2023ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯ ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿ ಕೆ ವೈ ನಂಜೇಗೌಡ ಆಯ್ಕೆಯಾಗಿದ್ದನ್ನು ಕರ್ನಾಟಕ ಹೈಕೋರ್ಟ್ ಅಸಿಂಧುಗೊಳಿಸಿದೆ.
ಬಿಜೆಪಿ ಪರಾಜಿತ ಅಭ್ಯರ್ಥಿ ಕೆ ಎಸ್ ಮಂಜುನಾಥ್ ಗೌಡ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಪೀಠ ವಿಚಾರಣೆ ನಡೆಸಿ, ಮತಗಳ ಮರು ಎಣಿಕೆ ಮಾಡುವಂತೆ ಸೂಚನೆ ನೀಡಿದೆ. ಕಳೆದ ಎರಡು ವರ್ಷಗಳ ವಿಚಾರಣೆಯ ಬಳಿಕ ಹೈಕೋರ್ಟ್ ಮಂಗಳವಾರ ತೀರ್ಪು ನೀಡಿದೆ.
ಮುಂದಿನ ನಾಲ್ಕು ವಾರದಲ್ಲಿ ಮರು ಮತ ಎಣಿಕೆ ನಡೆಸಲು ಹೈಕೋರ್ಟ್ ಆದೇಶ ನೀಡಿದೆ. ಜಿಲ್ಲಾ ಚುನಾವಣಾ ಅಧಿಕಾರಿ ಮತ ಎಣಿಕೆಯ ವಿಡಿಯೋ ಸಲ್ಲಿಸಿಲ್ಲ. ಹೀಗಾಗಿ ಜಿಲ್ಲಾ ಚುನಾವಣಾಧಿಕಾರಿ ವಿರುದ್ಧವೂ ಕ್ರಮಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಮಾಲೂರು ಶಾಸಕರಾಗಿ ಕೆ.ವೈ.ನಂಜೇಗೌಡ ಆಯ್ಕೆಯನ್ನು ಅಸಿಂಧುಗೊಳಿಸಿದ ಬಳಿಕ ಆ ಆದೇಶದ ವಿರುದ್ಧ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸುವವರೆಗೂ ಆದೇಶ ಜಾರಿ ಮಾಡಬಾರದು ಎಂದು ಕೆ.ವೈ.ನಂಜೇಗೌಡ ಪರ ವಕೀಲರು ಹೈಕೋರ್ಟ್ಗೆ ಮನವಿ ಮಾಡಿಕೊಂಡರು. ಮನವಿ ಪುರಷ್ಕರಿಸಿದ ನ್ಯಾಯಾಲಯ ಕೆ.ವೈ.ನಂಜೇಗೌಡಗೆ 30 ದಿನಗಳ ತಾತ್ಕಾಲಿಕ ರಿಲೀಫ್ ನೀಡಿದೆ. ಇದರಿಂದ ತನ್ನದೇ ತೀರ್ಪಿಗೆ ಹೈಕೋರ್ಟ್ 30 ದಿನಗಳವರೆಗೆ ತಡೆಯಾಜ್ಞೆ ನೀಡಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಕೆ.ವೈ. ನಂಜೇಗೌಡ 248 ಮತಗಳ ಅಂತರದಿಂದ ಜಯಗಳಿಸಿದ್ದರು. ಈ ಬಗ್ಗೆ ಮಾಜಿ ಶಾಸಕ, ಬಿಜೆಪಿ ಅಭ್ಯರ್ಥಿಯಾಗಿದ್ದ ಕೆ.ಎಸ್. ಮಂಜುನಾಥ ಗೌಡ ಅನುಮಾನ ವ್ಯಕ್ತಪಡಿಸಿದ್ದರು. ಆ ಸಂದರ್ಭದಲ್ಲಿಯೇ ಮತ ಎಣಿಕೆಯಲ್ಲಿ ಲೋಪವಾಗಿದ್ದು, ಮರು ಮತ ಎಣಿಕೆಗೆ ಆದೇಶ ನೀಡುವಂತೆ ಹೈಕೋರ್ಟ್ಗೆ ಮನವಿ ಮಾಡಿದ್ದರು.
