ನಿಸರ್ಗದಲ್ಲಿರುವ ನೀರು, ಗಾಳಿಯು ಮಲಿನಗೊಳ್ಳುವಿಕೆ, ಕಾಡು ನಾಶದ ಹಿಂದೆ ಸರ್ಕಾರದ ನಿರ್ಲಕ್ಷ್ಯ ಹಾಗೂ ಕಾರ್ಪೋರೆಟ್ ಕಂಪನಿಗಳ ದುರಾಸೆಯೇ ಪ್ರಮುಖ ಕಾರಣವಾಗಿದೆ. ಪ್ರಕೃತಿ ಸಂರಕ್ಷಣೆ ನಮ್ಮೆಲ್ಲರ ಮುಖ್ಯ ಗುರಿಯಾಗಬೇಕು. ಅದಕ್ಕಾಗಿ ನಾವು ನೀವೆಲ್ಲರೂ ಸೇರಿಕೊಂಡು ಬಲ ತುಂಬಬೇಕಾಗಿದೆ ಎಂದು ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ರವರು ಹೇಳಿದರು.
ಅವರು ಉಡುಪಿಯ ಜಗನ್ನಾಥ ಸಭಾಭವನದಲ್ಲಿ ಜೀವನಧಾರೆ ಫೌಂಡೇಶನ್ ಉಡುಪಿ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಜೀವನಧಾರೆ ಫೌಂಡೇಶನ್ ಪರಿಸರವನ್ನು ಸಂರಕ್ಷಿಸುವ ಹಾಗೂ ಪ್ರಕೃತಿ ಬಗ್ಗೆ ಜನಜಾಗೃತಿ ಮೂಡಿಸುವ ಒಂದು ಉತ್ತಮ ಉದ್ದೇಶವನ್ನು ಇಟ್ಟುಕೊಂಡು ಹುಟ್ಟಿಕೊಂಡಿದೆ. ಅದಕ್ಕಾಗಿ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಹೇಳಿದರು.

ಸಂಸ್ಥೆಯ ಸಂಸ್ಥಾಪಕರಾದ ಖಲೀಲ್ ಕೆರಾಡಿ ಮಾತನಾಡಿ, ನೀರಿನಿಂದ ಹರಡುತ್ತಿರುವ ಕಾಯಿಲೆಗಳು, ಕಾಡಿನ ನಾಶದಿಂದ ವಾತಾವರಣದಲ್ಲಿ ಏರುತ್ತಿರುವ ಉಷ್ಣಾಂಶ ಹಾಗೂ ವಿಪರೀತ ಮಳೆಯ ಅಸಮತೋಲನ ಹಾಗೂ ಗಾಳಿಯ ಮಲಿನದಿಂದ ಭಾರತದ ಜನರ ಜೀವಿತಾವಧಿ ಕಡಿತಗೊಳ್ಳುತ್ತಿರುವುದು ಪರಿಸರ ರಕ್ಷಣೆಯ ಹಾಗೂ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಓದಗಿಸುವ ಮೂಲ ಗುರಿಯನ್ನು ಇಟ್ಟುಕೊಂಡು ಜೀವನಧಾರೆ ಫೌಂಡೇಶನ್ ಲೋಕಾರ್ಪಣೆಗೊಂಡಿದೆ ಎಂದು ಹೇಳಿದರು.
ಮುಖ್ಯ ಅತಿಥಿ ಕ್ರಾಂತಿ ಕಲ್ವಾಡಿಕರ್ ಮಾತನಾಡಿ, ಪರಿಸರ ಸಂರಕ್ಷಣೆ ಸಲುವಾಗಿ ಉದ್ಘಾಟನೆಗೊಂಡ ಜೀವನಧಾರೆ ಫೌಂಡೇಶನ್ ಉತ್ತಮ ಪ್ರಾರಂಭವನ್ನೆ ಕಂಡಿದೆ ಮುಂದಿನ ದಿನಗಳಲ್ಲಿ ಜೀವನಧಾರೆ ಫೌಂಡೇಶನ್ ಜೊತೆ ನಾವೆಲ್ಲರೂ ಸೇರಿ ಇಂತಹ ಮಹತ್ಕಾರ್ಯದಲ್ಲಿ ಜೊತೆಗೊಳ್ಳಬೇಕು ಎಂದು ಹೇಳಿದರು.
