“48 ಕ್ರೈಸ್ತ ಜಾತಿಗಳಲ್ಲಿ 33 ಜಾತಿಗಳನ್ನು ಕೈ ಬಿಡಲು ಆಯೋಗದ ನಿರ್ಧಾರವಾಗಿದೆ. ವಡ್ಡ ಕ್ರಿಶ್ಚಿಯನ್ ಸೇರಿದಂತೆ ಕ್ರೈಸ್ತ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಪರಿಶಿಷ್ಟ ಜಾತಿಗಳನ್ನು ಕೈಬಿಡಬೇಕು. ಹಾಗೂ ರಾಜ್ಯದ 7 ಕೋಟಿ ಜನರ ಕಟ್ಟಕಡೆಯ ವ್ಯಕ್ತಿಯವರೆಗೆ ಎಲ್ಲರೂ ಸಮೀಕ್ಷೆಯಲ್ಲಿ ಒಳಗೊಳ್ಳುವವರೆಗೂ ಸಹ ಸಾಮಾಜಿಕ, ಶೈಕ್ಷಣಿಕ ಗಣತಿಯನ್ನು ನಡೆಸಬೇಕು. ಯಾವುದೇ ಕಾಲಮಿತಿಯನ್ನು ಹಾಕುವುದು ಬೇಡ. ಈ ಸಮೀಕ್ಷೆಯಿಂದ ಯಾರೂ ಸಹಾ ಹೊರಗುಳಿಯದಂತೆ ನೋಡಿಕೊಳ್ಳಬೇಕಿದೆ” ಎಂದು ಚಿತ್ರದುರ್ಗ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಒತ್ತಾಯಿಸಿದರು.
ಚಿತ್ರದುರ್ಗದ ಭೋವಿ ಗುರುಪೀಠದಲ್ಲಿ ಭಾನುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, “ರಾಜ್ಯ ಸರ್ಕಾರ ಸಾಮಾಜಿಕ ಶೈಕ್ಷಣಿಕ ಗಣತಿಯನ್ನು ರಾಜ್ಯದಲ್ಲಿ ನಡೆಸುತ್ತಿರುವುದನ್ನು ನಾವು ಸ್ವಾಗತಿಸುತ್ತೇವೆ, ಈ ಸಮೀಕ್ಷೆ ರಾಜ್ಯದಲ್ಲಿ ವಿವಿಧ ಜಾತಿಗಳ ಪ್ರಗತಿಗೆ ಕಾರಣವಾಗಲಿದೆ. ಈ ಸಮೀಕ್ಷೆಯನ್ನು ಯಾರೂ ಸಹಾ ನಿರ್ಲಕ್ಷ್ಯ ಮಾಡಬಾರದು, ಎಲ್ಲರೂ ಗಣತಿದಾರರು ಕೇಳುವ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ನೀಡುವುದರ ಮೂಲಕ ನಿಮ್ಮ ನಿಮ್ಮ ಜಾತಿಯನ್ನು ಗುರುತಿಸಿಕೊಳ್ಳಬೇಕಿದೆ, ರಾಜ್ಯದ ಕೆಲವು ಪ್ರದೇಶಗಳಲ್ಲಿ ಕೆಲಸಕ್ಕಾಗಿ ನಮ್ಮ ರಾಜ್ಯವನ್ನು ಬಿಟ್ಟು ಬೇರೆ ಕಡೆಗಳಲ್ಲಿ ಹಲವಾರು ಜನತೆ ವಲಸೆ ಹೋಗಿದ್ದಾರೆ. ಇಂತಹವರನ್ನು ಸಹಾ ಈ ಗಣತಿಯಲ್ಲಿ ಒಳಪಡಿಸಬೇಕಿದೆ. ಕಟ್ಟಡ ಕೆಲಸಕ್ಕಾಗಿ ಬೆಂಗಳೂರು ಸೇರಿದಂತೆ ಮಹಾನಗರಗಳಿಗೆ ಹೋಗಿದ್ದಾರೆ. ಉತ್ತರ ಕರ್ನಾಟಕದಿಂದ ಕಾಫೀ ತೋಟಗಳಲ್ಲಿ ಕೆಲಸ ಮಾಡಲು ಹೋಗಿದ್ದಾರೆ. ಕೊಪ್ಪಳ, ಬಳ್ಳಾರಿ ಸೇರಿದಂತೆ ನಾನಾ ಜಿಲ್ಲೆಗಳಿಂದ ಜಿಲ್ಲೆಯನ್ನು ಬಿಟ್ಟು ಹೊರಗಡೆ ಹೋಗಿರುತ್ತಾರೆ. ಇಂತಹರನ್ನು ಸಹಾ ಸಮೀಕ್ಷೆ ಮಾಡಲು ಪ್ರತ್ಯೇಕವಾದ ತಂಡವನ್ನು ನೇಮಕ ಮಾಡಬೇಕು” ಸರ್ಕಾರವನ್ನು ಶ್ರೀಗಳು ಆಗ್ರಹಿಸಿದರು.

