ಉಡುಪಿ | ಸಮಾಜದಲ್ಲಿ ನಿಮ್ಮನ್ನು ಹೆದರಿಸುವ ಕೆಲಸಗಳು ನಿರಂತವಾಗಿ ನಡೆಯುತ್ತಲಿದೆ. ವೈದ್ಯರು, ವಕೀಲರು, ಧಾರ್ಮಿಕ ಗುರುಗಳು, ಶಿಕ್ಷಕರು ವಿದ್ಯಾರ್ಥಿಗಳನ್ನು ಹೆದರಿಸುತ್ತಾರೆ, ರಾಜಕಾರಣಿಗಳ ಬಂಡವಾಳವೇ ನಿಮ್ಮನ್ನು ಹೆದರಿಸುವುದು, ಬಯಪಡಿಸುವ ಕೆಲಸ ಆಗತ್ತಿದೆ ಹೀಗೆ ಎಲ್ಲ ಕಡೆಯಿಂದಲೂ ನಿಮಗೆ ಹೆದರಿಸುವಾಗ, ಸಮಾಜಕ್ಕೆ ಧೈರ್ಯ ತುಂಬುವ, ಸಮಾಜಕ್ಕೆ ಆತ್ಮವಿಶ್ವಾಸವನ್ನು ಕೊಡುವ ಕೆಲಸವನ್ನು ಮಾಡಬೇಕು ಎಂದು ಜಮಾಅತೆ ಇಸ್ಲಾಮಿ ಹಿಂದ್ ಬಹಳ ಪ್ರಾಮಾಣಿಕವಾಗಿ ನಂಬುತ್ತದೆ. ಅದಕ್ಕಾಗಿ ಇಂತಹ ವಿಚಾರಗೋಷ್ಠಿಗಳ ಮೂಲಕ ಜನರಲ್ಲಿ ಧೈರ್ಯ ಉಂಟುಮಾಡುವ ಪ್ರಯತ್ನಗಳು ಮಾಡುತ್ತಿವೆ ಎಂದು ಶಾಂತಿ ಪ್ರಕಾಶನದ ವ್ಯವಸ್ಥಾಪಕರಾದ ಮಹಮ್ಮದ್ ಕುಂಞಿ ತಿಳಿಸಿದರು.
ಅವರು, ನಗರದ ಆವೆ ಮರಿಯಾ ಸಭಾಂಗಣದಲ್ಲಿ ನಡೆದ ನ್ಯಾಯದ ಹರಿಕಾರ ಪ್ರವಾದಿ ಮುಹಮ್ಮದ್ ಸೀರತ್ ಅಭಿಯಾನದ ಪ್ರಯುಕ್ತ ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ಘಟಕದ ವತಿಯಿಂದ ಹಮ್ಮಿಕೊಂಡ ನ್ಯಾಯದ ಪರಿಕಲ್ಪನೆ ಮತ್ತು ನಮ್ಮ ಜೀವನದ ಮೇಲೆ ಅದರ ಪ್ರಭಾವ ಎಂಬ ವಿಚಾರಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಮುಂದುವರೆದು ಮಾತನಾಡಿದ ಅವರು, ಜಗತ್ತಿನಲ್ಲಿ ಧರ್ಮಗಳು ಹೆದರಿಸುವ, ಬೆದರಿಸು ಯಾವುದೇ ಸಿದ್ದಾಂತಗಳನ್ನು ಕಲಿಸಲಿಲ್ಲ. ಜಗತ್ತಿಗೆ ದಾರಾಳ ಪ್ರವಾದಿಗಳು, ದಾರ್ಶನಿಕರು, ಮಹಾಪುರುಷರು, ಸಾಧು ಸಂತರು ಬಂದಿದ್ದಾರೆ. ಆದರೆ ಯಾರು ಸಹ ಹಗೆತನದ, ದ್ವೇಷದ, ಭಯಪಡಿಸುವ ಸಿದ್ದಂತವನ್ನು ಕಲಿಸಿಕೊಡಲಿಲ್ಲ ಬದಲಾಗಿ ಎಲ್ಲಾ ಪ್ರವಾದಿಗಳು, ಮಹಾ ಪುರುಷರು