ಪೊಲೀಸ್ ವ್ಯವಸ್ಥೆಗೆ ಸೇರುವ ಪ್ರತಿ ಸಿಬ್ಬಂದಿ ಸಾರ್ವಜನಿಕ ಸೇವಕರಾಗಬೇಕೇ ಹೊರತು ಪೀಡಕರಾಗಬಾರದು. ಸಾರ್ವಜನಿಕರಿಗೆ ಜನಸ್ನೇಹಿಯಾಗಿ, ಜನಪರವಾಗಿ ತಮ್ಮ ವೃತ್ತಿ ನಿರ್ವಹಿಸಿ, ಯಶಸ್ವಿಯಾಗಬೇಕು ಎಂದು ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆಲೋಕ್ ಕುಮಾರ್ ಹೇಳಿದರು.
ಕಲಘಗಿ ರಸ್ತೆಯ ಗಿರಿನಗರದಲ್ಲಿರುವ ಪೊಲೀಸ್ ತರಬೇತಿ ಶಾಲೆಯ ಕವಾಯತು ಮೈದಾನದಲ್ಲಿ ಜರುಗಿದ 2ನೇ ತಂಡದ ಸಶಸ್ತ್ರ ಪೊಲೀಸ್ ಪೇದೆಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಾತನಾಡುತ್ತಾ, ತರಬೇತಿ ಗುಣಮಟ್ಟದ ಮೇಲೆ ಪೊಲೀಸ್ ಪೇದೆಗಳ ಸೇವೆಯ ಸಾಮಥ್ರ್ಯ ಅವಲಂಬಿಸಿರುತ್ತದೆ. ಕಳಪೆಗುಣಮಟ್ಟದ ತರಬೇತಿ ನೀಡಿದರೆ ಉತ್ತಮವಾದ ಬದ್ಧತೆಯ ಕರ್ತವ್ಯ ನಿರೀಕ್ಷೆ ಮಾಡುವುದು ಅಸಾಧ್ಯ. ಅಧಿಕಾರಿ ಹಂತದ ಪೊಲೀಸರಿಗೆ ಇಲಾಖೆಯ ತರಬೇತಿಗಳು ಕೇಂದ್ರಿಕೃತವಾಗಿವೆ. ಪೊಲೀಸ್ ಪೇದೆಗಳಿಗೆ ಉತ್ತಮವಾದ ತರಬೇತಿ ನೀಡಿದರೆ, ಪೊಲೀಸ್ ವ್ಯವಸ್ಥೆ ಬಲವಾಗುತ್ತದೆ. ತರಬೇತಿಯಲ್ಲಿ ಪಠ್ಯಕ್ರಮ, ಪ್ರಾಯೋಗಿಕ ತರಬೇತಿ, ದೈಹಿಕ ತರಬೇತಿ ಅಳವಡಿಸಲಾಗಿದೆ. ಈಗ ತರಬೇತಿಯಲ್ಲಿ ಆಮೂಲಾಗ್ರ ಪರಿವರ್ತನೆ ತರಲಾಗಿದೆ ಎಂದು ಹೇಳಿದರು.
ಪೊಲೀಸ್ ತರಬೇತಿ ಪಡೆದ ಪ್ರಶಿಕ್ಷಣಾರ್ಥಿಗಳು ತರಬೇತಿ ಪಡೆದು, ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಬೇಕು. ಯಾವುದೇ ಅಕ್ರಮಗಳಲ್ಲಿ, ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿ ಆಗಬಾರದು. ಅಪರಾಧಿಗಳಿಂದ ದೂರವಿದ್ದು, ಶಿಷ್ಟರನ್ನು ರಕ್ಷಿಸಬೇಕು. ಕಾನೂನು ಪಾಲನೆ ನಮ್ಮ ಆದ್ಯ ಕರ್ತವ್ಯವಾಗಬೇಕು. ಮುಂದಿನ ಐದು ವರ್ಷದಲ್ಲಿ ಯಾವುದೇ ಅಪರಾಧ ಪ್ರಕರಣದಲ್ಲಿ ಭಾಗಿ ಆಗುವದಿಲ್ಲ ಎಂಬ ವಾರಂಟಿ ನೀಡಬೇಕು. ಪ್ರತಿಜ್ಞಾ ವಿಧಿ ಸ್ವೀಕರಿಸಿಯೂ ಓಥ್ ಬ್ರಿಚ್ ಮಾಡಿದರೆ, ಅಂತವರ ವಿರುದ್ಧ ಚಾರ್ಜ್ ಮಾಡಿ ಕೇಸ್ ದಾಖಲಿಸಬೇಕು. ಈ ಕುರಿತು ತರಬೇತಿ ಶಾಲೆಯ ಮುಖ್ಯಸ್ಥರು ಲಿಖಿತವಾಗಿ ಹೇಳಿಕೆ ಪಡೆದು, ಪ್ರಶಿಕ್ಷಣಾರ್ಥಿಗಳು ಸೇವೆಗೆ ಸೇರುವ ಪೊಲೀಸ್ ಠಾಣೆಗಳಿಗೆ ಕಳುಹಿಸಬೇಕು. ಇದರಿಂದ ಅವರಿಗೆ ಎಚ್ಚರಿಕೆ ಇರುತ್ತದೆ ಎಂದು ಸಲಹೆ ನೀಡಿದರು.

