವ ಘಟನೆ ನಡೆದಿದೆ.
ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಸುದ್ದೇಕುಂಟೆ ಗ್ರಾಮದ ಮೈಲಾರಪ್ಪ ಎಂಬುವರ ಸರ್ವೇ ನಂ 78 ರಲ್ಲಿ ವಾಸವಿದ್ದ ಬಡ ಹಾಗೂ ವಿಶೇಷ ಚೇತನ ಕುಟುಂಬ ಹೈನುಗಾರಿಕೆ ನಂಬಿ ಜೀವನ ಸಾಗಿಸುತಿದ್ದರು. ಅವರು ವಾಸಿಸುತ್ತಿದ್ದ ಶೆಡ್ ಗೆ ಶುಕ್ರವಾರ ರಾತ್ರಿ 8:30 ರಲ್ಲಿ ಯಾರೋ ಕಿಡಿಗೇಡಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು ನೋಡು ನೋಡುತಿದ್ದಂತೆ ತಗಡಿನ ಮನೆ, ಶೆಡ್, ಕುರಿಗಳು, ಹಸುಗಳು ಕಣ್ಮುಂದೆ ಸುಟ್ಟು ಕರಕಲಾಗಿದೆ.

ಧಗ ಧಗ ಬೆಂಕಿ ಕಂಡು ಮನೆ ಮಾಲೀಕ ಮೈಲಾರಪ್ಪನ ಗಾಬರಿಯಾಗಿ ಹೊರಗಡೆ ಬಂದು ನೋಡಿದಾಗ ಸುತ್ತಲ್ಲ ಪೆಟ್ರೋಲ್ ಸುರಿದ ವಾಸನೆ ಬಂದಿದ್ದು ಸ್ಥಳಿಯರನ್ನು ಕೂಗಿಕೊಂಡಾಗ ಸ್ಥಳಿಯರು ಬೆಂಕಿ ನಂದಿಸಲು ಯತ್ನಿಸಿ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಲು ಯತ್ನಿಸಿದ್ದು ಅಷ್ಟು ಹೊತ್ತಿಗೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
50 ಕುರಿ, 5 ಹಸು, 2 ಕರು, ಸುಮಾರು 30 ಕೋಳಿ ಮರಿಗಳು ವಿಲವಿಲ ಒದ್ದಾಡಿ ಮೂಕ ಪ್ರಾಣಿಗಳು ಪ್ರಾಣ ಬಿಟ್ಟಿವೆ. ಜೋಳ, ಜಾನುವಾರುಗಳ ಫೀಡ್ 2 ಕ್ವಿಂಟಲ್, ಎತ್ತಿನಗಾಡಿ, ಅಡುಗೆ ಸಾಮಾಗ್ರಿ, 5ಕ್ವಿಂಟಾಲ್ ಗೊಬ್ಬರ, 42 ಸಾವಿರ ನಗದು ಹಣ, ಕೃಷಿ ಸಲಕರಣೆ ಗಳು ಸಂಪೂರ್ಣ ಬೆಂಕಿ ಅಹುತಿಯಾಗಿದ್ದು ಹೈನುಗಾರಿಕೆ ನಂಬಿ ಜೀವನ ಮಾಡುತಿದ್ದ ಕುಟುಂಬ ದಿಕ್ಕೋತೋಚದೆ ಕಂಗಾಲಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ಠಾಣಾಧಿಕಾರಿ ಹನುಮಂತಯ್ಯ , ಪಿಎಸ್ಐ ಶ್ರೀನಿವಾಸ್ ಪ್ರಸಾದ್, ಮೖಲಾರ ಲಿಂಗೇಶ್ವರ ಕುರಿ ಸಂಘದ ಅಧ್ಯಕ್ಷ ನಾಗರೆಡ್ಡಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.