ಕಲಿಸಿಕೊಟ್ಟದ್ದು ಪ್ರೀತಿಯಿಂದ, ಆತ್ಮವಿಶ್ವಾಸದಿಂದ, ಭರವಸೆಯಿಂದ ಬಹಳ ಧೈರ್ಯದಿಂದ ಬದುಕುವ ಪಾಠಗಳನ್ನು, ಸಂದೇಶಗಳನ್ನು, ಮಾರ್ಗದರ್ಶನಗಳನ್ನು ಈ ಸಮಾಜಕ್ಕೆ ಕೊಟ್ಟುಹೋಗಿದ್ದಾರೆ. ಅದನ್ನು ಮತ್ತೆ ಮತ್ತೆ ಸಮಾಜಕ್ಕೆ ನೆನಪಿಸುವ ಕೆಲಸ ನಾವು ಮಾಡಬೇಕು. ಯಾರು ಯಾರನ್ನು ಭಯಪಡದೆ ಬದುಕುವ ಪಾಠವನ್ನು ಧರ್ಮಗಳು ಕಲಿಸಿಕೊಟ್ಟಿದೆ. ಆದ್ದರಿಂದ ಈ ಕಾರ್ಯಕ್ರಮಗಳ ಉದ್ದೇಶ ಜನರಲ್ಲಿ ಧೈರ್ಯ ತುಂಬುವ ಪ್ರಯತ್ನ, ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಪ್ರಯತ್ನವಿದು ಎಂದು ಹೇಳಿದರು.
ಪ್ರವಾದಿ ಮುಹಮ್ಮದರನ್ನು ದೇವನು ಸಮಸ್ತ ವಿಶ್ವಕ್ಕೆ ಅನುಗ್ರಹಿಯಾಗಿ ಕಳುಹಿಸಲಾಗಿದೆ ಎಂದು ಪವಿತ್ರ ಕುರ್ಆನ್ನಲ್ಲಿ ಹೇಳಲಾಗಿದೆ. ಪ್ರವಾದಿ ಮುಹಮ್ಮದರ ಬದುಕು ಮತ್ತು ಸಂದೇಶಗಳು ಇಡೀ ಮಾನವ ಕುಲಕ್ಕೆ ಅತಿದೊಡ್ಡ ಅನುಗ್ರವಾಗಿದೆ, ಕರುಣೆಯಾಗಿದೆ ಎಂದು ಹೇಳಿದರು. ನಾವು ಬದುಕುವ ಈ ಜಗತ್ತಿನಲ್ಲಿ ಎಲ್ಲಾ ರೀತಿಯ ಅತ್ಯಾಧುನಿಕ ಸವಲತ್ತುಗಳು ಇವೆ. ಸುಖ, ಸಂಪತ್ತಿನ ಸೌಲಭ್ಯ ದಾರಳವಾಗಿದೆ. ಆದರೆ ಇಲ್ಲದ್ದು ಯಾವುದೆಂದರೆ ಪ್ರೀತಿ, ಕರುಣೆ, ಗೌರವ ಇವೆಲ್ಲವೂ ಅತ್ಯಂತ ಕಡಿಮೆ ಇರುವ ಸಮಾಜ ನಮ್ಮದು. ಎಲ್ಲಾ ಸವಲತ್ತುಗಳು ಸಮಾಜದಲ್ಲಿವೆ ಆದರೆ ಪ್ರೀತಿಯ, ಕರುಣೆಯ ಕೊರತೆಯಿದೆ. ಪರಸ್ಪರ ಗೌರವದ ಕೊರತೆಯಿದೆ. ಮನುಷ್ಯ ಅನ್ನವಿಲ್ಲದೆ ಬದುಕಬಲ್ಲ ಆದರೆ ನ್ಯಾಯವಿಲ್ಲದೆ ಬದುಕಲಿಕ್ಕೆ ಸಾಧ್ಯವೇ ಇಲ್ಲ. ನ್ಯಾಯ ಬಹಳ ದುಬಾರಿ, ನ್ಯಾಯ ಬಹಳ ವಿಳಂಬ, ನ್ಯಾಯವನ್ನು ಇಂದು ಖರೀದಿಸಲಾಗುತ್ತಿದೆ. ಆರನೇ ಶತಮಾನದಲ್ಲಿ ಪ್ರವಾದಿ ಮುಹಮ್ಮದರು ನ್ಯಾಯದ ಬಗ್ಗೆ ಅಂದಿನ ಅನಾಗರೀಕ ಸಮಾಜಕ್ಕೆ ತಿಳಿಸಿಕೊಟ್ಟರು. ನೀವು ನ್ಯಾಯವನ್ನು ಪಾಲಿಸಿ ಅದು ನಿಮ್ಮ ಮಾತಾಪಿತರ, ನಿಮ್ಮ ಸಂಬಂಧಿಕರ ಅಥವಾ ನಿಮ್ಮ ವಿರುದ್ದವೇ ಆಗಿರಲಿ ನೀವು ನ್ಯಾಯವನ್ನು ಪಾಲಿಸಿ ಎಂದು ಪವಿತ್ರ ಕುರ್ ಆನ್ ಸೂಕ್ತವನ್ನು ತಿಳಿಸಿದರು. ಪ್ರವಾದಿ ಮುಹಮ್ಮದ್ ಮಾನವ ಸಮಾನತೆ, ಕುಟುಂಬ ಸಂಬಂಧ, ನ್ಯಾಯ ಪಾಲನೆ ಇವೆಲ್ಲವನ್ನು ಕಲಿಸಿಕೊಟ್ಟದದ್ದು ಮಾತ್ರವಲ್ಲ ಪ್ರಯೋಗಿಕವಾಗಿ ಮಾಡಿ ತೋರಿಸಿದರು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ವಕೀಲರಾದ ಫಾ ನೋಯೆಲ್ ಕರ್ಕಡ, ಕಾನೂನಿನ ಉದ್ದೇಶ ಅರ್ಥಮಾಡಿಕೊಳ್ಳದೆ ಕಾನೂನಿನ ಪರಿಕಲ್ಪನೆ ಅರ್ಥವಾಗುವುದಿಲ್ಲ. ಕಾನೂನಿನ ಉದ್ದೇಶವೆಂದರೆ ಎಲ್ಲರಿಗೂ ಗೌರವಯುತವಾದ ಜೀವನ ನಡೆಸಲು ಅವಕಾಶ ಮಾಡಿಕೊಡುವುದು, ಪ್ರತಿಯೊಬ್ಬರು ಸಮಾನರು, ಸ್ವತಂತ್ರರು ಎಂದು ಪ್ರತಿಪಾದಿಸುವುದು, ನಮ್ಮ ಮೂಲಭೂತವಾದ ಹಕ್ಕುಗಳನ್ನು ರಕ್ಷಿಸುವುದು, ಇವೆಲ್ಲವೂ ಸಹ ಕಾನೂನಿನ ಉದ್ದೇಶ. ಕಾನೂನು ಮತ್ತು ನ್ಯಾಯ ಒಂದೇ ನಾಣ್ಯದ ಎರಡು ಮುಖ. ಒಬ್ಬ ಮನುಷ್ಯನ ಒಳಿತನ್ನು ಬಯಸಲಿಕ್ಕಾಗಿ ಬಹಳ ಪ್ರಮುಖ್ಯವಾಗಿ ಬೇಕಾಗಿರುವಂತಹದೆ ಕಾನೂನಿನ ಪರಿಕಲ್ಪನೆ. ಕಾನೂನಿನ ಪರಿಕಲ್ಪನೆ ಎನ್ನುವಂತಹದು ನಿನ್ನೆಯ ಅಥವಾ ಇಂದಿನ ಪರಿಕಲ್ಪನೆ ಅಲ್ಲ ದೇವನು ಜನತ್ತನ್ನು ಸೃಷ್ಟಿಸಿದನೋ ಅಂದಿನಿಂದಲೇ ನ್ಯಾಯದ ಪರಿಕಲ್ಪನೆ ಪ್ರಾರಂಭವಾಯಿತು. ಪ್ರವಾದಿ ಮುಹಮ್ಮದ್, ಜೀಸಸ್, ನಾರಾಯಣ ಗುರುಗಳು, ಬಸವಣ್ಣ, ಡಾ ಬಿ ಆರ್ ಅಂಬೆಡ್ಕರ್ ಇವರುಗಳು ನ್ಯಾಯದ ಪರಿಕಲ್ಪನೆಯನ್ನು ಪ್ರತಿಪಾದಿಸಿದವರು. ಸಮಾಜದಲ್ಲಿರವ ನ್ಯಾಯದ ಪರಿಕಲ್ಪನೆಯನ್ನು ನಮಗೆ ತೋರಿಸಿದರು ಎಂದು ಹೇಳಿದರು.