ಪೊಲೀಸ್ ವ್ಯವಸ್ಥೆಯಿಂದ ಸಮಾಜಕ್ಕೆ, ಸಾರ್ವಜನಿಕರಿಗೆ ರಕ್ಷಣೆಯ ಬಲವಾದ ಭರವಸೆ ಇದೆ. ಪೊಲೀಸ್ ಇರುವುದು ಸಾರ್ವಜನಿಕರ ರಕ್ಷಣೆಗಾಗಿ, ಸಾರ್ವಜನಿಕ ಆಸ್ತಿಪಾಸ್ತಿ, ಜೀವ ರಕ್ಷಣೆಗಾಗಿ ನಮ್ಮ ಕರ್ತವ್ಯವಿರಬೇಕು. ಬಡವರ, ಮಹಿಳೆಯರ, ಅಸಹಾಯಕರ, ಮಕ್ಕಳ ರಕ್ಷಣೆ ಮಾಡಬೇಕು. ಯಾವುದೇ ಸಂದರ್ಭದಲ್ಲಿ ಬಂದೋಬಸ್ತ ಸ್ಥಳದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಅನಗತ್ಯ ಬಲ ಪ್ರಯೋಗ ಮಾಡಬಾರದು. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಮಸ್ಯೆ ಬಗೆಹರಿಸಬೇಕು. ಪೊಲೀಸ್ ಇಲಾಖೆಯಲ್ಲಿ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಹೊಂದಾಣಿಕೆ ಇರಬೇಕು. ಬರುವ ಸಂದಿಗ್ಧ ಸಂದರ್ಭಗಳನ್ನು ಸಮರ್ಥವಾಗಿ ಎದುರಿಸಿ, ಸಮಾಜದಲ್ಲಿ ಮಾದರಿಯಾಗಿ ನಿಲ್ಲಬೇಕು. ಆರೋಗ್ಯವು ಮುಖ್ಯ. ಪ್ರತಿಯೊಬ್ಬರು ಮಾನಸಿಕ ಮತ್ತು ಶಾರೀರಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ಪ್ರತಿದಿನ ಕನಿಷ್ಠ 45 ನಿಮಿಷ ವ್ಯಾಯಾಮ, ಯೋಗ ಮಾಡಬೇಕು ಎಂದರು.
ಧಾರವಾಡ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲ ಪೊಲೀಸ್ ಅಧೀಕ್ಷಕ ಎಂ.ಎಂ.ಯಾದವಾಡ ಸ್ವಾಗತಿಸಿ, ತರಬೇತಿ ಶಾಲೆಯ ವರದಿ ವಾಚನ ಮಾಡಿದರು. ವೇದಿಕೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಮಹಾನಗರ ಉಪ ಪೊಲೀಸ್ ಆಯುಕ್ತ ಮಾನಿಂಗ ನಂದಗಾಂವಿ ಸೇರಿದಂತೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು ಇದ್ದರು.
ಸಿಪಿಐ ರಮೇಶ ಗೋಕಾಕ ವಂದಿಸಿದರು. ಆಕಾಶವಾಣಿ ಹಿರಿಯ ಉದ್ಘೋಷಕಿ ಮಾಯಾ ರಾಮನ್ ಹಾಗೂ ಮಹಾಂತೇಶ ಸಣ್ಣಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳ ಪಾಲಕರು, ಸಾರ್ವಜನಿಕರು ಭಾಗವಹಿಸಿದ್ದರು.