ಉತ್ತರ ಕರ್ನಾಟಕದಲ್ಲಿ ದೀಪಾವಳಿ, ಮೈಸೂರಿನ ದಸರಾ ನಾಡಹಬ್ಬವಾಗಿ ಪರಿಣಿಮಿಸಿದೆ. ಈ ಸಮಯದಲ್ಲಿ ಊರಿನಿಂದ ಹೊರಗೆ ಹೋದವರು ಸಹಾ ವಾಪಾಸ್ಸು ಬರುತ್ತಾರೆ. ಇಂತಹ ಸಮಯದಲ್ಲಿ ಸರ್ಕಾರ ಮಾಡುವ ಸಮೀಕ್ಷೆ ಸರಿಯಿದೆ. ಇದನ್ನು ಸೂಕ್ಷ್ಮವಾಗಿ ಪರಿಗಣಿಸಿ ಸಮೀಕ್ಷೆಯನ್ನು ಮಾಡಬೇಕಿದೆ. ಈ ಹಿನ್ನಲೆಯಲ್ಲಿ ಸಮೀಕ್ಷೆಯನ್ನು ಮಾಡುವವರಿಗೆ ಕಾಲ ಮಿತಿಯನ್ನು ಹಾಕದೇ ಗಣತಿಯಲ್ಲಿ ರಾಜ್ಯದ 7 ಕೋಟಿ ಜನ ಸಮೀಕ್ಷೆಯಲ್ಲಿ ಭಾಗವಹಿಸುವಂತೆ ಕಾಲವನ್ನು ನೀಡಬೇಕಿದೆ. ರಾಜ್ಯದ ಎಲ್ಲಾ ಜನತೆ ಈ ಸಮಿಕ್ಷೆಯಲ್ಲಿ ಭಾಗವಹಿಸಿದ್ದಾರೆ ಎಂದು ಖಾತರಿಯಾದ ಮೇಲೆ ಸಮೀಕ್ಷೆಯನ್ನು ಪೂರ್ಣ ಮಾಡಲಿ” ಎಂದು ಅಭಿಮತ ವ್ಯಕ್ತಪಡಿಸಿದರು.
“ಡಾ.ಬಿಆರ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಅಡಿಯಲ್ಲಿ ಹಿಂದೂ ಬಿಲ್ ಕೋಡ್ ನಲ್ಲಿ ಬರುವ ಭೋವಿ ಜನಾಂಗವನ್ನು ಸಮೀಕ್ಷೆಯಲ್ಲಿ ಧರ್ಮ-ಹಿಂದೂ, ಜಾತಿ- ಭೋವಿ, ಉಪಜಾತಿ-ವಡ್ಡರ ಎಂದು ಬರೆಯಿಸಿ, ಜಾತಿಯ ಪರ್ಯಾಯ ಪದಗಳನ್ನು ಕೋಡ್ ನಂ ಬಿ.23.2 ರಿಂದ ಬಿ.23.10 ರವರಿಗೆ ನಮೂದಿಸಬೇಕು” ಎಂದು ಸಮೀಕ್ಷೆಯಲ್ಲಿ ನಮೂದಿಸುವ ಬಗ್ಗೆ ಮಾಹಿತಿ ನೀಡಿದರು.
