ಧರ್ಮಸ್ಥಳ ಚಲೋ ಮಾಡಿದ್ದ ಬಿಜೆಪಿಯವರು ಧರ್ಮಸ್ಥಳವನ್ನು ಮರೆತು ಮದ್ದೂರು ಚಲೋ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಧರ್ಮಸ್ಥಳದ ಬಗ್ಗೆ ಏಕಾಏಕಿ ಮೌನಕ್ಕೆ ಜಾರಿರುವುದು ಏಕೆ? ಬಿಜೆಪಿಯವರ ಧರ್ಮರಕ್ಷಣೆಯ ನಾಟಕವು ನಾಲ್ಕು ದಿನದ ಪ್ರದರ್ಶನಕ್ಕೆ ಮಾತ್ರ ಸೀಮಿತವೇ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಸೌಜನ್ಯ ಸಂಬಂಧಿ ವಿಠಲ್ ಗೌಡರವರು ಧರ್ಮಸ್ಥಳದ ಬಂಗ್ಲೆಗುಡ್ಡದಲ್ಲಿ ಅಸ್ಥಿಪಂಜರಗಳ ರಾಶಿಯೇ ಕಂಡಿದೆ ಎಂಬ ಅಘಾತಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಆ ಸ್ಥಳವು ಅಕ್ಷರಶಃ ಯುದ್ಧಕಣದಂತೆ ಭಾಸವಾಗುತ್ತದೆ ಎಂದು ವರದಿಗಳು ಹೇಳುತ್ತವೆ ಎಂದಿದ್ದಾರೆ.
ಇದನ್ನೂ ಓದಿರಿ: ‘ಧರ್ಮಸ್ಥಳದಲ್ಲಿ ನಾಲ್ಕು ಅನುಮಾನಾಸ್ಪದ ಸಾವು’; ಮಹೇಶ್ ಶೆಟ್ಟಿ ತಿಮರೋಡಿ ದೂರು
ಸೌಜನ್ಯರ ಮನೆಗೆ ಭೇಟಿ ನೀಡಿದ್ದ ಬಿಜೆಪಿಯವರು ಆ ಕುಟುಂಬದವರ ಹೇಳಿಕೆಯ ಬಗ್ಗೆ ಏನು ಹೇಳುತ್ತಾರೆ? ವಿಠಲ್ ಗೌಡರ ಹೇಳಿಕೆಯ ಬಗ್ಗೆ ಬಿಜೆಪಿಯವರ ಮೌನವೇಕೆ? ರಾಜ್ಯ ಬಿಜೆಪಿ ನಾಯಕರು ತಾವು ಸೌಜನ್ಯ ಕುಟುಂಬದವರ ಪರವೋ ಅಥವಾ ಅವರು ಆರೋಪಿಸುತ್ತಿರುವವರ ಪರವೋ ಎಂಬುದನ್ನು ಸ್ಪಷ್ಟಪಡಿಸುವ ಅಗತ್ಯವಿದೆ ಎಂದು ಆಗ್ರಹಿಸಿದ್ದಾರೆ.
