ಕಲಬುರಗಿ ಜಿಲ್ಲೆಯಲ್ಲಿನ ಅತಿವೃಷ್ಟಿ ಹಾನಿಯ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಂಗಳವಾರ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ, ಮಳೆ ಹಾನಿಯ ಮಾಹಿತಿ ಪಡೆದು ಸಮರೋಪಾದಿಯಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದರು.
ʼಜಿಲ್ಲೆಯ 7 ತಾಲ್ಲೂಕುಗಳ ಜಂಟಿ ಸಮೀಕ್ಷೆ ವರದಿ ಸಿದ್ದವಾಗಿದ್ದು, ಇನ್ನೂ 4 ತಾಲ್ಲೂಕುಗಳ ವರದಿ ಸಿದ್ಧಗೊಳ್ಳುತ್ತಿದೆ. ಕಲಬುರಗಿ ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ಶೇ50 ರಷ್ಟು ಹೆಚ್ಚು ಮಳೆಯಾಗಿದೆ. ಅಲ್ಲದೆ ಕಳೆದ ನಾಲ್ಕೈದು ದಿನಗಳಲ್ಲಿ ವ್ಯಾಪಕ ಮಳೆ ಸುರಿದಿದೆʼ ಎಂದು ಮಾಹಿತಿ ನೀಡಿದರು.
ʼಕಾಳಜಿ ಕೇಂದ್ರಗಳನ್ನು ತೆರೆದು, ಅಗತ್ಯ ಸೌಲಭ್ಯಗಳು ದೊರೆಯುವಂತೆ ನೋಡಿಕೊಳ್ಳಬೇಕು. ಅಪಾಯದ ಸ್ಥಿತಿಯಲ್ಲಿರುವ ಮನೆಗಳಲ್ಲಿನ ನಿವಾಸಿಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಬೇಕು. ಜಾನುವಾರುಗಳಲ್ಲಿ ಉಂಟಾಗುವ ರೋಗಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ನದಿ ದಂಡೆಗಳಲ್ಲಿನ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಎಚ್ಚರಿಕೆಯ ಕ್ರಮ ಮತ್ತು ಜಾಗೃತಿ ಕೈಗೊಳ್ಳಬೇಕು. ಟಾರ್ಪಲ್, ಆಹಾರ ಪೊಟ್ಟಣ, ಇತ್ಯಾದಿ ಅಗತ್ಯ ವಸ್ತುಗಳ ಬಗ್ಗೆ ಮಾಹಿತಿ ನೀಡಬೇಕು, ಅವುಗಳನ್ನು ಪೂರೈಸಲು ಕ್ರಮ ವಹಿಸಲಾಗುವುದುʼ ಎಂದು ತಿಳಿಸಿದರು.
ʼಬೆಳೆ ಹಾನಿಯ ಕುರಿತು ಪರಿಹಾರ ಪೋರ್ಟಲ್ನಲ್ಲಿ ನಿಖರವಾಗಿ ದಾಖಲಾಗುವಂತೆ ನೋಡಿಕೊಳ್ಳಬೇಕು. ಅಧಿಕಾರಿಗಳು ನಿರಂತರವಾಗಿ ಜನರ ಸಂಪರ್ಕದಲ್ಲಿ ಇರಬೇಕು ಹಾಗೂ ಹಾನಿ ಪ್ರದೇಶಕ್ಕೆ ಸತತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಜನರ ಜೀವ ಹಾನಿಗೆ, ಮನೆಗಳ ಹಾನಿಗೆ ತಕ್ಷಣ ಪರಿಹಾರ ಒದಗಿಸಬೇಕು. ಸಂಕಷ್ಟದಲ್ಲಿರುವ ಜನತೆಗೆ ಉದಾರ ಮನೋಭಾವದೊಂದಿಗೆ ಸ್ಪಂದಿಸಬೇಕುʼ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಹಾನಿಗೊಳಗಾದ ರಸ್ತೆ, ಸೇತುವೆ ಮುಂತಾದ ಮೂಲಭೂತ ಸೌಕರ್ಯಗಳ ದುರಸ್ತಿ ಮತ್ತು ಮರುನಿರ್ಮಾಣಕ್ಕೆ NDRF, SDRF ನಿಧಿಗಳನ್ನು ಹೊಂದಿಸಿ ಬಳಕೆ ಮಾಡಿಕೊಳ್ಳಬೇಕು. ಶಿಥಿಲಗೊಂಡಿರುವ ಶಾಲೆ, ಅಂಗನವಾಡಿ ಕಟ್ಟಡಗಳ ಬಗ್ಗೆ ಗಮನಹರಿಸಿ, ಅವುಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಮುಂದಿನ ನಾಲ್ಕು ದಿನ ಆರೆಂಜ್ ಅಲರ್ಟ್ ಘೋಷಣೆಯಾಗಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕುʼ ಎಂದು ಹೇಳಿದರು.
ಇದನ್ನೂ ಓದಿ : ಬೀದರ್ | ಗ್ರಾಮದ ಸಮಸ್ಯೆ ಹೇಳಿದ್ರೆ ಬೆದರಿಕೆ ಹಾಕಿದ ಸಿಂಧನಕೇರಾ ಪಿಡಿಒ; ಕ್ರಮಕ್ಕೆ ಆಗ್ರಹ
ವಿಡಿಯೊ ಕಾನ್ಫರೆನ್ಸ್ ಸಭೆಯಲ್ಲಿ ಜಿಲ್ಲಾಧಿಕಾರಿ ಫೌಝಿಯಾ ತರನುಮ್, ಜಿಲ್ಲಾ ಪಂಚಾಯತ್ ಸಿಇಒ ಭಂವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.