ಬೆಂಗಳೂರಿನಲ್ಲಿ ಗುಂಡಿಗಳ ಹಾವಳಿ ವಿರುದ್ಧ ಭಾರೀ ಆಕ್ರೋಶ, ಟೀಕೆಗಳು ವ್ಯಕ್ತವಾಗುತ್ತಿವೆ. ಇದೆಲ್ಲದರ ನಡುವೆ, ರಸ್ತೆಗುಂಡಿಗಳ ಬಗ್ಗೆ ಬೆಂಗಳೂರು ಅಭಿವೃದ್ಧಿ ಖಾತೆ ಹೊಂದಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿದ್ದು, “ಗುಂಡಿಗಳು ತಾವಾಗಿಯೇ ಸೃಷ್ಟಿಯಾಗುವುದಿಲ್ಲ. ಅವುಗಳು ನೈಸರ್ಗಿಕ ಕಾರಣಗಳು ಮತ್ತು ಭಾರೀ ಮಳೆಯಿಂದಾಗಿ ಉಂಟಾಗುತ್ತವೆ” ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ ಶಿವಕುಮಾರ್, “ಸಮಸ್ಯೆಯನ್ನು ಬಗೆಹರಿಸಲು ನಾವು ಕೆಲಸ ಮಾಡುತ್ತಿದ್ದೇವೆ. ಆದರೆ, ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜಕೀಯ ಮಾಡುತ್ತಿದೆ. ಅವರು ಏನಾದರೂ ಮಾಡಿಕೊಳ್ಳಲಿ, ನಾವು ಕೆಲಸ ಮಾಡುತ್ತೇವೆ. ರಸ್ತೆಗುಂಡಿಗಳ ವಿಚಾರವಾಗಿ ಶನಿವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಭೆ ನಡೆಯಲಿದೆ. ಗುಂಡಿಗಳನ್ನು ಮುಚ್ಚಲು, ಕ್ರಮ ಕೈಗೊಳ್ಳಲಾಗಿದೆ” ಎಂದು ಹೇಳಿದ್ದಾರೆ.
“ರಸ್ತೆಗುಂಡಿಗಳು ಪ್ರಕೃತಿಯಿಂದ ಉಂಟಾಗುತ್ತವೆ. ರಸ್ತೆಗುಂಡಿಗಳನ್ನು ಸೃಷ್ಟಿಸಲು ಯಾರೂ ಬಯಸುವುದಿಲ್ಲ. ಬೆಂಗಳೂರಿನಲ್ಲಿ ವಾಹನಗಳ ಹೆಚ್ಚಳ, ಭಾರೀ ದಟ್ಟಣೆ ಹಾಗೂ ಅತಿಯಾದ ಮಳೆಯಿಂದಾಗಿ ಹೆಚ್ಚುಗುಂಡಿಗಳು ಉಂಟಾಗಿವೆ” ಎಂದು ಅವರು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಮೋದಿ ಈಗ ‘ಭಯೋತ್ಪಾದಕರು ಅಳುತ್ತಿದ್ದಾರೆ’ ಎಂದು ಹೇಳುತ್ತಿರುವುದೇಕೆ?
“ನಾವು ಈಗಾಗಲೇ 7,000ಕ್ಕೂ ಹೆಚ್ಚು ಗುಂಡಿಗಳನ್ನು ಮುಚ್ಚಿದ್ದೇವೆ. ಬೆಂಗಳೂರಿನ ರಸ್ತೆಗಳಲ್ಲಿ ಇನ್ನೂ 5,000ಕ್ಕೂ ಹೆಚ್ಚು ಗುಂಡಿಗಳು ಉಳಿದಿವೆ. ಗುಂಡಿಗಳ ಸ್ಥಿತಿಯ ಕುರಿತು ವರದಿ ಸಲ್ಲಿಸಲು ನಾವು ಪೊಲೀಸ್ ಆಯುಕ್ತರನ್ನು ಕೇಳಿದ್ದೇವೆ. ಸಾಮಾನ್ಯ ನಾಗರಿಕರು ಸಹ ರಸ್ತೆಗುಂಡಿಗಳ ಬಗ್ಗೆ ಮಾಹಿತಿ ಒದಗಿಸುತ್ತಿದ್ದಾರೆ” ಎಂದು ಶಿವಕುಮಾರ್ ತಿಳಿಸಿದ್ದಾರೆ.
“ರಸ್ತೆಗುಂಡಿಗಳ ವಿಚಾರವಾಗಿ ಬಿಜೆಪಿ ರಾಜಕೀಯ ಮಾಡುವುದನ್ನು ನಾವು ತಡೆಯಲು ಸಾಧ್ಯವಿಲ್ಲ. ಅವರು ಏನು ಬೇಕಾದರೂ ಮಾಡಲಿ. ನಾವು ಪರಿಹಾರಗಳನ್ನು ಕಂಡುಕೊಳ್ಳಲು ಕೆಲಸ ಮಾಡುತ್ತಿದ್ದೇವೆ. ಬಿಜೆಪಿ ಶಾಸಕರಿರುವ ವಿಧಾನಸಭಾ ಕ್ಷೇತ್ರಗಳಿಗೂ ನಾವು ಯಾವುದೇ ತಾರತಮ್ಯವಿಲ್ಲದೆ ಅನುದಾನವನ್ನು ಬಿಡುಗಡೆ ಮಾಡಿದ್ದೇವೆ” ಎಂದು ಹೇಳಿದ್ದಾರೆ.
“ಬಿಜೆಪಿ ಶಾಸಕರಿಗೆ ಹಣ ನೀಡಿದ್ದರೂ ಸಹ, ಅವರು ಗುಂಡಿಗಳನ್ನು ಏಕೆ ಮುಚ್ಚಲಿಲ್ಲ? ಈಗಲೂ ಸಹ, ನಾವು ಬಿಜೆಪಿ ಶಾಸಕರಿಗೆ 25 ಕೋಟಿ ರೂ. ಬಿಡುಗಡೆ ಮಾಡುತ್ತಿದ್ದೇವೆ. ಅವರು ತಮ್ಮ ಕೆಲಸವನ್ನು ಮಾಡಲಿ” ಎಂದಿದ್ದಾರೆ.