ಏಷ್ಯಾಕಪ್ ಟೂರ್ನಿಯ 14ನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತವು 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲೂ ಪಾಕಿಸ್ತಾನ ತಂಡ ಮತ್ತೆ ಮುಜುಗರಕ್ಕೀಡಾಗಿದ್ದು, ಭಾರತ ತಂಡ ಮತ್ತೆ ತನ್ನ No HandShake policy ಮುಂದುವರೆಸಿದೆ.
ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 171 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ ಆರಂಭಿಕ ಜೋಡಿ ಅಭಿಷೇಕ್ ಶರ್ಮಾ ಮತ್ತು ಶುಭಮನ್ ಗಿಲ್ ಅವರ ಅಬ್ಬರದ ಜೊತೆಯಾಟಕ್ಕೆ ಪಾಕಿಸ್ತಾನ ತಂಡವು ಬೆಚ್ಚಿಬಿದ್ದಿತು. ಅಭಿಷೇಕ್ ಶರ್ಮಾ 39 ಎಸೆತಗಳಲ್ಲಿ 74 ರನ್ ಸಿಡಿಸಿದರು. ಈ ಮೂಲಕ ಭಾರತ ತಂಡವು 18.5 ಓವರ್ಗಳಲ್ಲಿ 174 ರನ್ ಬಾರಿಸಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಗುಂಪು ಹಂತದ ಪಂದ್ಯದಲ್ಲಿಯೂ ಭಾರತದ ಆಟಗಾರರು ಪಾಕ್ ತಂಡದ ಆಟಗಾರರಿಗೆ ಕೈಕುಲುಕಿರಲಿಲ್ಲ. ಅದು ಬಹಳಷ್ಟು ಚರ್ಚೆಗೆ ಗ್ರಾಸವಾಗಿತ್ತು. ಭಾನುವಾರ ನಡೆದ ಸೂಪರ್ ಫೋರ್ ಪಂದ್ಯದ ಟಾಸ್ ಸಂದರ್ಭದಲ್ಲಿ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಫ್ಟ್ ಅವರ ಕೈಕುಲುಕಿದರು. ಆದರೆ ಪಾಕ್ ತಂಡದ ನಾಯಕ ಸಲ್ಮಾನ್ ಆಘಾ ಅವರಿಗೆ ಹಸ್ತಲಾಘವ ನೀಡಲಿಲ್ಲ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಭಾರತ ತಂಡ ಈ ನಿರ್ಧಾರ ತೆಗೆದುಕೊಂಡಿದೆ.
ಭರ್ಜರಿ ಗೆಲುವಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಇನ್ಮುಂದೆ ಉಭಯ ತಂಡಗಳ ನಡುವಣ ಜಿದ್ದಾಜಿದ್ದಿನ ಪೈಪೋಟಿ ಬಗ್ಗೆ ಪ್ರಶ್ನೆ ಕೇಳದಂತೆ ಮನವಿ ಮಾಡಿದರು. ಇದಕ್ಕೆ ಕಾರಣ ಕೊಟ್ಟ ಅವರು, “ಭಾರತ ತಂಡವು ಪಾಕ್ ವಿರುದ್ಧ ಏಕಪಕ್ಷೀಯವಾಗಿ ಪಂದ್ಯ ಗೆಲ್ಲುತ್ತಿದೆ. ಇಲ್ಲಿ ಪ್ರತಿಸ್ಪರ್ಧೆ ಅಥವಾ ಪೈಪೋಟಿ ಎಂಬುದೇ ಇಲ್ಲ. ಪ್ರತಿ ಸಲ ಏಕಪಕ್ಷೀಯವಾಗಿ ನಾವೇ ಗೆಲ್ಲುತ್ತಿರುವಾಗ, ಪೈಪೋಟಿಯ ಮಾತೇ ಬರಲ್ಲ. ಹೀಗಾಗಿ ನೀವೆಲ್ಲರೂ ಈ ‘ಪೈಪೋಟಿ’ಯ ಬಗ್ಗೆ ಪ್ರಶ್ನೆಗಳನ್ನು ಕೇಳುವುದನ್ನು ನಿಲ್ಲಿಸಬೇಕು” ಎಂದು ಮಾಧ್ಯಮದವರನ್ನು ಕೋರಿದರು.