ಡಿವೈಎಸ್ಪಿ ಪ್ರಭು ಡಿಟಿ ಮಾತನಾಡಿ, ನ್ಯಾಯ ಎಂಬುದು ಎಲ್ಲರಿಗೂ ಬೇಕು. ಹುಟ್ಟಿದ ಪ್ರತಿಯೊಂದು ಮಗುವಿನಿಂದ ಹಿಡಿದು ಸಾಯುತ್ತಿರುವಂತಹ ವ್ಯಕ್ತಿ ಆತ ಸತ್ತ ನಂತರವು ಅಂತ್ಯ ಸಂಸ್ಕರವನ್ನು ಸಹ ನ್ಯಾಯಯುತವಾಗಿ ಮಾಡಬೇಕು ಎಂದು ಬಯಸುತ್ತಾರೆ. ಪ್ರತಿಯೊಬ್ಬ ವ್ಯಕ್ತಿಗೂ ಘನತೆ ಮತ್ತು ಗೌರಯುತವಾಗಿ ಬದುಕುವ ವಾತಾವರಣ ಸಮಾಜದಲ್ಲಿ ಬೇಕು. ಪ್ರತಿಯೊಬ್ಬರೂ ಸಹ ಅದನ್ನೇ ಬಯಸುತ್ತಾರೆ. ಪ್ರತಿಯೊಬ್ಬರನ್ನು ಗೌರವಿಸಬೇಕು ಅವರ ಘನತೆ, ಗೌರವ, ಹಕ್ಕು ಬಾಧ್ಯತೆಗಳನ್ನು ಗೌರವಿಸಬೇಕು ಅವರು ಅಧಿಕಾರಿಯೇ ಇರಲಿ ಸಾಮಾನ್ಯ ವ್ಯಕ್ತಿಯೇ ಆಗಿರಲಿ. ಪ್ರತಿಯೊಬ್ಬರಿಗೂ ಸಮಾನವಾಗಿ ಜೀವಿಸುವಂತಹ ಹಕ್ಕಿದೆ ಎಂದು ಹೇಳಿದರು.

ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಸುಂದರ್ ಮಾಸ್ತರ್, ಅಲ್ಪಸಂಖ್ಯಾತರ ವೇದಿಕೆ ಜಿಲ್ಲಾಧ್ಯಕ್ಷ ಚಾರ್ಸ್ ಅಂಬ್ಲರ್ ಮಾತನಾಡಿದರು, ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ಘಟಕದ ಅಧ್ಯಕ್ಷ ನಿಸಾರ್ ಅಹಮದ್ ಪ್ರಾಸ್ತವಿಕ ಮಾತನಾಡಿದರು, ಸ್ವಾಗತ ಸಮಿತಿಯ ಅಧ್ಯಕ್ಷ ಫೈಝ್ ಅಹಮದ್ ಧನ್ಯವಾದವಿತ್ತರು. ಅಬ್ದುಲ್ ಅಝೀಜ್ ಕಾರ್ಯಕ್ರಮ ನಿರೂಪಿಸಿದರು. ಸೀರತ್ ಅಭಿಯಾನದ ಸ್ವಾಗತ ಸಮಿತಿಯ ಕಾರ್ಯದರ್ಶಿ ಖಾಲಿದ್, ಫಾರೂಕ್, ಸದಸ್ಯರುಗಳಾದ ಶೇಖ್ ದಾವುದ್, ಇಕ್ಬಾಲ್ ಮನ್ನ, ಶಹಜಹನ್ ತೋನ್ಸೆ, ಮುಶೀರ್ ಶೇಖ್ , ಫೀರು ಸಾಹೇಬ್, ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

