ಮೈಸೂರು ಜಿಲ್ಲೆ, ಸರಗೂರು ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯದ ಭವನದಲ್ಲಿ ಭಾನುವಾರದಂದು ಬಲಗೈ ಸಮಾಜದ ಪರಿಶಿಷ್ಟ ಜಾತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಧರ್ಮದ ಕಾಲಂನಲ್ಲಿ ‘ಬೌದ್ಧ’ ಎಂದು ನಮೂದಿಸುವಂತೆ ಕರೆಕೊಟ್ಟರು.
“ರಾಜ್ಯ ಸರಕಾರ ಸೆ.22 ರಿಂದ ಅ.7 ರವರೆಗೆ ನಡೆಸಲಿರುವ ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಅಭಿಮಾನಿಗಳು ಹಾಗೂ ಅನುಯಾಯಿಗಳು ಧರ್ಮದ ಕಾಲಂನಲ್ಲಿ ಬೌದ್ಧ ಹಾಗೂ ಜಾತಿ ಕಾಲಂನಲ್ಲಿ ಹೋಲಯ ಎಂದು ಬರೆಸುವಂತೆ ವಿನಂತಿಸಿದರು. ಪರಿಶಿಷ್ಟ ಜಾತಿಯವರು ಬೌದ್ಧ ಎಂದು ಬರೆಸಿದಲ್ಲಿ ಕೇಂದ್ರ ಸರಕಾರದ ಆದೇಶದಂತೆ ಮೀಸಲಾತಿಗೆ ಯಾವುದೇ ತೊಂದರೆಯಾಗುವುದಿಲ್ಲ. ಈ ಬಗ್ಗೆ ದಲಿತಪರ ಸಂಘಟನೆಗಳು ಹಳ್ಳಿ ಹಳ್ಳಿಗಳಲ್ಲಿ ಪ್ರಚಾರ ಮಾಡಿ ಸಮೀಕ್ಷೆಯ ಕಾಲಂ 8 ರಲ್ಲಿನ 6ನೇ ಕ್ರಮ ಸಂಖ್ಯೆಯಲ್ಲಿ ಬೌದ್ಧ ಎಂದು ತಪ್ಪದೇ ಬರೆಸಲು ಮಾರ್ಗದರ್ಶನ ಮಾಡಬೇಕು” ಎಂದು ತಿಳಿಸಿದರು.
ಇದೇ ತಿಂಗಳ 22 ರಿಂದ ಸಮೀಕ್ಷೆ ನಡೆಸಲಾಗುತ್ತಿದ್ದು, ಅಂಬೇಡ್ಕರ್ ಅವರ ಅನುಯಾಯಿಗಳಾದ ನಾವು ಅಂಬೇಡ್ಕರ್ ಅವರು ಹಿಂದೂ ಧರ್ಮ ತ್ಯಜಿಸಿ ನಮ್ಮ ಮೂಲ ಧರ್ಮವಾದ ಬೌದ್ಧ ಧರ್ಮ ಅಪ್ಪಿಕೊಂಡರು. ಹಾಗಾಗಿ, ಅವರ ಮಾರ್ಗದಲ್ಲಿ ನಾವೆಲ್ಲರೂ ಸಾಗುತ್ತಾ ಅಂಬೇಡ್ಕರ್ ಆಶಯದಂತೆ ನಮ್ಮ ಧರ್ಮಕ್ಕೆ ಮರಳಿ ಹೋಗಬೇಕಿದೆ. ಈ ಹಿಂದೆ ನಡೆದ ಸಮೀಕ್ಷೆಯಲ್ಲಿ ಗೊಂದಲ ಉಂಟಾಗಿತ್ತು. ಜಾಗೃತಿ ಮೂಡಿಸುವಲ್ಲಿ ವಿಫಲರಾದೆವು. ಈಗಿನ ಸಮೀಕ್ಷೆಯಲ್ಲಿ ಧರ್ಮದ ಕಾಲಂ 6ರಲ್ಲಿ ಬೌದ್ಧ ಧರ್ಮ ಎಂದು ಜಾತಿಯ ಕಾಲಂನಲ್ಲಿ ಹೊಲಯ ಎಂದು ದಾಖಲಿಸಬೇಕು ಎಂದರು.

ಮೈಸೂರು ನಗರಪಾಲಿಕೆ ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ “ಈ ಹಿಂದೆ ನಡೆದ ಪರಿಶಿಷ್ಟ ಜಾತಿ ಸಮೀಕ್ಷೆಯಲ್ಲಿ ನಮಗೆ ಅನ್ಯಾಯವಾಗಿದೆ. ಅತಿ ಹೆಚ್ಚಾಗಿ ರಾಜ್ಯದಲ್ಲಿ ಬಲಗೈ ಸಮುದಾಯ ವಾಸಿಸುತ್ತಿದೆ. ಪಟ್ಟಣ ಪ್ರದೇಶದಲ್ಲಿ ವಾಸಿಸುವ ಜನರು ತಮ್ಮ ಜಾತಿ ಹೇಳಲು ಹಿಂಜರಿದ ಪರಿಣಾಮ ದಾಖಲೆಯಲ್ಲಿ ಬಲಗೈ ಸಮುದಾಯದ ಜನಸಂಖ್ಯೆ ಕಡಿಮೆ ಬಂದಿದೆ. ಈ ಸಮೀಕ್ಷೆಯಲ್ಲಿ ಹಾಗೆ ಆಗಬಾರದು. ಈ ಹಿಂದೆ ಹಿಂದೂ ಧರ್ಮ ಎಂದು ಬರೆಸಿದ್ದರು, ಹಿಂದೂ ಪದವನ್ನು ಬದಲಾಯಿಸಿ ಇನ್ನು ಮುಂದೆ ಸಮೀಕ್ಷೆಯಲ್ಲಿ ಜನರು ಧರ್ಮದ ಕಾಲಂನಲ್ಲಿ ಬೌದ್ಧ ಧರ್ಮ ಎಂದು ಬರೆಸಬೇಕು. ಧರ್ಮದ ಕಾಲಂನಲ್ಲಿ ಬೌದ್ಧ ಧರ್ಮ ಎಂದು ಬರೆಸಿದರೆ ಯಾವುದೇ ತೊಂದರೆಗಳು ಆಗುವುದಿಲ್ಲ. ಸರ್ಕಾರದಿಂದ ಸಿಗುವ ಸೌಲಭ್ಯಗಳು ಮತ್ತು ಮೀಸಲಾತಿ ಮುಂದುವರೆಯುತ್ತದೆ” ಎಂದು ಹೇಳಿದರು.
