ಧಾರಾಕಾರ ಮಳೆಯಿಂದಾಗಿ ಗೋಡೆ ಕುಸಿದು ಬಾಲಕಿಯೊಬ್ಬಳು ಮೃತಪಟ್ಟಿದ್ದು, ಇನ್ನೂ ನಾಲ್ವರು ಮಕ್ಕಳು ಗಂಭೀರ ಗಾಯಗೊಂಡಿರುವ ಘಟನೆ ಜಿಲ್ಲೆಯ ಯಡ್ರಾಮಿ ಪಟ್ಟಣದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
ಸಾನಿಯಾ ಸೈಪನಸಾಬ್ ತಾಂಬೋಳಿ (16) ಮೃತ ಬಾಲಕಿ. ಘಟನೆಯಲ್ಲಿ ಮೃತಳ ಸಹೋದರಿ ಮತ್ತು ಸಹೋದರರಾದ ಮಹಿಬೂಬ್ ತಾಂಬೋಳಿ, ನಿಶಾದ್ ತಾಂಬೋಳಿ, ಆಯಿಷಾ ತಾಂಬೋಳಿ ಹಾಗೂ ರಮಜಾನಬಿ ತಾಂಬೋಳಿ ಕಟ್ಟಡದ ಅವಶೇಷಗಳಲ್ಲಿ ಸಿಲುಕಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಭಾರೀ ಮಳೆಯಿಂದ ಗೋಡೆ ಕುಸಿದು ಐವರು ಮಕ್ಕಳು ಅವಶೇಷಗಳಲ್ಲಿ ಸಿಲುಕಿದ್ದರು. ನಾಲ್ವರನ್ನು ತಕ್ಷಣ ಹೊರ ತೆಗೆಯಲಾಗಿದೆ. ಸಾನಿಯಾಳನ್ನು ಹೊರತೆಗೆದಲು ತಡವಾದ ಕಾರಣ ಆಕೆ ಗಂಭೀರವಾಗಿ ಗಾಯಗೊಂಡಳು. ತಕ್ಷಣವೇ ತಾಲ್ಲೂಕು ಆಸ್ಪತ್ರೆಗೆ ರವಾನಿಸಿದರೂ ಅಲ್ಲಿ ವೈದ್ಯರಿಲ್ಲದ ಕಾರಣ ಚಿಕಿತ್ಸೆ ದೊರೆಯದೆ ಸಾನಿಯಾ ಮೃತಪಟ್ಟಿದ್ದಾಳೆ’ ಪ್ರತ್ಯಕ್ಷದರ್ಶಿಗಳು ಎಂದು ಹೇಳಿದ್ದಾರೆ.

ಯಡ್ರಾಮಿ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೇ ಬಾಲಕಿ ಸಾವಿಗೀಡಾಗಿದ್ದು, ಯಡ್ರಾಮಿ ತಾಲೂಕು ಕೇಂದ್ರವಾಗಿದ್ದರೂ ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಸೌಲಭ್ಯಗಳಿಲ್ಲ. ವೈದ್ಯರು ಇಲ್ಲದಿರುವ ಕಾರಣ ಬಡ ಕುಟುಂಬದ ಮಗಳು ಅನ್ಯಾಯವಾಗಿ ಸಾವಿಗೀಡಾಗಿದ್ದಾಳೆ. ಸ್ಥಳೀಯ ಶಾಸಕರು, ಜಿಲ್ಲೆಯ ಹಾಗೂ ತಾಲ್ಲೂಕು ಅಧಿಕಾರಿಗಳು ಕೂಡಲೇ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ನೀಡಿ ಕನಿಷ್ಠ 25 ಲಕ್ಷ ಪರಿಹಾರ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಚೆಂಡು ಹೂವು ಕೃಷಿಯಲ್ಲಿ ಖುಷಿ ಕಂಡ ಬಿಎಸ್ಸಿ ಪದವೀಧರ
ಈ ಸಂದರ್ಭದಲ್ಲಿ ಅಮೀರ್ ಪಟೇಲ್ ಚಿಂಚೋಳಿ, ಲಾಡ್ಲೆಸಾಬ್ ಮನಿಯಾರ್, ಶಬ್ಬೀ ಉಲ್ಲಾ ದಖನಿ, ವಾಹೀದ್ ಖುರೇಷಿ, ಇಸ್ಮಾಯಿಲ್ ಖುರೇಷಿ, ವಿಶ್ವನಾಥ್ ಪಾಟೀಲ್, ರಿಯಾಜ್ ಚೌಧರಿ, ಇಬ್ರಾಹಿಂ ಚೌಧರಿ, ಫತ್ರುದ್ದೀನ್ ತಾಂಬೋಳಿ, ರಹೀಮ್ ಪಾಶಾ ಹೊಸಮನಿ ಸೇರಿದಂತೆ ಅನೇಕರು ಹಾಜರಿದ್ದರು.