ರಾಜ್ಯ ಸರ್ಕಾರದ ನಿರ್ದೇಶನದಂತೆ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಿದ್ಧತೆ ಮಾಡಿಕೊಂಡಿದ್ದು, ಪ್ರತಿ ಗಣತಿದಾರನಿಗೆ 150 ಮನೆಗಳ ಜವಾಬ್ದಾರಿ ವಹಿಸಿದೆ ಎಂದು ಬಾಗೇಪಲ್ಲಿ ತಹಶೀಲ್ದಾರ್ ಮನೀಷಾ ಎನ್ ಪತ್ರಿ ತಿಳಿಸಿದರು.
ಪಟ್ಟಣದ ನ್ಯಾಷನಲ್ ಪದವಿಪೂರ್ವ ಕಾಲೇಜಿನಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಪಟ್ಟಂತೆ ಶನಿವಾರ ಹಮ್ಮಿಕೊಂಡಿದ್ದ ಗಣತಿದಾರರಿಗೆ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
“ಇದೊಂದು ರಾಜ್ಯ ಸರ್ಕಾರದ ಮಹತ್ವದ ಕೆಲಸ. ಎಲ್ಲ ಗಣತಿದಾರರು ತಮ್ಮ ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕು. ರಾಜ್ಯ ಸರ್ಕಾರದ ಆದೇಶದಂತೆ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯಲಿದೆ. ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಲಾಗುತ್ತಿದೆ. ಹೀಗಾಗಿ, ತಾಲೂಕು ಮಟ್ಟದ ಅಧಿಕಾರಗಳಿಗೆ ತರಬೇತಿ ನೀಡಲಾಗಿದೆ. ಅವರುಗಳಿಗೆ ಅಗತ್ಯ ಕೈಪಿಡಿ ಮತ್ತು ಆ್ಯಪ್ ಬಗ್ಗೆಯೂ ತಿಳಿಸಲಾಗಿದೆ” ಎಂದರು.
“ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಬಹುತೇಕ ಮನೆಗಳಿಗೆ ಸ್ಟಿಕ್ಕರ್ ಅಂಟಿಸಿದ್ದಾರೆ. ಪ್ರತಿ ಗಣತಿದಾರರು ಸುಮಾರು 150 ಮನೆಗಳಿಗೆ ಸಮಿಕ್ಷೆ ಮಾಡಬೇಕಾಗಿದೆ. ಈ ಸಮೀಕ್ಷೆ ನಿಗದಿತ ಅವಧಿಯೊಳಗೆ ಮುಗಿಸಬೇಕು. ಗಣತಿದಾರರು ಕೇಳುವ 60 ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಆಶಾ ಕಾರ್ಯಕರ್ತೆಯರ ಮೂಲಕ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ” ಎಂದು ಹೇಳಿದರು.
“ಪ್ರತಿ ಹತ್ತು ವರ್ಷಗಳಿಗೊಮ್ಮೆ ಗಣತಿಯು ನಡೆಯುತ್ತದೆ. 2011ರ ನಂತರ ಯಾವುದೇ ಗಣತಿ ಆಗಿಲ್ಲ. ಹೀಗಾಗಿ, ಸರ್ಕಾರ ಎಲ್ಲ ಇಲಾಖೆಗಳಿಗೆ ಅನುಕೂಲವಾಗುವಂತೆ ಯೋಜನೆಗಳನ್ನು ರೂಪಿಸುವುದಕ್ಕಾಗಿ ಈ ಸಮೀಕ್ಷೆ ನಡೆಸುತ್ತಿದೆ. ಈ ಸಮೀಕ್ಷೆಯು ಆ್ಯಪ್ ಮೂಲಕ ಪ್ರತಿ ಕುಟುಂಬದ ಮಾಹಿತಿಯನ್ನು, ದತ್ತಾಂಶಗಳನ್ನು ಸಂಗ್ರಹ ಮಾಡಲಾಗುತ್ತಿದೆ. ಒಮ್ಮೆ ದಾಖಲಿಸಿದ ಮಾಹಿತಿಯನ್ನು ತಿದ್ದುಪಡಿ ಮಾಡಲು ಅವಕಾಶ ಇರುವುದಿಲ್ಲ. ಹೀಗಾಗಿ, ಜನರು ಸರಿಯಾದ ಮಾಹಿತಿ ನೀಡಬೇಕು. ಗಣತಿದಾರರೂ ಕೂಡ ಸೂಕ್ತ ಮಾಹಿತಿಯನ್ನು ದಾಖಲಿಸಿಕೊಳ್ಳಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? BREAKING | ಆಳಂದ ಮತದಾರರ ಹೆಸರು ಕೈಬಿಟ್ಟ ಪ್ರಕರಣ: ಹಿರಿಯ ಐಪಿಎಸ್ ಅಧಿಕಾರಿ ಬಿ ಕೆ ಸಿಂಗ್ ನೇತೃತ್ವದಲ್ಲಿ ಎಸ್ಐಟಿ ತಂಡ ರಚನೆ
ಈ ಸಂದರ್ಭದಲ್ಲಿ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಆರ್ ಶಿವಪ್ಪ, ಬಿಇಒ ವೆಂಕಟೇಶಪ್ಪ, ಸಮನ್ವಯ ಅಧಿಕಾರಿಗಳಾದ ವೆಂಕಟರಾಮ್, ಆದರ್ಶ ಕಾಲೇಜು ಪ್ರಾಂಶುಪಾಲ ನಂಜಿರೆಡ್ಡಿ, ನ್ಯಾಷನಲ್ ಕಾಲೇಜು ಪ್ರಾಂಶುಪಾಲರಾದ ವೆಂಕಟೇಶಿವಾರೆಡ್ಡಿ, ಲಲಿತಮ್ಮ, ಡಾ. ಕೃಷ್ಣಮೂರ್ತಿ, ನೋಡಲ್ ಅಧಿಕಾರಿಗಳಾದ ಪಿ ಎನ್ ನಾರಾಯಣ ಸ್ವಾಮಿ, ಬಿ ಆರ್ ಪಿ ಶಿವಪ್ಪ, ಬಿಸಿಎಂ ಇಲಾಖೆ ವೆಂಕಟೇಶ್, ನರಸಿಂಹಪ್ಪ, ರಾಮಚಂದ್ರ ಸೇರಿದಂತೆ ಹಲವಾರು ಅಧಿಕಾರಿಗಳು ಇದ್ದರು.