ಕೋಲಾರ ಜಿಲ್ಲಾ ಚುನಾವಣಾಧಿಕಾರಿಯಾಗಿದ್ದ ವೆಂಕಟರಾಜು ಅವರಿಗೆ ನಿರ್ದೇಶನ ನೀಡಿರುವ ಹೈಕೋರ್ಟ್, ಮಾಲೂರು ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯದ ದೃಶ್ಯಾವಳಿಗಳನ್ನು ಚಿತ್ರೀಕರಿಸಿ ಶೇಖರಿಸಿಟ್ಟಿರುವ ಹಾರ್ಡ್ಡಿಸ್ಕ್ ಅನ್ನು ಮೆಸರ್ಸ್ ಐಕಿಯಾ ಬಿಸಿನೆಸ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ಯಿಂದ ಪಡೆಯಲಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ವಿವರಣೆ ನೀಡಿ ಪ್ರಮಾಣ ಪತ್ರ ಸಲ್ಲಿಸುವಂತೆ ಸೂಚಿಸಿದೆ.
ಮತಗಳ ವಿವರ
ಕೆ.ವೈ. ನಂಜೇಗೌಡ (ಕಾಂಗ್ರೆಸ್)- 50,955
ಮಂಜುನಾಥ್ ಗೌಡ (ಬಿಜೆಪಿ)- 50707
ಹೂಡಿ ವಿಜಯ್ ಕುಮಾರ್ (ಪಕ್ಷೇತರ)- 49362
ಜಿ,ಇ ರಾಮೇಗೌಡ (ಜೆಡಿಎಸ್)- 17.627
ಗೆಲುವಿನ ಅಂತರ 248
ಕೆ.ವೈ. ನಂಜೇಗೌಡ ಪ್ರತಿಕ್ರಿಯೆ
ಹೊಸಕೋಟೆಯಲ್ಲಿ ಕೆ.ವೈ. ನಂಜೇಗೌಡ ಪ್ರತಿಕ್ರಿಯಿಸಿ, “ಹೈಕೋರ್ಟ್ ಆದೇಶ ಅಚ್ಚರಿ ತಂದಿದೆ. ನಮ್ಮ ಎದುರಾಳಿ ಅಭ್ಯರ್ಥಿ ಮರು ಎಣಿಕೆ ಬೇಕೆಂದು ಕೋರ್ಟ್ ಮೊರೆ ಹೋಗಿದ್ದರು. ನಾನೀಗ ಹಿರಿಯ ವಕೀಲರೊಂದಿಗೆ ಮಾತನಾಡುತ್ತೇನೆ. ಕೇವಲ ಮರು ಎಣಿಕೆಗೆ ಆದೇಶವಾಗಿದ್ದರೆ ನಾನು ಸ್ವಾಗತಿಸುತಿದ್ದೆ. ಆದರೆ ಕೋರ್ಟ್ ಚುನಾವಣೆಯನ್ನು ಅಸಿಂಧು ಮಾಡಿ ಮರು ಎಣಿಕೆ ಆದೇಶ ಕೊಟ್ಟಿದ್ದು ಶಾಕ್ ನೀಡಿದೆ” ಎಂದಿದ್ದಾರೆ.
“ಮರು ಎಣಿಕೆ ಆದರೂ ನನಗೆ ಗೆಲ್ಲುವ ವಿಶ್ವಾಸವಿದೆ. 30 ದಿನಗಳ ತಡೆಯಾಜ್ಞೆಗೆ ಕಾಲಾವಕಾಶ ನೀಡಿದ್ದಾರೆ. ಈ ಕುರಿತು ಹಿರಿಯ ವಕೀಲರೊಂದಿಗೆ ಚರ್ಚಿಸಿ ಸುಪ್ರೀಂ ಕೋರ್ಟ್ ನಲ್ಲಿ ಚಾಲೆಂಜ್ ಮಾಡುತ್ತೇನೆ. ನನಗೆ ಇನ್ನೂ ಕೋರ್ಟ್ನ ಆದೇಶದ ಪ್ರತಿ ಕೈಗೆ ಸಿಕ್ಕಿಲ್ಲ” ಎಂದು ಹೇಳಿದರು.