“2011ರ ಗಣತಿಯಲ್ಲಿ ಪ.ಜಾತಿ ಸಮಾಜದ ಜನಸಂಖ್ಯೆ 1.08 ಕೋಟಿ ಇತ್ತು ಆದರೆ ನಾಗ ಮೋಹನ್ ದಾಸ್ ಆಯೋಗದ ವರದಿಯಲ್ಲಿ ಪರಿಶಿಷ್ಟ ಜಾತಿಯವರ ಸಮೀಕ್ಷೆಯನ್ನು ಮಾಡುವಾಗ 1.05 ಕೋಟಿ ಎಂದು ತೋರಿಸಿದ್ದಾರೆ, ಇದು ಸರಿಯಾದ ಸಮೀಕ್ಷೆಯಲ್ಲಿ ಹತ್ತು ವರ್ಷದಲ್ಲಿ ಪರಿಶಿಷ್ಟ ಜಾತಿ ಸಮುದಾಯದವರು ಕನಿಷ್ಠ 25ಲಕ್ಷ ಹಾಗೂ ಭೋವಿ ಸಮುದಾಯ ಕನಿಷ್ಠ 3 ರಿಂದ 5 ಲಕ್ಷದವರೆಗೆ ಜನಸಂಖ್ಯೆಯಷ್ಟದರೂ ಏರಿಕೆಯಾಗಿರುತ್ತದೆ. ಆದರೆ ಆಯೋಗ ಕಡಿಮೆ ಜನಸಂಖ್ಯೆಯನ್ನು ತೋರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಯತ್ನಾಳ್ ಶಾಸಕ ಸ್ಥಾನ ವಜಾ ಮಾಡಲು ದಲಿತ ಹಕ್ಕುಗಳ ಆಂದೋಲನ ಸಮಿತಿ ಆಗ್ರಹ
“ಆದರೆ ಈ ಬಾರಿಯ ಸಮೀಕ್ಷೆಯಲ್ಲಿ ಈ ರೀತಿಯಾಗದಂತೆ ನೋಡಿಕೊಳ್ಳಬೇಕಿದೆ. ನಮ್ಮ ಸಮುದಾಯದವರೆಲ್ಲರೂ ಜಾತಿ ಕಾಲಂ ನಲ್ಲಿ ಭೋವಿ ಅಥವಾ ವಡ್ಡರ ಎಂದು ಬರೆಸುವುದರ ಮೂಲಕ ನಮ್ಮ ಒಗ್ಗಟ್ಟು ಪ್ರದರ್ಶನ ಮಾಡಬೇಕಿದೆ. ನಮ್ಮ ಸಮುದಾಯ ಅರೆಅಲೆಮಾರಿಯಾಗಿದ್ದು, ಕೆಲಸದ ನಿಮ್ಮಿತ್ತ ಊರನ್ನು ಬಿಟ್ಟು ಹೋಗಿರುತ್ತಾರೆ. ಈ ಸಮಯದಲ್ಲಿ ಊರಿನಲ್ಲಿ ಇದ್ದು, ಗಣತಿದಾರರು ಬಂದಾಗ ಸರಿಯಾದ ಮಾಹಿತಿ ನೀಡಿ ಭೋವಿ ಸಮುದಾಯದ ಸಂಖ್ಯೆಯನ್ನು ಸರಿಯಾದ ರೀತಿಯಲ್ಲಿ ನಮೂದಿಸಬೇಕಿದೆ ಎಂದು ಸಮುದಾಯಕ್ಕೆ ಕರೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಭೋವಿ ಸಂಘದ ಕಾರ್ಯದರ್ಶಿ ಹೆಚ್.ಲಕ್ಷ್ಮಣ್, ಭೋವಿ ಗುರುಪೀಠದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೌನಹಳ್ಳಿ ಗೋವಿಂದಪ್ಪ ಹಾಜರಿದ್ದರು.