ಶಿವಮೊಗ್ಗ, ರಾಜ್ಯ ಸರ್ಕಾರ ಸೆ. 22ರಿಂದ ನಡೆಸಲಿರುವ ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆಯಲ್ಲಿ ಭಾಗವಹಿಸದಿರಲು ರಾಜ್ಯದ ಎಲ್ಲಾ ಆಶಾ ಕಾರ್ಯಕರ್ತೆಯರು ನಿರ್ಣಯಿಸಿದ್ದಾರೆ .
ಈ ಕುರಿತಿ ನಿರ್ಣಯ ಪತ್ರವನ್ನು ಇಂದು ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಕಾರ್ಯಕರ್ತೆಯರು ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷೆ ರಾಜೇಶ್ವರಿ, ಗ್ರಾಮೀಣ ಆಶಾ ಕಾರ್ಯಕರ್ತೆಯರಿಗೆ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ ಕೆಲಸಕ್ಕೆ 5000 ಮತ್ತು ನಗರ ಆಶಾ ಕಾರ್ಯಕರ್ತೆಯರಿಗೆ ಮನೆಗಳ ಸಂಖ್ಯೆ ಹೆಚ್ಚು ಇರುವುದರಿಂದ 10,000 ಕ್ಕೆ ಕಡಿಮೆ ಇರದಂತೆ ಗೌರವಧನ ನಿಗದಿ ಮಾಡಿದರೆ ಮಾತ್ರ ಕೆಲಸಕ್ಕೆ ಹಾಜರಾಗುವುದಾಗಿಯೂ ಇಲ್ಲವಾದಲ್ಲಿ ಸಮೀಕ್ಷೆ ಹಾಜರಾಗದಿರಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು .
ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಈ ಹಿಂದೆ ರಾಜ್ಯ ಸರ್ಕಾರದ ಮಹತ್ವದ ಗ್ಯಾರಂಟಿ ಯೋಜನೆಯ ಸಮೀಕ್ಷೆ ಮಾಡಿರುವುದಕ್ಕೆ ಕೊಡಬೇಕಾಗಿದ್ದ 1೦೦0 ಗೌರವಧನವನ್ನು ಇನ್ನೂ ಕೊಟ್ಟಿಲ್ಲ. ಕೂಡಲೇ ಈ ಬಾಕಿಯನ್ನು ನೀಡಬೇಕು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ -2025 ಮಾಡಿದ ಆಶಾ ಕಾರ್ಯಕರ್ತೆಯರಿಗೂ ನಿಗದಿಯಾಗಿದ್ದ ಬಾಕಿ ಸಂಭಾವನೆ ನೀಡಬೇಕೆಂದು ಒತ್ತಾಯಿಸಿದರು. ರಾಜ್ಯ ಸರ್ಕಾರ ಆಶಾ ಕಾರ್ಯಕರ್ತರಿಂದ ಕೆಲಸವನ್ನು ಪಡೆಯುತ್ತಿದೆ.
ಆದರೆ ಗೌರವ ಧನವನ್ನು ಘೋಷಿಸಿಯೂ ಒಂದು ಪೈಸೆಯನ್ನೂ ನೀಡಿಲ್ಲ. ಅದೇ ರೀತಿ ಇತರ ಇಲಾಖೆಗಳಿಂದ ಮಾಡಿಸಿಕೊಂಡ ಹಲವಾರು ಸಮೀಕ್ಷೆಗಳಿಗೂ ಸೂಕ್ತ ಸಂಭಾವನೆ ದೊರೆತಿಲ್ಲ. ಏಪ್ರಿಲ್ ಒಂದರಿಂದ ಆಶಾ ಕಾರ್ಯಕರ್ತೆಯರಿಗೆ ಮಾಸಿಕ 10,000 ಗ್ಯಾರಂಟಿ ಗೌರವ ಧನ ಎಂದು ಭರವಸೆ ನೀಡಿದ್ದರು.
ಈ ವರ್ಷದ ಬಜೆಟ್ ನಲ್ಲಿ ಅಂಗನವಾಡಿ ಬಿಸಿಯೂಟ ಕಾರ್ಯಕರ್ತೆಯರಿಗೆ 1000 ಹೆಚ್ಚಳ ಮಾಡಿ ಆಶಾ ಕಾರ್ಯಕರ್ತರಿಗೆ ಮಾತ್ರ 1000 ಹೆಚ್ಚಿಸಿಲ್ಲ ಎಂದರು.
ಸರ್ಕಾರದ ಅಧಿಕೃತ ಆದೇಶದಲ್ಲಿ ಸರ್ವೆ ಮಾಡುವಷ್ಟು ದಿನಗಳ ಕಾಲ ಚಟುವಟಿಕೆ ಆಧಾರಿತ ಪ್ರೋತ್ಸಾಹ ಧನಕ್ಕೂ ಕುತ್ತುಬರುತ್ತದೆ. ಇದರಿಂದ ಸ್ವಂತ ಹಣವನ್ನು ಖರ್ಚು ಮಾಡಿಕೊಂಡು ಬರಿಗೈಯಲ್ಲಿ ಮನೆಗೆ ಹೋಗುವ ಪರಿಸ್ಥಿತಿ ಬರಲಿದೆ. ಈ ಎಲ್ಲ ಕಾರಣಗಳಿಂದ ಗೌರವಧನ ಇಲ್ಲದೆ ಸರ್ವೆ ಕೆಲಸ ಮಾಡದಿರಲು ಎಲ್ಲಾ ಜಿಲ್ಲೆಗಳ ಕಾರ್ಯಕರ್ತರು ನಿರ್ಣಯ ಮಾಡಿದ್ದಾರೆ ಎಂದು ಹೇಳಿದರು.
ಆಶಾ ಕಾರ್ಯಕರ್ತೆಯರು ಪ್ರೋತ್ಸಾಹಧನ ಆಧಾರಿತ ಕೆಲಸ ಮಾಡುವವರಾದ್ದರಿಂದ ಈ ಸರ್ವೇ ದಿನಗಳಲ್ಲಿ ಅವರ ಕೆಲಸಗಳಿಗೆ ಹೆಚ್ಚುವರಿ ಕೆಲಸ ಆಗುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ಕೂಡಲೇ ಸರ್ಕಾರ ಈ ಬಗ್ಗೆ ಆದೇಶ ಹೊರಡಿಸಿದಲ್ಲಿ ಮಾತ್ರ ಸಮೀಕ್ಷೆ ಮಾಡಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.
ಮನವಿ ಸಲ್ಲಿಕೆ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ, ರೇಣುಕಾ, ಸರಸ್ವತಿ, ಕಾರ್ಯಕರ್ತೆರಾದ ಅನ್ನಪೂರ್ಣ, ರೂಪಾ, ಯಾಸ್ಮಿನ್, ಹೀನಾ, ಕೆ.ಎನ್. ಗಾಯತ್ರಿ ಉಪಸ್ಥಿತರಿದ್ದರು.