ಹಾಸನ ತಾಲೂಕಿನ ಮೊಸಳೆಹೊಸಳ್ಳಿ ಗ್ರಾಮದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಡೆದ ದುರಂತ ಹಿನ್ನೆಲೆಯಲ್ಲಿ ತಡರಾತ್ರಿ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಸನ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು. ನಂತರ ಗಾಯಾಳುಗಳ ಆರೋಗ್ಯ ವಿಚಾರಿಸಿ ಕುಟುಂಬದವರಿಗೆ ಧೈರ್ಯ ತುಂಬಿದರು.
ಹಾಸನ ದುರಂತದ ಸುದ್ದಿ ತಿಳಿಯುತ್ತಿದಂತೆ ಮಧ್ಯರಾತ್ರಿ ನಿಖಿಲ್ ಕುಮಾರಸ್ವಾಮಿ ಬೆಂಗಳೂರಿನಿಂದ ಹಾಸನಕ್ಕೆ ತೆರಳಿದರು. ಹಾಸನದ ಹಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ, ಆಸ್ಪತ್ರೆಯ ವೈದ್ಯರಿಂದ ಪರಿಸ್ಥಿತಿ ತಿಳಿದುಕೊಂಡು ಗಾಯಾಳುಗಳಿಗೆ ಧೈರ್ಯ ತುಂಬಿದರು.
ಮಾಧ್ಯಮಗಳ ಜತೆ ಮಾತನಾಡಿದ ಅವರು, “ಈ ಘೋರ ದುರಂತ ಘಟನೆ ಭವಿಷ್ಯದ ಪೀಳಿಗೆಗಳು, ಅವರ ತಂದೆ ತಾಯಿ ಮಕ್ಕಳ ಭವಿಷ್ಯ ದೃಷ್ಟಿಯಿಂದ ಎಲ್ಲ ಮಕ್ಳಳ ಮೇಲೂ ಕುಟುಂಬಸ್ಥರು ದೊಡ್ಡ ಕಲ್ಪನೆಯನ್ನು ಕಟ್ಟಿಕೊಂಡಿರುತ್ತಾರೆ. ಈ ಘಟನೆಯಿಂದ ಅವರ ಮನಸಿನ ಮೇಲಾದ ನೋವನ್ನು ನಾವು ಯಾರೂ ಊಹೆ ಮಾಡುವುದಕ್ಕೆ ಆಗಲ್ಲ. ಆ ಭಗವಂತ, ತಾಯಿ ಚಾಮುಂಡೇಶ್ವರಿ ಈ ನೋವನ್ನು ಭರಿಸುವಂತ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ” ಎಂದು ಸಾಂತ್ವನ ಹೇಳಿದರು.
“ಈ ದುರ್ಘಟನೆಯಿಂದ ಉಂಟಾಗಿರುವುದಕ್ಕೆ ಹಾಗೂ ಜೀವಗಳಿಗೆ ಯಾರೂ ಬೆಲೆಕಟ್ಟುವುದಕ್ಕೆ ಆಗುವುದಿಲ್ಲ. ಅದರಲ್ಲೂ ಅವರ ತಂದೆ ತಾಯಿ ಮಕ್ಕಳ ಭವಿಷ್ಯ ರೂಪಿಸುವುದಕ್ಕೆ ಅವರ ಕನಸುಗಳು ಇವತ್ತು ಮಣ್ಣುಪಾಲಾಗಿವೆ. ಅವರ ಜಾಗದಲ್ಲಿ ನಾವ್ಯಾರೂ ಊಹೆ ಮಾಡಿಕೊಳ್ಳಲಾಗುವುದಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
“ಮುಖ್ಯಮಂತ್ರಿಯವರು 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಅದನ್ನು ಸ್ವಾಗತ ಮಾಡುತ್ತೇವೆ. ಅವರ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ತಿಳಿದುಕೊಂಡು ಮಾನವೀಯತೆ ದೃಷ್ಟಿಯಿಂದ ಸರ್ಕಾರ ಇನ್ನೂ ಹೆಚ್ಚಾಗಿ ಪರಿಹಾರ ಘೋಷಣೆ ಮಾಡಬೇಕು” ಎಂದು ನಿಖಿಲ್ ಕುಮಾರಸ್ವಾಮಿಯವರು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಹಾಸನ ದುರಂತ | ಮೃತರು, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸಿದ್ದರಾಮಯ್ಯ ಸೂಚನೆ
“ಈ ಘಟನೆಯನ್ನು ನಾವು ಯಾರೂ ಊಹೆ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ. ದುರಂತದ ವಿಡಿಯೋ ನೋಡಿ ನಾವೆಲ್ಲರೂ ಬೆಚ್ಚಿಬಿದ್ದಿದ್ದೇವೆ. ನಾವು ಜೀರ್ಣಮಾಡಿಕೊಳ್ಳಲಾಗುವುದಿಲ್ಲ ಅಂತಹ ದೃಶ್ಯ ಅದು” ಎಂದ ಅವರು ಈ ಘಟನೆಯ ಉನ್ನತ ತನಿಖೆಗೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಸ್ವರೂಪ್ ಪ್ರಕಾಶ್, ಕೆ ಆರ್ ಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್ ಟಿ ಮಂಜು ಸೇರಿದಂತೆ ಹಲವು ಮುಖಂಡರು ಇದ್ದರು.