ಹೊಸದನ್ನು ಕಲಿಯುವ ಹಾಗೂ ಜ್ಞಾನ ವೃದ್ಧಿಸಿಕೊಳ್ಳುವ ಆಸಕ್ತಿ ಶಿಕ್ಷಕರಲ್ಲೂ ಇರಬೇಕು ಎಂದು ಚಿದಂಬರ ಶಿಕ್ಷಣ ಸಂಸ್ಥೆಯ ನಿರ್ದೇಶಕ ಸ್ವಾತ್ಮಾನಂದಗಿರಿ ಸ್ವಾಮೀಜಿ ಹೇಳಿದರು.
ಬೀದರ್ ನಗರದ ಸದ್ಗುರು ಸಿದ್ಧಾರೂಢ ಮಹಿಳಾ ಪದವಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ, ಬಿ.ಎ, ಬಿ.ಕಾಂ ಹಾಗೂ ಬಿ.ಸಿ.ಎ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ, ʼಶಿಕ್ಷಕರು ಕೂಡ ಜೀವನ ಪರ್ಯಂತ ವಿದ್ಯಾರ್ಥಿ ಆಗಿರಬೇಕಾಗುತ್ತದೆ. ಒಂದು ದಿನ ಪಾಠ ಮಾಡಲು ಕನಿಷ್ಠ ನಾಲ್ಕು ದಿನ ಅಭ್ಯಾಸ ಮಾಡಬೇಕಾಗುತ್ತದೆʼ ಎಂದು ತಿಳಿಸಿದರು.
ಚಿದಂಬರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ಹಾವಗಿರಾವ್ ಮೈಲಾರೆ ಮಾತನಾಡಿ, ʼವಿದ್ಯಾರ್ಥಿಗಳು ಪಠ್ಯದ ಜತೆಗೆ ನೈತಿಕ ಮೌಲ್ಯ ಕಲಿಯಬೇಕು. ಗುರು, ಹಿರಿಯರನ್ನು ಗೌರವಿಸಬೇಕುʼ ಎಂದು ಹೇಳಿದರು.
ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಪ್ರೊ. ಆರ್.ವಿ.ಗಂಗಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಬೇಕು. ಉನ್ನತ ಹುದ್ದೆಗಳನ್ನು ಅಲಂಕರಿಸಲು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಬೇಕುʼ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ನಾಗಪ್ಪ ಜಾನಕನೋರ ಮಾತನಾಡಿ, ʼಪರಿಶ್ರಮ ಯಾವತ್ತೂ ವ್ಯರ್ಥವಾಗುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಪರಿಶ್ರಮ ವಹಿಸಿ ವ್ಯಾಸಂಗ ಮಾಡಬೇಕು. ಉತ್ತಮ ಬದುಕು ಕಟ್ಟಿಕೊಳ್ಳಬೇಕುʼ ಎಂದು ಹೇಳಿದರು.
ಶಿವಕುಮಾರೇಶ ಗುರುಕುಲ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಬಸವರಾಜ ಮ್ಯಾಗೇರಿ, ಶ್ರೀ ಚಂದ್ರಪ್ಪ ಗೌರಶೆಟ್ಟಿ ಪದವಿಪೂರ್ವ ಕಾಲೇಜು ಉಪ ಪ್ರಾಚಾರ್ಯೆ ರಾಧಾ ಬಿ. ಮಾತನಾಡಿದರು.
ಇದನ್ನೂ ಓದಿ : ಬೀದರ್ | ಗ್ರಾಮದ ಸಮಸ್ಯೆ ಹೇಳಿದ್ರೆ ಬೆದರಿಕೆ ಹಾಕಿದ ಸಿಂಧನಕೇರಾ ಪಿಡಿಒ; ಕ್ರಮಕ್ಕೆ ಆಗ್ರಹ
ಶ್ರೀ ಚಂದ್ರಪ್ಪ ಗೌರಶೆಟ್ಟಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಾ. ಚಂದ್ರಪ್ಪ ಭತಮುರ್ಗೆ, ಉಪನ್ಯಾಸಕ ಸೂರ್ಯಕಾಂತ ಐನಾಪುರೆ, ಶ್ರೀಮತಿ ಇಂದಿರಾಬಾಯಿ ಗುರುತಪ್ಪ ಶೆಟಕಾರ್ ಪ್ರೌಢಶಾಲೆ ಮುಖ್ಯಶಿಕ್ಷಕ ಲಕ್ಷ್ಮಣ ಪೂಜಾರಿ, ಡಾ. ಸಂಗಪ್ಪ ತೌಡಿ, ಉಪನ್ಯಾಸಕರಾದ ಈಶ್ವರ ರೆಡ್ಡಿ, ಡಾ.ಪಂಡಿತ ಗಂಗಶೆಟ್ಟಿ, ನಟರಾಜ ಸುತಾರ್, ನೆಹರೂ ಪವಾರ್, ಬಸವರಾಜ ಬಿರಾದಾರ, ರಾಜಶೇಖರ ಸಜ್ಜನ್, ರಾಜಮ್ಮ ನೇಳಗೆ, ಮಂಗಲಾ, ಶ್ರೀಲತಾ, ರಾಖಿ ಕಾಡಗೆ, ವಿಜಯಲಕ್ಷ್ಮಿ, ಶ್ವೇತಾ, ಅಂಬಿಕಾ, ಸಪ್ನಾ ಸ್ವಾಮಿ, ಅರ್ಚನಾ, ವಿಜಯಲಕ್ಷ್ಮಿ ಸ್ವಾಮಿ, ಆಕಾಶ, ಮಧು ಇದ್ದರು. ಸುಕೇಶಿನಿ ನಿರೂಪಿಸಿದರು. ಪ್ರಿಯಾಂಕಾ ಸ್ವಾಗತಿಸಿದರು. ಶಾಂತಮ್ಮ ವಂದಿಸಿದರು.