ಅಂಬೇಡ್ಕರ್ ಚಿಂತಕ ಮಲ್ಕುಂಡಿ ಮಹದೇವಸ್ವಾಮಿ ಮಾತನಾಡಿ ‘ಒಂದು ವೇಳೆ ಪೂರ್ಣ ಪ್ರಮಾಣದಲ್ಲಿ ಬೌದ್ದರೆಂದು ಘೋಷಣೆ ಮಾಡುಕೊಳ್ಳಲು ಇಚ್ಛಿಸುವವರು, ಧರ್ಮದ ಕಾಲಂ ಮತ್ತು ಜಾತಿ ಕಾಲಂನಲ್ಲಿಯೂ ಬೌದ್ಧ ಎಂದೇ ನಮೂದಿಸಬಹುದು. ಈ ಮೂಲಕ ಧಾರ್ಮಿಕ ಸ್ವಾತಂತ್ರ್ಯವನ್ನು ಬಳಸಿಕೊಂಡು ಶಿಕ್ಷಣ, ಉದ್ಯೋಗ, ರಾಜಕೀಯ ಮೀಸಲಾತಿ ಹಕ್ಕುಗಳನ್ನು ಪಡೆಯಬಹುದಾಗಿದೆ. ಜಾತಿ, ಅಸ್ಪೃಶ್ಯತೆಯ ಕರಾಳತೆಯಿಂದ ಮುಕ್ತರಾಗಿ, ಗೌರವಯುತ ಬದುಕು ಕಟ್ಟಿಕೊಳ್ಳಲು ಅವಕಾಶ ಲಭ್ಯವಾಗಲಿದೆ’ ಎಂದು ತಿಳಿಸಿದರು.
ಈ ವಿಶೇಷ ಸುದ್ದಿ ಓದಿದ್ದೀರಾ? ಜಾನಪದ ತವರೂರು ಚಾಮರಾಜನಗರದಲ್ಲಿಲ್ಲ ಈ ಬಾರಿಯ ದಸರಾ; ಕಲಾವಿದರ ಮರೆತ ಸರ್ಕಾರ
ಸಭೆಯಲ್ಲಿ ಹೈರಿಗೆ ಶಿವರಾಜು, ಇಟ್ನ ರಾಜಣ್ಣ, ಅಂತರಸಂತೆ ಬುದ್ಧ ವಿಹಾರ ಗೌತಮ ಬಂತೇಜಿ, ಪುರಸಭೆ ಸದಸ್ಯ ಎಚ್. ಸಿ. ನರಸಿಂಹಮೂರ್ತಿ, ನಂಜಪ್ಪ, ತುಂಬಲ ರಾಮಣ್ಣ, ಮಹಾಸಭಾ ಕಾರ್ಯದರ್ಶಿ ಭೀಮನಹಳ್ಳಿ ಸೋಮೇಶ್, ಮಾಜಿ ಅಧ್ಯಕ್ಷ ಶಿವಣ್ಣ, ಮುದ್ದಮಲ್ಲಯ್ಯ, ಸೊಗಳ್ಳಿ ಶಿವಣ್ಣ, ಪುಟ್ಟಯ್ಯ, ಬಸವರಾಜು, ಸದಾಶಿವ, ಅಂಬೇಡ್ಕರ್ ಭವನ ಟ್ರಸ್ಟ್ ಅಧ್ಯಕ್ಷ ಸಣ್ಣಸ್ವಾಮಿ, ದಸಂಸ ಅಂಬೇಡ್ಕರ್ ವಾದ ತಾಲೂಕು ಸಂಚಾಲಕ ಕೂಡಗಿ ಗೋವಿಂದರಾಜು, ಅನುಷಾ, ಅಂಬೇಡ್ಕರ್ ಟ್ರಸ್ಟ್ ಅಧ್ಯಕ್ಷ ನಾಗರಾಜ್, ಕಾಡು ಮನೆ ಪ್ರಸನ್ನ, ಚನ್ನೀಪುರ ಮಲ್ಲೇಶ್, ತುಂಬಸೋಗೆ ನಾಗಣ್ಣ, ಅಣ್ಣಯ್ಯ ಸ್ವಾಮಿ, ಹುನಗಹಳ್ಳಿ ಗೋವಿಂದ, ಮಲ್ಲೇಶ್, ರಮೇಶ್, ಚೌಡಹಳ್ಳಿ ಜವರಯ್ಯ, ಮೂರ್ತಿ, ಗೋಪಾಲ್, ಚಿಕ್ಕದೇವ, ರವಿನೆನಪು, ಈಶ್ವರ್,ಜಿವಿಕ ಉಮೇಶ್, ಎಂ ಡಿ ಮಂಚಯ್ಯ, ಚನ್ನ ಸೇರಿದಂತೆ ಇನ್ನಿತರರು ಇದ್ದರು.