ವಿದ್ಯುತ್ ಪ್ರವಹಿಸುತ್ತಿರುವ ತಂತಿ ಹರಿದು ಬಿದ್ದ ಪರಿಣಾಮ ಯುವಕನೋರ್ವ ಮೃತಪಟ್ಟಿರುವ ಘಟನೆ ನಿನ್ನೆ (ಸೆ.15) ರಾತ್ರಿ ವಿಜಯನಗರ ಜಿಲ್ಲೆ ಕೂಡ್ಲಿಗಿಯಲ್ಲಿ ನಡೆದಿದೆ. ಪಟ್ಟಣದ ರಾಜೀವಗಾಂಧೀನಗರ ವಾಸಿ ಯುವಕ ಸಾಗರ್ ಮೃತ ಯುವಕ.
ಪಟ್ಟಣದ ಹಳೇ ಆಸ್ಪತ್ರೆಯ ಬಳಿಯ ತನ್ನ ತಂದೆಯ ತರಕಾರಿ ಅಂಗಡಿಯಲ್ಲಿ ಕುಳಿತಿದ್ದ ಸಂದರ್ಭದಲ್ಲಿ, ಅಂಗಡಿಗೆ ಹತ್ತಿರದಲ್ಲಿಯೇ ಇದ್ದ ವಿದ್ಯುತ್ ಪರಿವರ್ತಕದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಗಾಳಿಯ ರಭಸಕ್ಕೆ ವಿದ್ಯುತ್ ಪ್ರವಹಿಸುತ್ತಿರುವ ತಂತಿ ಅಂಗಡಿಯ ಮೇಲೆ ಬಿದ್ದಿದೆ. ಯುವಕ ಅಂಗಡಿಯಿಂದ ಹೊರಬರುವ ಪ್ರತ್ನದಲ್ಲಿದ್ದಾಗಲೇ ವಿದ್ಯುತ್ ತಾಗಿ ಸಾಗರ್ ತೀವ್ರ ಆಘಾತಕ್ಕೊಳಗಾಗಿದ್ದರು. ಸಾರ್ವಜನಿಕರು ಸಾಗರನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೆ ಸಾಗರ ಮೃತಪಟ್ಟಿದ್ದು, ಏಕೈಕ ಪುತ್ರನ ಅಗಲಿಕೆಯ ಸುದ್ದಿ ತಿಳಿದ ಕುಟುಂಬ ಸದಸ್ಯರ ಅಕ್ರಂದನ ಮುಗಿಲು ಮುಟ್ಟಿದೆ.
ವಿಷಯ ತಿಳಿದ ಕೂಡಲೇ ಪೊಲೀಸ್ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಯವರು, ಜೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಮತ್ತು ಅಗ್ನಿ ಶಾಮಕ ದಳದ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಜರುಗಿಸಿದ್ದಾರೆ.
ಇದನ್ನೂ ಓದಿ: ಕೂಡ್ಲಿಗಿ | ಕಿತ್ತೂರು ರಾಣಿ ಚೆನ್ನಮ್ಮ ವಸತಿಶಾಲೆ ಆವರಣದಲ್ಲಿ ವಿಜ್ಞಾನ ಪಿಯು ಕಾಲೇಜು ಆರಂಭ
ಪಟ್ಟಣ ಪಂಚಾಯ್ತಿ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕರವರು ಹಾಗೂ ಕೆಲ ಪಪಂ ಸದಸ್ಯರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಇಲಾಖಾಧಿಕಾರಿಗಳೊಂದಿಗೆ ಸಮಾಲೋಚಿಸಿ, ದುರ್ಘಘಟನೆಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ವಿದ್ಯುತ್ ಅವಘಡದಿಂದಾಗಿ ಮೃತ ಪಟ್ಟ ಯುವಕ ಸಾಗರನ ಕುಟುಂಬ ಸದಸ್ಯರಿಗೆ ಸಾಂತ್ವನ ತಿಳಿಸಿದ್ದಾರೆ. ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.