ಭವಿಷ್ಯದಲ್ಲಿ ‘ಪಟ್ಟಭದ್ರ ಹಿತಾಸಕ್ತಿಗಳಿಂದ’ ಸಾಮೂಹಿಕ ಆಂದೋಲನಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು, ಸ್ವಾತಂತ್ರ್ಯಾ ನಂತರದ, ವಿಶೇಷವಾಗಿ 1974ರ ನಂತರದ ಎಲ್ಲ ಪ್ರತಿಭಟನೆಗಳ ಅಧ್ಯಯನ ನಡೆಸುವಂತೆ ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಘಟಕಕ್ಕೆ (BPR&D) ಆದೇಶಿಸಿದ್ದಾರೆ ಎಂದು ಹಿರಿಯ ಸರಕಾರಿ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ.
ಪ್ರತಿಭಟನೆಗಳಿಗೆ ಕಾರಣಗಳು, ಹಣಕಾಸು ನೆರವು, ಅಂತಿಮ ಫಲಿತಾಂಶಗಳು ಮತ್ತು ತೆರೆಮರೆಯಲ್ಲಿನ ರೂವಾರಿಗಳನ್ನು ವಿಶ್ಲೇಷಿಸಲು ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು(ಎಸ್ಒಪಿ) ಸಿದ್ಧಪಡಿಸುವಂತೆಯೂ ಅವರು ಸೂಚಿಸಿದ್ದಾರೆ.
ಗುಪ್ತಚರ ಸಂಸ್ಥೆಯು(ಐಬಿ) ಜುಲೈ ಕೊನೆಯ ವಾರದಲ್ಲಿ ದೆಹಲಿಯಲ್ಲಿ ಆಯೋಜಿಸಿದ್ದ ಎರಡು ದಿನಗಳ ‘ರಾಷ್ಟ್ರೀಯ ಭದ್ರತಾ ಕಾರ್ಯತಂತ್ರಗಳ ಸಮ್ಮೇಳನ-2025’ರಲ್ಲಿ ಶಾ ಈ ನಿರ್ದೇಶನಗಳನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಅಮಿತ್ ಶಾ ನಿರ್ದೇಶನದ ಮೇರೆಗೆ ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿರುವ BPR&D ಅಪರಾಧ ತನಿಖಾ ಇಲಾಖೆಗಳ(ಸಿಐಡಿ) ವರದಿಗಳು ಸೇರಿದಂತೆ ಹಳೆಯ ಪ್ರಕರಣಗಳ ಕಡತಗಳಿಗಾಗಿ ರಾಜ್ಯಗಳ ಪೋಲಿಸ್ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ತಂಡವೊಂದನ್ನು ರಚಿಸುವ ಪ್ರಕ್ರಿಯೆಯಲ್ಲಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮತಾಂತರ ವಿಚಾರದಲ್ಲಿ ಬಿಜೆಪಿಯ ಬೂಟಾಟಿಕೆ ಮತ್ತು ವಾಸ್ತವ
ಅಧಿಕಾರಿಯೊಬ್ಬರ ಪ್ರಕಾರ, ಇಂತಹ ಪ್ರತಿಭಟನೆಗಳಿಗೆ ಹಣಕಾಸು ನೆರವುಗಳನ್ನು ಪರಿಶೀಲಿಸಲು ಜಾರಿ ನಿರ್ದೇಶನಾಲಯ(ಇ.ಡಿ), ಹಣಕಾಸು ಗುಪ್ತಚರ ಘಟಕ-ಭಾರತ(ಎಫ್ಐಯು-ಐಎನ್ಡಿ) ಮತ್ತು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ)ಯಂತಹ ಹಣಕಾಸು ಸಂಸ್ಥೆಗಳನ್ನು ಸೇರಿಸಿಕೊಳ್ಳುವಂತೆಯೂ ಅಮಿತ್ ಶಾ BPR&Dಗೆ ಸೂಚಿಸಿದ್ದಾರೆ.
ಹೆಚ್ಚುವರಿಯಾಗಿ, ಭಯೋತ್ಪಾದನೆಗೆ ಹಣಕಾಸು ನೆರವು ಜಾಲಗಳನ್ನು ನಿರ್ಮೂಲನ ಮಾಡಲು ಹಣಕಾಸು ಅಕ್ರಮಗಳ ವಿಶ್ಲೇಷಣೆಯ ಮೂಲಕ ಅಪರಿಚಿತ ಭಯೋತ್ಪಾದಕ ಜಾಲಗಳು,ಅವುಗಳ ಸಂಪರ್ಕಗಳು ಮತ್ತು ಉದ್ದೇಶಗಳನ್ನು ಗುರುತಿಸಲು ಎಸ್ಒಪಿಯನ್ನು ಸಿದ್ಧಗೊಳಿಸುವಂತೆ ಇ.ಡಿ., ಎಫ್ಐಯು-ಐಎನ್ಡಿ ಮತ್ತು ಸಿಬಿಡಿಟಿಗಳಿಗೆ ಸೂಚಿಸಲಾಗಿದೆ.
ಕಾಲ್ತುಳಿತದಂತಹ ಘಟನೆಗಳ ಹಿಂದಿನ ಕಾರಣಗಳನ್ನು ತಿಳಿದುಕೊಳ್ಳಲು ವಿವಿಧ ಧಾರ್ಮಿಕ ಸಮಾವೇಶಗಳ ಕುರಿತು ಅಧ್ಯಯನಕ್ಕಾಗಿ ರಾಜ್ಯಗಳ ಪೋಲಿಸ್ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುವಂತೆ ಮತ್ತು ಅಂತಹ ಸಮಾವೇಶಗಳ ಮೇಲೆ ನಿಗಾ ಹಾಗೂ ನಿಯಂತ್ರಣಕ್ಕಾಗಿ ಎಸ್ಒಪಿಯೊಂದನ್ನು ರೂಪಿಸುವಂತೆಯೂ ಶಾ BPR&Dಗೆ ಸೂಚಿಸಿದ್ದಾರೆನ್ನಲಾಗಿದೆ.
ಮೂಲಗಳ ಪ್ರಕಾರ ಪಂಜಾಬಿನಲ್ಲಿ ಖಾಲಿಸ್ತಾನಿ ಉಗ್ರವಾದ ಮತ್ತು ಸಾಮಾನ್ಯ ಕ್ರಿಮಿನಲ್ ಚಟುವಟಿಕೆಗಳನ್ನು ಎದುರಿಸಲು ಪ್ರತ್ಯೇಕ ಕಾರ್ಯವಿಧಾನಗಳನ್ನು ರೂಪಿಸುವಂತೆ ಶಾ ಅವರು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಡಿಎ),ಗಡಿ ರಕ್ಷಣಾ ಪಡೆ(ಬಿಎಸ್ಎಫ್) ಮತ್ತು ಮಾದಕ ದ್ರವ್ಯ ನಿಯಂತ್ರಣ ಘಟಕ(ಎನ್ಸಿಬಿ)ಗಳಿಗೆ ಸೂಚಿಸಿದ್ದಾರೆ.