ಬ್ರಹ್ಮಾವರದ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹ ಸಂಶೋಧಕರಾದ ಧನಂಜಯ ಬಿ ಮಾತನಾಡಿ, ನಾಶವಾಗುತ್ತಿರುವ ಕಾಡುಗಳಿಂದಾಗಿ ಪಕ್ಷಿಗಳು ನಾಶವಾಗುತ್ತಿದೆ. ಪಕ್ಷಿಗಳ ನಾಶದಿಂದ ಕಾಡುಗಳ ಬೆಳವಣಿಗೆ ಕುಂಠಿತಗೊಳ್ಳುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷಕತೆ ವಹಿಸಿದ ಬ್ರೈನ್ ಫೌಂಡೇಶನ್ ಬೀದರ್ ಇದರ ಸಂಸ್ಥಾಪಕರಾದ ನಂದಾದೀಪ ಬೋರಳೆ ಮಾತನಾಡಿ ಪರಿಸರ ರಕ್ಷಣೆಯ ಹೊಣೆ ನನ್ನ ಮಗನಿಗೆ ನಾನು ನೀಡಿದ ಭವಿಷ್ಯದ ಉಡುಗೊರೆಯಾಗಿದೆ. ಆ ಕಾರಣದಿಂದಲೇ ಬ್ರೈನ್ ಫೌಂಡೇಶನ್ ನ್ನು ಹುಟ್ಟು ಹಾಕಿ ಇಂದು ಜೀವನಧಾರೆ ಫೌಂಡೇಶನ್ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪ ವಲಯ ಅರಣ್ಯಾಧಿಕಾರಿ ಶಿವಾನಂದ, ಎಸ್.ಡಿ ಎಮ್.ಸಿ ಸಮನ್ವಯ ಕೇಂದ್ರ ವೇದಿಕೆ (ರಿ) ಜಿಲ್ಲಾಧ್ಯಕ್ಷರಾದ ಅಬ್ದುಲ್ ಸಲಾಮ್ ಚಿತ್ತೂರ್, ಶಾಂತಿ ಪೆರೇರಾ ಇನ್ನರ್ ವ್ಹೀಲ್ ಕ್ಲಬ್ ಕಲ್ಯಾಣಪುರ, ಕುಸುಮಾ ಮನೋಜ್ ಅಧ್ಯಕ್ಷರು ನವಕಿರಣ್ ನವತಾರೆ ಸೇವಾ ವೇದಿಕೆ ಬ್ರಹ್ಮಾವರ, ಮೌಲಾನಾ ಮುಹಮ್ಮದ್ ತೌಫೀಕ್, ದಸಂಸ (ಬೀಮ ಘರ್ಜನೆ) ಸಂಚಾಲಕರಾದ ಉದಯಕುಮಾರ್ ತಲ್ಲೂರ್, ಅತ್ತೀಬಿಯಾನ್ ಟಿವಿ ಹೈದರಾಬಾದ್ ಇದರ ಅಧ್ಯಕ್ಷರಾದ ನಕ್ವಾ ರಹಮತುಲ್ಲಾಹ್. ಹೋರಾಟಗಾರ ಶೇಖರ್ ಹಾವಂಜೆ, ಇಲಿಯಾಸ್ ಖಾನ್, ವಿಠ್ಠಲ ಸಾಲಿಕೇರಿ, ಮೋಹನ್ ಸಾಲಿಕೇರಿ ಉಪಸ್ಥಿತರಿದ್ದರು. ನೈನಾ ಶೆಟ್ಟಿ ನಿರೂಪಿಸಿದರು. ಉಮೇಶ್ ಪೂಜಾರಿ ಧನ್ಯವಾದವಿತ್ತರು.