ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ಹೊಸ ರಕ್ಷಣಾ ಒಪ್ಪಂದಕ್ಕೆ ಬುಧವಾರ ಸಹಿ ಹಾಕಿವೆ. ಇಬ್ಬರಲ್ಲಿ ಯಾವುದೇ ರಾಷ್ಟ್ರದ ಮೇಲಿನ ದಾಳಿಯನ್ನು ‘ಉಭಯ ರಾಷ್ಟ್ರಗಳ ವಿರುದ್ಧದ ಆಕ್ರಮಣಕಾರಿ ಕೃತ್ಯ’ ಎಂದು ಪರಿಗಣಿಸುವುದಾಗಿ ಎರಡೂ ದೇಶಗಳು ಘೋಷಿಸಿವೆ.
ಸೌದಿಯ ರಿಯಾದ್ನಲ್ಲಿ ಪಾಕಿಸ್ತಾನಿ ಪ್ರಧಾನಿ ಮುಹಮ್ಮದ್ ಶೆಹಬಾಜ್ ಷರೀಫ್ ಮತ್ತು ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಭೇಟಿ ನೀಡಿದ್ದು, ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಸೆಪ್ಟೆಂಬರ್ 9 ರಂದು ಕತಾರ್ ರಾಜಧಾನಿ ದೋಹಾದ ಮೇಲೆ ಇಸ್ರೇಲ್ ದಾಳಿ ನಡೆಸಿದೆ. ಈ ದಾಳಿ ಬೆನ್ನಲ್ಲೇ, ಅರಬ್ ಲೀಗ್ ಮತ್ತು ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋಆಪರೇಷನ್ (ಒಐಸಿ) ಜಂಟಿ ಅಧಿವೇಶನ ನಡೆಸಿವೆ. ಈ ಅಧಿವೇಶನದ ಬೆನ್ನಲ್ಲೇ, ಪಾಕ್ ಮತ್ತು ಸೌದಿ ನಡುವೆ ಈ ಒಪ್ಪಂದ ನಡೆದಿದೆ.
“ತಮ್ಮ (ಸೌದಿ-ಪಾಕ್) ಭದ್ರತೆಯನ್ನು ಹೆಚ್ಚಿಸಲು, ಜಗತ್ತಿನಲ್ಲಿ ಭದ್ರತೆ ಮತ್ತು ಶಾಂತಿಯನ್ನು ಸಾಧಿಸಲು ಎರಡೂ ರಾಷ್ಟ್ರಗಳು ಪರಸ್ಪರ ಸಹಕಾರ ನೀಡಲಿವೆ. ಉಭಯ ರಾಷ್ಟ್ರಗಳ ವಿರುದ್ಧದ ಯಾವುದೇ ಆಕ್ರಮಣವನ್ನು ಜಂಟಿಯಾಗಿ ತಡೆಯುವ, ರಕ್ಷಣಾ ಬಲವನ್ನು ಮತ್ತಷ್ಟು ಗಟ್ಟಿಗೊಳಿಸುವ ಗುರಿ ಇರುವುದಾಗಿ ಎರಡೂ ರಾಷ್ಟ್ರಗಳು ಘೋಷಿಸಿವೆ” ಎಂದು ಸೌದಿ ಪ್ರೆಸ್ ಏಜೆನ್ಸಿ ತಿಳಿಸಿದೆ.
“ಯಾವುದೇ ದೇಶದ (ಸೌದಿ-ಪಾಕ್) ವಿರುದ್ಧದ ಯಾವುದೇ ಆಕ್ರಮಣವನ್ನು ಎರಡೂ ದೇಶಗಳ ವಿರುದ್ಧದ ಆಕ್ರಮಣವೆಂದು ಪರಿಗಣಿಸಲಾಗುತ್ತದೆ” ಎಂದು ಉಭಯ ರಾಷ್ಟ್ರಗಳು ಘೋಷಿಸಿವೆ.
ಈ ಲೇಖನ ಓದಿದ್ದೀರಾ?: ಸಾಮಾಜಿಕ ನ್ಯಾಯ ದಿನ | ದ್ರಾವಿಡ ಮಣ್ಣಲ್ಲಿ ‘ಸ್ವಾಭಿಮಾನ’ದ ಬೀಜ ಬಿತ್ತಿ ಫಸಲು ತೆಗೆದ ಪೆರಿಯಾರ್
ಸೌದಿ ಅರೇಬಿಯಾ ಮತ್ತು ಪಾಕಿಸ್ತಾನ ನಡುವಿನ ಒಪ್ಪಂದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತದ ವಿದೇಶಾಂಗ ಸಚಿವಾಲಯದ (MEA) ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್, “ಈ ಬೆಳವಣಿಗೆಯ ಪರಿಣಾಮಗಳನ್ನು ನಮ್ಮ ರಾಷ್ಟ್ರೀಯ ಭದ್ರತೆಗೆ ಹಾಗೂ ಪ್ರಾದೇಶಿಕ ಮತ್ತು ಜಾಗತಿಕ ಸ್ಥಿರತೆಯ ಉದ್ದೇಶಕ್ಕಾಗಿ ಭಾರತವು ಅಧ್ಯಯನ ನಡೆಸುತ್ತದೆ” ಎಂದು ಹೇಳಿದ್ದಾರೆ.
“ಭಾರತದ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ಎಲ್ಲ ಕ್ಷೇತ್ರಗಳಲ್ಲಿ ಸಮಗ್ರ ರಾಷ್ಟ್ರೀಯ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ” ಎಂದು ಅವರು ತಿಳಿಸಿದ್ದಾರೆ.
“ಸೌದಿ ಅರೇಬಿಯಾ ಮತ್ತು ಪಾಕಿಸ್ತಾನದ ನಡುವೆ ರಕ್ಷಣಾ ಒಪ್ಪಂದ ನಡೆದಿದೆ ಎಂಬ ವರದಿಗಳನ್ನು ನಾವು ನೋಡಿದ್ದೇವೆ. ಎರಡೂ ದೇಶಗಳ ನಡುವೆ ಒಪ್ಪಂದ ನಡೆಯುತ್ತಿದೆ ಎಂಬುದು ಸರ್ಕಾರಕ್ಕೆ ತಿಳಿದಿತ್ತು. ಈ ಬೆಳವಣಿಗೆಯ ಪರಿಣಾಮಗಳು ನಮ್ಮ ರಾಷ್ಟ್ರೀಯ ಭದ್ರತೆಗೆ, ಪ್ರಾದೇಶಿಕ ಮತ್ತು ಜಾಗತಿಕ ಸ್ಥಿರತೆಗೆ ಏನಾಗಬಹುದು ಎಂಬುದನ್ನು ನಾವು ಅಧ್ಯಯನ ಮಾಡುತ್ತೇವೆ. ಭಾರತದ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ಎಲ್ಲ ಕ್ಷೇತ್ರಗಳಲ್ಲಿ ಸಮಗ್ರ ರಾಷ್ಟ್ರೀಯ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರ ಬದ್ಧವಾಗಿದೆ” ಎಂದು ಎಂಇಎ ವಕ್ತಾರ ವಿವರಿಸಿದ್ದಾರೆ.